SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 3, 2024 | ಮಲೆನಾಡಿನ ಪ್ರಸಿದ್ಧ ದೇವಾಲಯ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಾನದಲ್ಲಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಸಾಗರ ತಾಲೂಕು ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇಗುಲದಲ್ಲಿ ಗುರುವಾರ ದಸರಾ ವೈಭವ ಕಾರ್ಯಕ್ರಮಕ್ಕೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ನವರಾತ್ರಿಯ ಸಂಭ್ರಮ ಇಮ್ಮಡಿಯಾಗಿದೆ ಎಂದರು
ಮಕ್ಕಳಲ್ಲಿ ಜಾತಿ ಪ್ರೇಮ ಮೂಡಬಾರದು. ಇದು ಎಂದಿಗೂ ದೇಶ ಪ್ರೇಮವಾಗುವುದಿಲ್ಲ. ಜಾತಿ- ಧರ್ಮದ ಸಂಕೋಲೆ ತೊರೆದು ಒಳ್ಳೆಯ ಪ್ರಜೆಯಾಗಬೇಕು ಎಂದರೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಮಾತ್ರ ಸಾಧ್ಯ. ಒಂದೇ ಜಾತಿ, ಒಂದೇ ಮತ ಎಂದು ನಾರಾಯಣ ಗುರುಗಳ ಆಶಯವನ್ನು ವೇದಿಕೆ ಮೇಲೆ ಭಾಷಣ ಮಾಡಲಾಗುತ್ತದೆ. ಆದರೆ, ರಾಜಕಾರಣಕ್ಕೆ ಹೋಗಿ ಜಾತಿ, ಧರ್ಮದ ಹೆಸರಿನಲ್ಲಿ ಕಚ್ಚಾಡಿದರೆ, ದೇಶದ ಭವಿಷ್ಯ ಕಟ್ಟಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರು ನನ್ನ ಅವಧಿಯಲ್ಲಿ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿದವರಿಗೆ ಹಕ್ಕುಪತ್ರ ಕೊಡಲಾಗಿತ್ತು. ಅರಣ್ಯ ಭೂಮಿಯ ಸಾಗುವಳಿದಾರರಿಗೆ ತೊಂದರೆಯಾಗಿದೆ. ಎರಡೂ ಇಲಾಖೆಗಳು ಹಿಂದಿನಿಂದ ಮಾಡಿದ್ದ ತಪ್ಪು ಅಮಾಯಕ ರೈತರಿಗೆ ಮರಣಶಾಸನವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡದಿದ್ದಲ್ಲಿ ದೇವರು ಮೆಚ್ಚುವುದಿಲ್ಲ ಎಂದರು.

ಸಿಗಂದೂರು ಚೌಡೇಶ್ವರಿ ಸನ್ನಿಧಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಕಾಲ ದೇವಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ನಡೆಯಲಿದ್ದು,ದೇವಿಗೆ ವಿಶೇಷವಾಗಿ ತೈಲಾಭಿಷೇಕ, ಅಲಂಕಾರ ಪೂಜೆ, ಮಹಾ ಪೂಜೆ, ಗಣಹೋಮ ನಡೆಯಲಿದೆ.