ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಾಗರ ರಸ್ತೆಯ ಆಲ್ಕೊಳ ಸಮೀಪದಲ್ಲಿರುವ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ಅಡಿಕೆ ಮಂಡಿಯೊಂದರ ಕಟ್ಟಡದ ಮೇಲ್ಛಾವಣಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗ ಎಪಿಎಂಸಿಯಲ್ಲಿ ನಡೆದ ಘಟನೆ
- ಸಂಪೂರ್ಣ ಕೊಳೆತ ಹಾಗೂ ದುರ್ವಾಸನೆ ಬೀರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
- ಮೃತ ವ್ಯಕ್ತಿಯನ್ನು ಶಿವಮೊಗ್ಗದ ಬೆಂಕಿ ನಗರದ ನಿವಾಸಿ ಆನಂದ್ (38) ಎಂದು ಗುರುತಿಸಲಾಗಿದೆ.
- ಕಳೆದ 15 ವರ್ಷಗಳಿಂದ ಇದೇ ಎಪಿಎಂಸಿ ಆವರಣದಲ್ಲಿ ಹಮಾಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
- ಮೃತ ಆನಂದ್ ಅವರು ಕಳೆದ 5 ವರ್ಷಗಳಿಂದ ಮೂರ್ಛೆ ರೋಗ (ಫಿಟ್ಸ್) ಸಮಸ್ಯೆಯಿಂದ ಬಳಲುತ್ತಿದ್ದರು ಹಾಗೂ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಸಹ ಪಡೆಯುತ್ತಿದ್ದರು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇವರು ವಿಪರೀತವಾಗಿ ಮದ್ಯಪಾನಕ್ಕೆ ದಾಸರಾಗಿದ್ದ ಆನಂದ್ ಮತ್ತು ಇದೇ ಕಾರಣದಿಂದಾಗಿ ತಮ್ಮ ಮನೆಗೂ ತೆರಳದೆ ಎಪಿಎಂಸಿ ಆವರಣದಲ್ಲಿಯೇ ಕಾಲ ಕಳೆಯುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಸುಮಾರು ಒಂದು ವಾರದ ಹಿಂದೆಯೇ ಅಡಿಕೆ ಮಂಡಿಯ ಕಟ್ಟಡದ ಮೇಲೆ ಆನಂದ್ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ನಿನ್ನೆಯಿಂದ ಎಪಿಎಂಸಿ ಆವರಣದಲ್ಲಿ ಕೊಳೆತ ವಾಸನೆ ಬರಲು ಪ್ರಾರಂಭವಾಗಿತ್ತು. ದುರ್ವಾಸನೆಯಿಂದ ಅನುಮಾನಗೊಂಡ ಸ್ಥಳೀಯರು ಹಾಗೂ ಇತರ ಕಾರ್ಮಿಕರು ಸುತ್ತಮುತ್ತ ಹುಡುಕಾಟ ನಡೆಸಿದಾಗ, ಕಟ್ಟಡದ ಟೆರೆಸ್ ಮೇಲೆ ಆನಂದ್ ಅವರ ಮೃತದೇಹ ಇರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಆರಂಭಿಸಿದ್ದಾರೆ.

