ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷಗಳ ಸಂಭ್ರಮದ ಪ್ರಯುಕ್ತ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿರುವ ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮವು ಸಾರ್ವಜನಿಕ ಸಾರಿಗೆಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಶಿವಮೊಗ್ಗ ಜಿಲ್ಲೆಯೊಂದರಿಂದಲೇ ಸುಮಾರು 60 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮಕ್ಕೆ ತೆರಳುತ್ತಿರುವುದರಿಂದ, ಜಿಲ್ಲೆಯ ನೂರಾರು ಸರ್ಕಾರಿ ಹಾಗೂ ಖಾಸಗಿ ಬಸ್ಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಮತ್ತು ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಇಲ್ಲದೆ ರಸ್ತೆಯಲ್ಲೇ ಕಾಯುವಂತಾಗಿದೆ.ವಿಶೇಷವಾಗಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಂಚರಿಸುವ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರತಿದಿನ ಸುಮಾರು 20 ರಿಂದ 25 ಖಾಸಗಿ ಬಸ್ಗಳು ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ ಇಂದು ಕೆಲವೇ ಕೆಲವು ಬಸ್ಗಳು ಮಾತ್ರ ಓಡಾಡುತ್ತಿವೆ. ಲಭ್ಯವಿರುವ ಅಲ್ಪಸ್ವಲ್ಪ ಬಸ್ಗಳಲ್ಲಿ ಅತಿಯಾದ ಜನದಟ್ಟಣೆ ಉಂಟಾಗಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಬಾಗಿಲಲ್ಲಿ ಜೋತಾಡುತ್ತಾ ಸಂಚರಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಸ್ಗಳ ಕೊರತೆಯಿಂದಾಗಿ ಸಂಚಾರ ಸಾಧ್ಯವಾಗದೆ ಅನೇಕ ಜನರು ಅನಿವಾರ್ಯವಾಗಿ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಉಳಿದಿದ್ದಾರೆ.
BSY Event: Passengers Stranded as Buses Diverted
ಇದರ ನಡುವೆ ಪ್ರಸ್ತುತ ಮದುವೆ ಮತ್ತು ಶುಭ ಸಮಾರಂಭಗಳ ಸೀಸನ್ ಆಗಿರುವುದರಿಂದ, ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಬೇಕಾದ ಸಾರ್ವಜನಿಕರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ರಾಜಕೀಯ ಕಾರ್ಯಕ್ರಮದ ಅಬ್ಬರದಲ್ಲಿ ಸಾಮಾನ್ಯ ಜನರ ದೈನಂದಿನ ಅವಶ್ಯಕತೆಗಳು ಮರೆಯಾಗಿದ್ದು, ಬಸ್ ಇಲ್ಲದೆ ಪ್ರಯಾಣಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ.
