Bhadra Dam Incident Today : ಡ್ಯಾಂಗೆ ಇಳಿದಿದ್ದ ಮಗನನ್ನು ರಕ್ಷಿಸುವ ಸಲುವಾಗಿ ನೀರಿಗೆ ಇಳಿದ ಸಂದರ್ಭದಲ್ಲಿ ತಂದೆ ಸಹ ನೀರು ಪಾಲಾಗಿರುವ ಘಟನೆ ಭದ್ರಾ ಜಲಾಶಯದಲ್ಲಿ ಸಂಭವಿಸಿದೆ.

ಭದ್ರಾ ಡ್ಯಾಂನಲ್ಲಿ ನಡೆದ ಘಟನೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ಬಿಆರ್ಪಿಯಲ್ಲಿರುವ ಭದ್ರಾ ಡ್ಯಾಂ ನಲ್ಲಿ ದುರಂತವೊಂದು ಸಂಭವಿಸಿದೆ. ನೀರಿನಲ್ಲಿ ತಂದೆ ಹಾಗೂ ಮಗ ಇಬ್ಬರು ನಾಪತ್ತೆಯಾದ ಘಟನೆ ಸಂಭವಿಸಿದೆ.
ನೀರಿಗೆ ಇಳಿದಿದ್ದ ಮಗನನ್ನು ರಕ್ಷಣೆ ಮಾಡಲು ನೀರಿಗೆ ಇಳಿದಿದ್ದ ತಂದೆಯು ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಇಬ್ಬರು ಭದ್ರಾವತಿಯ ಮೂಲದವರು ಎಂದು ತಿಳಿದುಬಂದಿದೆ.

ಭದ್ರಾವತಿ ಪಟ್ಟಣದ ಭೂತನಗುಡಿಯ ನಿವಾಸಿ ಮಹಮ್ಮದ್ ಜಬೀರ್ ಮತ್ತು ಅವರ ಪುತ್ರ 14 ವರ್ಷದ ಮಹಮ್ಮದ್ ಜವಾದ್ ಮತ್ತು ಕುಟುಂಬ ಭದ್ರಾ ಜಲಾಶಯಕ್ಕೆ ಬಂದಿದ್ದರು.

ಊಟಕ್ಕಾಗಿ ಬಂದಿದ್ದ ಭದ್ರಾವತಿಯ ಕುಟುಂಬ
ಇಲ್ಲಿನ ಹಿನ್ನೀರಿನ ಪ್ರದೇಶದಲ್ಲಿ ಊಟ ಮುಗಿಸಿದ್ದ ಕುಟಂಬಕ್ಕೆ ಆಘಾತ ಎದುರಾಗಿತ್ತು. ಊಟ ಮುಗಿಸಿದ ಮಹಮ್ಮದ್ ಜವಾದ್ ಹಿನ್ನೀರಿಗೆ ಇಳಿದಿದ್ದ. ಈ ವೇಳೆ ಆತನಿಗೆ ನೀರಿನ ಆಳ ಗೊತ್ತಾಗದೇ ನೀರಿನಲ್ಲಿ ಮುಂದಕ್ಕೆ ಹೋಗಿದ್ದ. ಹಿನ್ನೀರಿನ ಸೆಳೆತದ ನಡುವೆ ಮೇಲಕ್ಕೆ ಬರಲಾಗದೆ ಬಾಲಕ ನೀರಲ್ಲಿ ಮುಳಗಲು ಆರಂಭಿಸಿದ್ದ.
ಇದನ್ನು ಗಮನಿಸಿದ ತಂದೆ ಮಹಮ್ಮದ್ ಜಬೀರ್ ನೀರಿಗೆ ಇಳಿದು ಮಗನ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಅವರಿಗೂ ನೀರಿನ ನಿಯಂತ್ರಣ ಸಿಗದೇ, ನೀರುಪಾಲಾಗಿದ್ದಾರೆ.
ಘಟನೆ ಬೆನ್ನಲ್ಲೆ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದು, ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದವರು ದೌಡಾಯಿಸಿ ಇಬ್ಬರನ್ನು ಹುಡುಕುವ ಪ್ರಯತ್ನ ನಡೆಸಿದರು.
ಈ ಮಧ್ಯೆ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಸದ್ಯ ಮಹಮ್ಮದ್ ಜವಾದ್ ಶವ ಪತ್ತೆಯಾಗಿದ್ದು, ಅವರ ರಕ್ಷಣೆಗೆ ತೆರಳಿ ನೀರಿನಲ್ಲಿ ಮುಳಗಿದ ತಂದೆ ಮಹಮ್ಮದ್ ಜಬಿರ್ನ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.
ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸರು ತನಿಖೆ ನಡೆಸ್ತಿದ್ದು , ಠಾಣೆಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.