ಮಲೆನಾಡು ಟುಡೆ ಸುದ್ದಿ | ಸಾಗರ: ಕುಡಿತ ಎಂಬುದು ಹಿಡಿತದಲ್ಲಿದ್ದರೆ ತೊಂದರೆಯಿಲ್ಲ. ಆದರೆ, ಅದನ್ನೇ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡರೆ ಒಮ್ಮೊಮ್ಮೆ ಹೀಗೂ ಆಗುತ್ತದೆ ನೋಡಿ! ಮದ್ಯದ ಅಮಲಿನಲ್ಲಿ ಬಂದ ಆಸಾಮಿಯೊಬ್ಬ ತನ್ನ ಲಾರಿಯನ್ನೇ ಕೆರೆಗೆ ಹಾರಿಸಿದ್ದು, ಅದೃಷ್ಟವಶಾತ್ ಸ್ಥಳೀಯರು ಸರಿಯಾದ ಸಮಯಕ್ಕೆ ಬಂದು ಕಾಪಾಡಿದ್ದರಿಂದ ಜೀವ ಉಳಿದಿದೆ.
ಹೌದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಗ್ರಾಮದ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ಸಂಪೂರ್ಣ ಮದ್ಯ ಸೇವಿಸಿದ್ದ ಲಾರಿ ಚಾಲಕ, ವಾಹನದ ಮೇಲಿನ ನಿಯಂತ್ರಣ ತಪ್ಪಿ ನೇರವಾಗಿ ಕೆರೆಗೆ ನುಗ್ಗಿಸಿದ್ದಾನೆ. ಇನ್ನೇನು ಲಾರಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಬೇಕು ಅನ್ನುವಷ್ಟರಲ್ಲಿ, ಅಪಘಾತದ ಶಬ್ದ ಕೇಳಿ ಚಾಲಕನ ಅದೃಷ್ಟಕ್ಕೆ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ.
ಅಪಘಾತದ ಭರಕ್ಕೆ ಲಾರಿಯ ಕ್ಯಾಬಿನ್ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಗ್ರಾಮಸ್ಥರು ಹರಸಾಹಸ ಪಟ್ಟು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಹಾಗಂತ ಪೊಲೀಸರು ಆತನನ್ನು ಸುಮ್ಮನೆ ಬಿಟ್ಟಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದ ಆರೋಪದ ಮೇಲೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
