SHIVAMOGGA | MALENADUTODAY NEWS | ಮಲೆನಾಡು ಟುಡೆ Dec 14, 2024
ಬೆಟ್ಟದ ಮೇಲೊಂದು ಲೇ ಔಟ್ ಮಾಡಿ..ವ್ಯವಸ್ಥೆಗೆ ಅಂಜಿದೊಡೆ ಎಂತಯ್ಯ…ತೀರ್ಥಹಳ್ಳಿಯ ಕೊಪ್ಪರಿಗೆ ಗುಡ್ಡದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೌನವೇಕೆ ? ಜೆಪಿ ಬರೆಯುತ್ತಾರೆ
ಪಶ್ಚಿಮಘಟ್ಟ ಪ್ರದೇಶ ದಿನದಿಂದ ದಿನಕ್ಕೂ ಅತೀ ಸೂಕ್ಷ್ಮ ಪ್ರದೇಶವಾಗಿ ಹೊರ ಹೊಮ್ಮುತ್ತಿದೆ. ಕೇಂದ್ರಸರ್ಕಾರ ಪಶ್ಚಿಮಘಟ್ಟಗಳ ಉಳಿವಿಗಾಗಿ ಕಾನೂನು ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಈ ಕಾನೂನುಗಳು ಬಡಬಗ್ಗರನ್ನು ಒಕ್ಕಲೆಬ್ಬಿಸುತ್ತಿದೆಯೇ ವಿನಃ ಉಳ್ಳವರನ್ನುನ ಚೆನ್ನಾಗಿಯೇ ಕಾಪಾಡುತ್ತಿದೆಯೇ? ಇದು ಬರೀ ಅನುಮಾನವಲ್ಲ, ಕಣ್ಣಿಗೆ ಕಾಣುತ್ತಿರುವ ಹೇಳಲಾಗದ ಸತ್ಯ. ಕೇರಳ ದುರಂತದ ನಂತರ ಎಚ್ಚೆತ್ತ ಕೇಂದ್ರಸರ್ಕಾರ ಪಶ್ಟಿಮಘಟ್ಟ ಉಳಿವಿಗೆ ಬಿಗಿಗೊಳಿಸಿದ ಕಾನೂನುಗಳು ಶ್ರೀಮಂತರ ಬೂಟಿಗೂ ನಾಟುವುದಿಲ್ಲ ಎಂಬ ಪರಿಸ್ಥಿತಿ ಮಲೆನಾಡಲ್ಲೇ ಇದೆ.

ಹೌದು ತೀರ್ಥಹಳ್ಳಿ ತಾಲೂಕು ಪಶ್ಚಿಮಘಟ್ಟ ಪ್ರದೇಶಕ್ಕೆ ತಾಗಿಕೊಂಡಿರುವ ಪುಟ್ಟ ತಾಲೂಕು. ಕಸ್ತೂರಿ ರಂಗನ್ ವರದಿ ಜಾರಿಯಾದ್ರೆ ತಾಲೂಕಿನ ಪರಿಸ್ಥಿತಿ ಅದೋಗತಿಯೇ ಸರಿ. ಆದರೆ ಈ ಸ್ಥಿತಿ ಸಾಮಾನ್ಯ ಜನರಿಗೆ ಮಾತ್ರವಷ್ಟೆ. ಏಕೆಂದರೆ, ಇಲ್ಲಿ ಉಳ್ಳವರು ಬೆಟ್ಟಗಳನ್ನೆ ಕಡಿದು ಲೇಔಟ್ ಮಾಡಿದರೂ ಕೇಳುವವರು ಯಾರಿಲ್ಲ. ಸಾಕ್ಷಿ ಎಂಬಂಥೆ ತೀರ್ಥಹಳ್ಳಿಯ ಹೊರವಲಯದಲ್ಲಿರುವ ಚಿಟ್ಟೆಬೈಲು ಸಮೀಪದ ಕೊಪ್ಪರಿಗೆ ಗುಡ್ಡದ ನೆತ್ತಿಯನ್ನು ವ್ಯವಸ್ಥಿತವಾಗಿ ಸವರಿ ಲೈ ಔಟ್ ನಿರ್ಮಾಣ ಮಾಡಲಾಗಿದೆ. ಲೇ-ಔಟ್ ನಿರ್ಮಾಣಕ್ಕೆ ಕಾನೂನಿನ ಪರೀಧಿಯಲ್ಲಿಯೇ ಅವಕಾಶ ನೀಡಲಾಗಿದೆ. ಆದಾಗ್ಯು ಇಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಶಂಕೆ ತೀರ್ಥಹಳ್ಳಿಯ ನಾಗರಿಕರದ್ದು.
ಬೆಟ್ಟವನ್ನೆ ಕೆತ್ತಿ ಮಣ್ಣು ಹೊಡೆದು ನೆಲ ಸಮ ಮಾಡುತ್ತಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾಣ ಮೌನ ತಾಳಿರುವ ಗುಟ್ಟೇನು ಎಂದು ತೀರ್ಥಹಳ್ಳಿಯ ಜನತೆ ಪ್ರಶ್ನಿಸುತ್ತಿದ್ದಾರೆ. ಕೊಪ್ಪರಿಗೆ ಗುಡ್ಡದ ನೆತ್ತಿಯನ್ನು ಜೆಸಿಬಿ ಯಂತ್ರಗಳ ಮೂಲಕ ಸವರಿ ಸಮತಟ್ಟು ಮಾಡಲಾಗಿದೆ. ಕಳೆದ ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳ ಪಕ್ಕದ ಧರೆಗಳು ಕುಸಿದಿದ್ದು ಕಂಡವರು, ಕೇರಳದ ಸ್ಥಿತಿ ತೀರ್ಥಹಳ್ಳಿಗೂ ಬರುವುದಕ್ಕೆ ಸಮಯ ಜಾಸ್ತಿ ಬೇಕಿಲ್ಲ ಎಂದಿದ್ದರು. ಅಂತಹ ಕಳವಳದ ನಡುವೆ ಬೆಟ್ಟದ ನೆತ್ತಿ ಸವರುತ್ತಿರುವುದು ಗೊತ್ತಿದ್ದೂ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಲ್ಲವೆ ಎಂಬುದು ಅನುಭವಿ ಹಿರಿಯ ವ್ಯಕ್ತಿಗಳ ಅಭಿಪ್ರಾಯ.
ಹಾಗೊಂದು ವೇಳೆ ಇಲ್ಲಿ ಗುಡ್ಡ ಕುಸಿದರೆ, ಬೆಟ್ಟದ ಕೆಳಗಿನ ಹಲಸಿನ ಹಳ್ಳಿ, ತೀರ್ಥಹಳ್ಳಿ ಪಟ್ಟಣ, ನಾಡ್ತಿ, ಶಿರುಪತಿ, ಕಿತ್ತನಗದ್ದೆ, ಬೆಟ್ಟಮಕ್ಕಿ ಇಂದಾವರ ಸೇರಿದಂತೆ ಸುತ್ತಮುತ್ತಲ ಪರಿಸರದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ. 2012 ರಲ್ಲಿ ಮಳೆಗಾಲದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಲಕ್ಷ್ಮಿ ತೀರ್ಥಹಳ್ಳ ಹರಿವು ಕಳೆದುಕೊಂಡಿದೆ. ಕೊಪ್ಪರಿಗೆ ಗುಡ್ಡ ಲ್ಯಾಂಡ್ ಸ್ಲೈಡ್ ಆದ್ರೆ ಕುಶಾವತಿ ನದಿ ಹರಿವು ನಿಲ್ಲುವ ಸಾಧ್ಯತೆಗಳು ಹೆಚ್ಚಿದೆ.
ಕೊಪ್ಪರಿಗೆ ಗುಡ್ಡ ಸರ್ಕಾರಿ ಜಾಗವಲ್ಲ ಎಂಬುದೇ ವಿಪರ್ಯಾಸದ ಸಂಗತಿ. ಯಡೆಹಳ್ಳಿ ಸರ್ವೆ ನಂಬರ್ 51/8 ರಲ್ಲಿ 9.04 ಎಕರೆ, 51/9 ರಲ್ಲಿ 5 ಎಕರೆ, 51/11 ರಲ್ಲಿ 5 ಗುಂಟೆ, 51/14 ರಲ್ಲಿ 10.30 ಎಕರೆ, 51/15 ರಲ್ಲಿ 8.19 ಕರೆ 51/19 ರಲ್ಲಿ 36 ಗಂಟೆ ಸೇರಿ ಒಟ್ಟು 319 ರಲ್ಲಿ 36 ಗಂಟೆ ಸೇರಿ ಒಟ್ಟು 34.10 ಎಕರೆ ಪ್ರದೇಶ ಖಾಸಗಿ ಹಕ್ಕಾಗಿ ಆರ್.ಟಿ.ಸಿಯಲ್ಲಿ ದಾಖಲಾಗಿದೆ.
ಈ ಜಮೀನು ಮಾಲಿಕತ್ವದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಈಗಾಗಲೇ ಖಾಸಗಿ ಹಕ್ಕಿನಲ್ಲಿರುವ ಕೊಪ್ಪರಿಗೆ ಗುಡ್ಡದ ನೆತ್ತಿಯನ್ನು ಸವರಿ ಸಾವಿರಾರು ಲೋಡ್ ಮಣ್ಣು ತೆಗೆಯಲಾಗಿದೆ. ಅರಣ್ಯ ಪರಿಸರ ಹೊಂದಿರುವ ಈ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಈ ಹಿಂದೆ ಇಲ್ಲಿ ಗುಡ್ಡ ಭೂಕುಸಿತವಾಗಿ ದೊಡ್ಡ ಹೊಂಡ ನಿರ್ಮಾಣವಾಗಿದೆ.ಆದರೆ ಇಂತಹ ಪ್ರದೇಶ ಖಾಸಗಿ ಲೇ ಔಟ್ ಆಗಿ ಪರಿವರ್ತನೆಯಾಗುತ್ತಿದ್ದು, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾನೂನು ಕ್ರಮ ಕೈಗೊಳ್ಳದೆ ಕೈ ಚೆಲ್ಲಿರುವ ಬಗ್ಗೆ ಅನುಮಾನಗಳು ಮೂಡುತ್ತಿದೆ. ಕೊಪ್ಪರಿಗೆ ಗುಡ್ಡವಲ್ಲದೆ ಸರ್ಕಾರಿ ಕಾಮಗಾರಿಯ ಹೆಸರಿನಲ್ಲಿ ಭಾರತಿಪುರದ ತಿರುವಿನಲ್ಲಿ ಗುಡ್ಡ ಬಗೆಯಲಾಗಿದೆ. ತೀರ್ಥಹಳ್ಳಿ ಬೈಪಾಸ್ ರಸ್ತೆಗಾಗಿ ಇಲ್ಲಿ ಗುಡ್ಡ ಅಗೆಯಲಾಗಿದೆ. ತೀರ್ಥಹಳ್ಳಿ ಪಟ್ಟಣದ ಸುತ್ತಮತ್ತಲ ಗುಡ್ಡಗಳು ಅಪಾಯದ ಮುನ್ಸೂಚನೆ ನೀಡಿದೆ. ಲೋಕಾಯುಕ್ತ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಬಗೆಯಲಾದ ತೀರ್ಥಹಳ್ಳಿಯ ಗುಡ್ಡಗಳ ಬಗ್ಗೆ ತನಿಖೆ ನಡೆಸಬೇಕಿದೆ.
SUMMARY | An unscientific layout is being constructed in the hilly areas of Thirthahalli.
KEY WORDS | An unscientific layout , hilly areas of Thirthahalli, malenadutoday , allu arjun