ಮಲೆನಾಡು ಟುಡೆ ಸುದ್ದಿ / ಭದ್ರಾವತಿ /ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಆರೋಪಿಗಳು ಸಹ ನಾನಾ ದಾರಿ ಹುಡುಕುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಶಿವಮೊಗ್ಗದಲ್ಲಿ ನಿನ್ನೆ ದಿನ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಳ್ಳದಲ್ಲಿ ಅಡಗಿ ಕುಳಿತಿದ್ದ ರೌಡಿಶೀಟರ್ನನ್ನು ಪೊಲೀಸರು ಬಂಧಿಸಿದ ದೃಶ್ಯ ದಾಖಲಾಗಿದೆ. ಈ ದೃಶ್ಯ ಭದ್ರಾವತಿಯಲ್ಲಿ (Bhadravati) ನಡೆದ ಘಟನೆಯದ್ದು ಎನ್ನಲಾಗಿದೆ.
ರೌಡಿಶೀಟರ್ ದಿಲೀಪ್ ಅಲಿಯಾಸ್ ಕುಮಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನಲ್ಲಿ ಅಡಗಿ ಕುಳಿತಿದ್ದ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿದಂತೆ ಒಟ್ಟು 16 ಪ್ರಕರಣಗಳಿದ್ದು, ಆತನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಪ್ರಕರಣವೊಂದರಲ್ಲಿ ಈತನ ವಿರುದ್ಧ ನ್ಯಾಯಾಲಯ ಮೂರು ಬಾರಿ ವಾರಂಟ್ ಜಾರಿಗೊಳಿಸಿತ್ತು. ಹೀಗಾಗಿ ದಿಲೀಪ್ನನ್ನು ಬಂಧಿಸಲು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ತೆರಳಿದ್ದರು. ಆದರೆ ಪೊಲೀಸರಿಂಧ ತಪ್ಪಿಸಿಕೊಂಢ ಆರೋಪಿ, ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ. ಆದರೆ ಪಟ್ಟು ಬಿಡದ ಪೊಲೀಸರಿಗೆ ಹಳ್ಳದ ಬಳಿ ದಿಲೀಪ್ ಇರುವ ಮಾಹಿತಿ ಲಭ್ಯವಾಗಿದೆ. ಆದರೆ ಹಳ್ಳದ ಬಳಿ ಬಂದು ನೋಡಿದಾಗ, ಕುಳೆ ತುಂಬಿ ಅಲ್ಲಿ ಏನು ಸಹ ಕಾಣದಂತಾಗಿತ್ತು. ಈ ಮಧ್ಯೆ ಪೊಲೀಸರು ಮನುಷ್ಯ ಓಡಾಡಿದ ಸುಳಿವಿಗಾಗಿ ಹಸಿರು ಕುಳೆಗಳ ನಡುವೆ ಹುಡುಕಾಡಿದ್ದಾರೆ. ಆಗ ಆತ ಹಳ್ಳದ ಕುಳೆಯ ಅಡಿಯಲ್ಲಿ ಅಡಗಿರುವುದು ಕಾಣಿಸಿದೆ. ನೀರಿನಿಂದ ಗುಳ್ಳೇ ಬರುತ್ತಿರುವುದನ್ನ ನೋಡಿದ ಪೊಲೀಸರು, ಆತ ಅಲ್ಲೆ ಇರುವುದನ್ನ ಖಾತರಿ ಪಡಿಸಿಕೊಂಡಿದ್ದಾರೆ.
ಕೋರ್ಟ್ ವಾರಂಟ್ ಆದ್ದರಿಂದ ಆರೋಪಿಯನ್ನ ಬಿಟ್ಟು ಹೋಗುವ ಸೀನೇ ಇರಲಿಲ್ಲ. ಹೀಗಾಗಿ ಸ್ವತಃ ಪೊಲೀಸರೇ ಬಟ್ಟೆಗಳನ್ನ ಕಳಚಿ ನೀರಿಗೆ ಇಳಿದಿದ್ದಾರೆ. ಕೆಟ್ಟ ನೀರಿನ ನಡುವೆ, ವಿಷ ಜಂತುಗಳ ನಡುವೆ ಹಳ್ಳದ ಮಧ್ಯಕ್ಕೆ ತೆರಳಿದ ಪೊಲೀಸರು ಕುಳೆಯ ನಡುವೆ ಇದ್ದ ಆರೋಪಿಯನ್ನ ವಶಕ್ಕೆ ಪಡೆದು ಅಲ್ಲಿಯೇ ಕೋಳ ಹಾಕಿದ್ದಾರೆ.
ಅಷ್ಟರಲ್ಲಿ ನೀರಿನೊಳಗೆ ಮುಳುಗಿದ್ದ ಆರೋಪಿ ಸುಸ್ತಾಗಿದ್ದ, ಪೊಲೀಸರ ಪ್ರಯತ್ನಕ್ಕೆ ಆತ ಶರಣಾಗಿದ್ದ. ಪೊಲೀಸರ ಸಹಾಯದಿಂದಲೇ ದಡಕ್ಕೆ ಬಂದ ದಿಲೀಪ್ ಅಲಿಯಾಸ್ ಕುಮಾರನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸ, ಸ್ಟೇಷನ್ಗೆ ಕರೆದೊಯ್ದು ಕೋರ್ಟ್ ಸುಪರ್ಧಿಗೆ ಒಪ್ಪಿಸಿದ್ದಾರೆ.
