ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ/ ನಗರದ ಬಿ.ಹೆಚ್. ರಸ್ತೆಯಲ್ಲಿ ಸ್ಪೆಷಲ್ ಅನ್ನಿಸುವಂತಹ ಘಟನೆಯೊಂದು ನಡೆದಿದೆ. ಇಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಮದ್ಯಪಾನ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಉದ್ಯಮಿಯೊಬ್ಬರ ಮೈಮೇಲಿದ್ದ ಬರೋಬ್ಬರಿ 4,25,000 ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾದ ಬಗ್ಗೆ ದೂರು ದಾಖಲಾಗಿದೆ. ದೊಡ್ಡಪೇಟೆ ಪೊಲೀಸರು ಎನ್ಕ್ವೈರಿ ಮಾಡ್ತಿದ್ದಾರೆ.
ಬಿ.ಹೆಚ್. ರೋಡ್ ನಲ್ಲಿ ಹೀಗಾಯ್ತು!
ಮೂಲತಃ ಬೇರೆ ಜಿಲ್ಲೆಯ ತಾಲ್ಲೂಕು ಒಂದರ ನಿವಾಸಿಯಾಗಿರುವ 30 ವರ್ಷದ ವ್ಯಕ್ತಿ 24/05/2026 ರಂದು ತಮ್ಮ ಹೆಂಡತಿ ಮತ್ತು ಮಗುವನ್ನು ನೋಡಲು ಶಿವಮೊಗ್ಗಕ್ಕೆ ಆಗಮಿಸಿದ್ದರು. ಅಂದು ರಾತ್ರಿ 9:00 ಗಂಟೆ ಸುಮಾರಿಗೆ ಬಿ.ಹೆಚ್. ರಸ್ತೆಯಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್ಗೆ ತೆರಳಿ ಮದ್ಯಪಾನ ಮಾಡಿದ್ದರು. ಸ್ವಲ್ಪ ಸಮಯ ಹೊರಗೆ ಓಡಾಡಿಕೊಂಡಿದ್ದ ಅವರು, ರಾತ್ರಿ 11:30ರ ಸುಮಾರಿಗೆ ಮತ್ತೆ ಅದೇ ಬಾರ್ಗೆ ತೆರಳಿ ವಿಪರೀತ ಮದ್ಯಪಾನ ಮಾಡಿ ಪ್ರಜ್ಞೆ ತಪ್ಪಿ ಬಾರ್ನಲ್ಲೇ ಬಿದ್ದಿದ್ದರು. ರಾತ್ರಿ ಬಾರ್ ಮುಚ್ಚುವ ಸಮಯದಲ್ಲಿ, ಬಾರ್ನ ಕ್ಯಾಷಿಯರ್ ಮತ್ತು ಹೆಲ್ಪರ್ ಇಬ್ಬರೂ ಸೇರಿ ಪ್ರಜ್ಞೆ ತಪ್ಪಿದ್ದ ಉದ್ಯಮಿಯವರನ್ನ ಅವರನ್ನು ಎತ್ತಿಕೊಂಡು ಹೋಗಿ ಹೊರಗೆ ಬಿಟ್ಟು ಬಾಗಿಲು ಹಾಕಿಕೊಂಡು ಹೋಗಿದ್ದರು.
ಆದರೆ ಸ್ವಲ್ಪ ಸಮಯದ ನಂತರ ಉದ್ಯಮಿ ಸುಧಾರಿಸಿಕೊಂಡಿದ್ದಾರೆ. ಆಗ ಅವರಿಗೆ ತಮ್ಮ ಬಲಗೈಯಲ್ಲಿದ್ದ 3,10,000 ರೂ. ಮೌಲ್ಯದ 31 ಗ್ರಾಂ ತೂಕದ ಬಂಗಾರದ ಕಡಗ ಹಾಗೂ ಬಲಗೈ ಬೆರಳಿನಲ್ಲಿದ್ದ 1,15,000 ರೂ. ಮೌಲ್ಯದ 10 ಗ್ರಾಂ ತೂಕದ ಎರಡು ಬಂಗಾರದ ಉಂಗುರ ಕಳುವಾಗಿರುವುದು ಗೊತ್ತಾಗಿದೆ. ಹಾಗಾಗಿ ಈ ಸಂಬಂಧ ಮದ್ಯದ ಅಮಲಿನಲ್ಲಿ ಪ್ರಜ್ಞೆ ಇಲ್ಲದಿದ್ದಾಗ ಅಪರಿಚಿತರು ಒಟ್ಟು 4,25,000 ರೂ. ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಕುರಿತು BNS 2023 ರ ಸೆಕ್ಷನ್ 305 ರ ಅಡಿಯಲ್ಲಿ ಕೇಸ್ ದಾಖಲಾಗಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
