Ramayana ರಾಮಾಯಣ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ರಾಮ, ಸೀತೆ, ರಾವಣ, ಲಕ್ಷ್ಮಣ, ಕೈಕೇಯಿ ಅಥವಾ ಮಂಥರೆಯಂತಹ ಪ್ರಭಾವಶಾಲಿ ಪಾತ್ರಗಳು. ಬಾಲ್ಯದಲ್ಲಿ ನಮ್ಮನ್ನು ದಿವ್ಯ ಲೋಕಗಳ ಕಲ್ಪನೆ, ಚಮತ್ಕಾರಿ ಅಸ್ತ್ರಗಳು, ಅದ್ಭುತ ಅರಮನೆಗಳು ಹಾಗೂ ಕಣ್ಣು ಕೋರೈಸುವ ವೇಷಭೂಷಣಗಳನ್ನು ಹೊಂದಿದ್ದ ಪೌರಾಣಿಕ ಧಾರಾವಾಹಿಗಳು ವಿಪರೀತವಾಗಿ ಸೆಳೆಯುತ್ತಿದ್ದವು.
ಶಿವಮೊಗ್ಗ: ನಾಗರಪಂಚಮಿಯಲ್ಲಿ ಈತನಿಗೆ ಹಾಲೆರೆಯಲು ನಮಗೆ ಇಷ್ಟವಿಲ್ಲ: ಎಸ್ ಎನ್ ಚನ್ನಬಸಪ್ಪ ಹೀಗಂದಿದ್ಯಾಕೆ?
ನಮ್ಮ ಇಡೀ ಪೀಳಿಗೆಯು ರಾಮಾಯಣವನ್ನು ಓದುತ್ತಾ, ನೋಡುತ್ತಾ ಹಾಗೂ ಕೇಳುತ್ತಾ ಬೆಳೆದಿದೆ. ಶಾಲಾ ದಿನಗಳ ನಾಟಕಗಳಲ್ಲಿಯೂ ಪ್ರತಿಯೊಬ್ಬ ಹುಡುಗಿಯೂ ಸೀತೆಯ ಪಾತ್ರ ಮಾಡಲು ತುದಿಗಾಲಿನಲ್ಲಿರುತ್ತಿದ್ದಳು. ಆದರೆ, ಈ ಬೃಹತ್ ಕಥಾನಕದಲ್ಲಿ ಕೆಲವು ಸ್ತ್ರೀ ಪಾತ್ರಗಳು ಸಂಪೂರ್ಣವಾಗಿ ಉಪೇಕ್ಷೆಗೆ ಒಳಗಾಗಿವೆ. ಮಹಾಕಾವ್ಯದ ಕಥೆಯನ್ನು ಮುನ್ನಡೆಸುವ ಘಟನೆಗಳ ಹಿಂದೆ, ತಮ್ಮದೇ ಆದ ನೋವು, ವಿವೇಕ ಮತ್ತು ತ್ಯಾಗವನ್ನು ಮೌನವಾಗಿ ನುಂಗಿಕೊಂಡ ಉರ್ಮಿಳೆ, ಮಂಡೋದರಿ ಹಾಗೂ ಕೌಸಲ್ಯೆಯರ ಕಥೆಗಳು ರಾಮಾಯಣದ ವಿರಾಟ ದರ್ಶನದಲ್ಲಿ ಎಲ್ಲೋ ಹಿಂದಕ್ಕೆ ಸರಿದುಬಿಟ್ಟಿವೆ. ಆ ಮೂವರು ಅಜ್ಞಾತ ನಾಯಕಿಯರ ವೇದನೆಯ ಒಳನೋಟ ಇಲ್ಲಿದೆ.
ಉರ್ಮಿಳೆ: ಕೇವಲ ಕಾಯುವಿಕೆಯನ್ನೇ ಉಸಿರಾಗಿಸಿಕೊಂಡ ತ್ಯಾಗಮಯಿ
ರಾಮಾಯಣದಲ್ಲಿ ಉರ್ಮಿಳೆಯ ಕಥೆಯನ್ನು ಬಹಳ ಕಡಿಮೆಯಾಗಿ ಹೇಳಲಾಗಿದೆ. ಆಕೆಯ ಬಗ್ಗೆ ಎಷ್ಟು ಬರೆಯಲಾಗಿದೆಯೋ, ಅದಕ್ಕಿಂತಲೂ ಹೆಚ್ಚು ಹೇಳಬೇ ಕಾದದ್ದು ಉಳಿದುಹೋಗಿದೆ. ಯಾರೊಬ್ಬರೂ ಶಾಲಾ ನಾಟಕಗಳಲ್ಲಿ ಉರ್ಮಿಳೆ ಯಾಗಲು ಬಯಸುತ್ತಿರಲಿಲ್ಲ ಎನ್ನುವುದು ವಿಪರ್ಯಾಸಸೀತೆಯ ವನವಾಸವು ತನ್ನೊಟ್ಟಿಗೆ ಅನೇಕ ವಿಷಯಗಳನ್ನು ಹೊತ್ತು ತರುತ್ತದೆ; ಪತಿಯ ಸಾಮೀಪ್ಯ, ಕಾಡಿನ ಕಠಿಣ ಸವಾಲುಗಳು, ಪ್ರಕೃತಿಯ ಒಡನಾಟ ಹಾಗೂ ಅಂತಿಮವಾಗಿ ರಾವಣನೊಂದಿಗಿನ ಯುದ್ಧ. ಇಡೀ ಕಥೆಯುದ್ದಕ್ಕೂ ಸೀತೆ ಕೇಂದ್ರ ಬಿಂದುವಾಗಿರುತ್ತಾಳೆ. ಇತ್ತ ಲಕ್ಷ್ಮಣನ ಸಮರ್ಪಣಾ ಭಾವವೂ ತನ್ನ ಅಣ್ಣನ ಮೇಲಿತ್ತು. 14 ವರ್ಷಗಳ ಕಾಲ ಆತ ರಾಮನಿಗೆ ನೆರಳಿನಂತೆ ಜೊತೆಯಾಗಿರುತ್ತಾನೆ.
ಆದರೆ, ಇವೆಲ್ಲದರ ನಡುವೆ ಉರ್ಮಿಳೆಯ ಪಾಲಿಗೆ ಬಂದದ್ದು ಕೇವಲ ಅಂತ್ಯವಿಲ್ಲದ ಕಾಯುವಿಕೆ ಮಾತ್ರ. ವಿವಾಹದ ನಂತರ ಯಾವ ಸ್ತ್ರೀಯ ಜೀವನವು ತನ್ನ ಪತಿಯೊಂದಿಗೆ ಸುಂದರವಾಗಿ ಆರಂಭವಾಗಬೇಕಿತ್ತೋ, ಅದೇ ಸ್ತ್ರೀಯ ಜೀವನದಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ 14 ವರ್ಷಗಳ ಸುದೀರ್ಘ ಪತಿ-ವಿಯೋಗ ಎದುರಾಗುತ್ತದೆ.ವಾಲ್ಮೀಕಿ ರಾಮಾಯಣದಲ್ಲಿ ಉರ್ಮಿಳೆಯ ಪ್ರಸ್ತಾಪ ಬಹಳ ಸೀಮಿತವಾಗಿದೆ. ವಿವಾಹದ ಸನ್ನಿವೇಶದಲ್ಲಿ ಜನಕ ಮಹಾರಾಜನು ತನ್ನ ಪುತ್ರಿ ಉರ್ಮಿಳೆಯನ್ನು ಲಕ್ಷ್ಮಣನಿಗೆ ವಿವಾಹ ಮಾಡಿಕೊಡುತ್ತಾನೆ.ಆದರೆ, ರಾಮನು ವನವಾಸಕ್ಕೆ ಹೋಗುವುದು ಖಚಿತವಾದಾಗ, ಲಕ್ಷ್ಮಣನೂ ಅಣ್ಣನೊಂದಿಗೆ ತೆರಳಲು ನಿರ್ಧರಿಸುತ್ತಾನೆ. ಆ ಕ್ಷಣದಿಂದ ತ್ಯಾಗ ಮತ್ತು ಮೌನ ಕಾಯುವಿಕೆಯ ಮೂರ್ತಿಯಾಗಿ ಉರ್ಮಿಳೆ ತೆರೆಯ ಮರೆಗೆ ಸರಿಯುತ್ತಾಳೆ.
ಮಂಡೋದರಿ: ಅರಣ್ಯ ರೋಧನವಾದ ರಾಜಕೀಯ ವಿವೇಕದ ದನಿ
ರಾವಣನ ಹೆಸರಿನೊಂದಿಗೆ ಲಂಕಾಪುರಿ, ಅಹಂಕಾರ, ಸೀತಾಪಹರಣ ಹಾಗೂ ರಾಮನೊಂದಿಗಿನ ಯುದ್ಧಗಳು ತಳಕುಹಾಕಿಕೊಳ್ಳುತ್ತವೆ. ಆದರೆ, ರಾವಣನ ಈ ಬೃಹತ್ ವ್ಯಕ್ತಿತ್ವದ ನೆರಳಿನಲ್ಲಿ ಓರ್ವ ಸ್ತ್ರೀ ಇದ್ದಳು, ಆಕೆಗೆ ತನ್ನದೇ ಆದ ವಿವೇಕ, ದೂರದೃಷ್ಟಿ ಮತ್ತು ಅಪಾರವಾದ ವೇದನೆ ಇತ್ತು. ಅವಳೇ ಮಂಡೋದರಿ.ಲಂಕೆಯ ಆ ಇಡೀ ಸಾಮ್ರಾಜ್ಯದೊಳಗೆ, ರಾವಣನು ಸಾಗುತ್ತಿರುವ ಹಾದಿಯು ಖಂಡಿತವಾಗಿಯೂ ವಿನಾಶದತ್ತ ಕೊಂಡೊಯ್ಯುತ್ತಿದೆ ಎಂಬುದನ್ನು ಅರಿತಿದ್ದ ಬೆರಳೆಣಿಕೆಯ ಜನರಲ್ಲಿ ಮಂಡೋದರಿ ಕೂಡ ಒಬ್ಬಳಾಗಿದ್ದಳು. ಆದರೂ, ಶತಮಾನಗಳಿಂದಲೂ ರಾಮಾಯಣದ ಜನಪ್ರಿಯ ಸ್ಮೃತಿಗಳಲ್ಲಿ, ರಾಜಕೀಯ ತಿಳುವಳಿಕೆ ಮತ್ತು ನೈತಿಕತೆಯ ಧ್ವನಿ ಹೊಂದಿದ್ದ ಸ್ತ್ರೀಯಾಗಿ ಮಂಡೋದರಿಯ ಪಾತ್ರವು ದಾಖಲಾಗಲೇ ಇಲ್ಲ.ಮಂಡೋದರಿಯ ಉಪೇಕ್ಷೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ರಾಮಾಯಣದ ಸ್ವರೂಪವನ್ನು ಅರಿಯಬೇಕು.
ಇಡೀ ರಾಮಾಯಣವು ರಾಮ, ಸೀತೆ ಮತ್ತು ರಾವಣನ ಸಂಘರ್ಷದ ಸುತ್ತ ಸುತ್ತುತ್ತದೆ. ಸೀತಾಪಹರಣವು ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವುದರಿಂದ ಸೀತೆ ಕೇಂದ್ರ ಬಿಂದುವಾಗುತ್ತಾಳೆ. ರಾಮನ ವನವಾಸದಿಂದ ಲಂಕಾ ವಿಜಯದವರೆಗಿನ ಘಟನೆಗಳ ಭಾವನಾತ್ಮಕ ಕೇಂದ್ರವಾಗಿ ರಾಮ ಇರುತ್ತಾನೆ. ರಾಮನಿಗೆ ಅತಿ ದೊಡ್ಡ ವಿರೋಧಿಯಾಗಿ ನಿಲ್ಲುವ ಕಾರಣಕ್ಕೆ ರಾವಣನೂ ಕಥೆಯ ಕೇಂದ್ರವಾಗುತ್ತಾನೆ. ಇವರಿಬ್ಬರ ನಡುವೆ ನಡೆಯುವ ಸಂಘರ್ಷದಲ್ಲಿ ಮಂಡೋದರಿಯ ಪಾತ್ರ ಎಷ್ಟೇ ಪ್ರಮುಖವಾಗಿದ್ದರೂ, ಆಕೆ ಕಥೆಯನ್ನು ಮುನ್ನಡೆಸುವ ಪಾತ್ರವಾಾಗುವುದಿಲ್ಲಬದಲಾಗಿ, ಅವಳು ಮುಂಬರುವ ಗಂಡಾಂತರವನ್ನು ಮೊದಲೇ ಕಂಡು, ಅದನ್ನು ತಡೆಯಲು ಯತ್ನಿಸುವ, ಆದರೆ ಅಧಿಕಾರದ ನಿರ್ಧಾರಗಳನ್ನು ಬದಲಾಯಿಸಲಾಗದೆ ಅಸಹಾಯಕಳಾಗುವ ಸಾಮ್ರಾಜ್ಯ ದೊಳಗಿನ ಒಂದು ಮೂಕ ಧ್ವನಿಯಾಗಿಯೇ ಉಳಿದುಬಿಡುತ್ತಾಳೆ. ಇದೇ ಅಂಶವು ಮಂಡೋದರಿಯನ್ನು ಇತರ ಸ್ತ್ರೀ ಪಾತ್ರಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ
ಕೌಸಲ್ಯೆ: ರಾಮನ ವನವಾಸಕ್ಕಿಂತಲೂ ಮಿಗಿಲಾದ ತಾಯಿಯ ತ್ಯಾಗ
ರಾಮಾಯಣದ ಹೆಸರು ಕೇಳಿದೊಡನೆ ನಮ್ಮ ನೆನಪಿನಾಳದಲ್ಲಿ ಮೂಡುವುದು ರಾಮ, ಸೀತೆ, ಕೈಕೇಯಿ ಅಥವಾ ಮಂಥರೆಯಂತಹ ಪಾತ್ರಗಳು. ಅಯೋಧ್ಯೆಯ ಭವಿಷ್ಯವನ್ನೇ ಬದಲಿಸಿದ ಎರಡು ವರಗಳನ್ನು ಕೇಳಿದ ಪಾತ್ರವಾಗಿ ಕೈಕೇಯಿಯನ್ನು ಸ್ಮರಿಸಲಾಗುತ್ತದೆ. ಆ ನಿರ್ಧಾರದ ಹಿಂದಿನ ರೂವಾರಿಯಾಗಿ ಮಂಥರೆಯನ್ನು ನೋಡಲಾಗುತ್ತದೆ. ಪತಿಯೊಂದಿಗೆ ರಾಜಮಹಲನ್ನು ತೊರೆದು ಕಾಡಿನ ಹಾದಿ ಹಿಡಿದ ಸ್ತ್ರೀಯಾಗಿ ಸೀತೆ ನೆನಪಾಗುತ್ತಾಳೆ. ಆದರೆ, ಈ ಎಲ್ಲಾ ಜನಪ್ರಿಯ ಪಾತ್ರಗಳ ನಡುವೆ ಅತಿ ಹೆಚ್ಚು ನೋವುಂಡ ತಾಯಿ ಕೌಸಲ್ಯೆ ಕೂಡ ಇದ್ದಳುಎಂಬುದನ್ನು ಇತಿಹಾಸ ಮರೆತಂತಿದೆ.ಅವಳ ಕಥೆಯು ರಾಮಾಯಣದ ವಿರಾಟ ಕಥಾನಕದಲ್ಲಿ ಎಲ್ಲೋ ಕಳೆದುಹೋಗಿದೆ. ಅಯೋಧ್ಯೆಯ ಹಿರಿಯ ಮಹಾರಾಣಿಯಾದ ಕೌಸಲ್ಯೆ ಎಂದಿಗೂ ತನಗಾಗಿ ಯಾವ ವರವನ್ನೂ ಕೇಳಲಿಲ್ಲ,
ಅಧಿಕಾರಕ್ಕಾಗಿ ಹೋರಾಟ ಮಾಡಲಿಲ್ಲ ಅಥವಾ ಯಾವುದೇ ಕುತಂತ್ರದ ಭಾಗವಾಗಲಿಲ್ಲ. ಇತಿಹಾಸದ ದಿಕ್ಕನ್ನೇ ಬದಲಿಸುವಂತಹ ಯಾವುದೇ ನಿರ್ಧಾರವನ್ನೂ ಆಕೆ ತೆಗೆದುಕೊಳ್ಳಲಿಲ್ಲ. ಆದರೂ ಸಹ, ರಾಮನ ವನವಾಸಕ್ಕೆ ಅತಿ ದೊಡ್ಡ ಬೆಲೆ ತೆತ್ತವರ ಪಟ್ಟಿಯಲ್ಲಿ ಆಕೆಯ ಹೆಸರನ್ನು ಎಲ್ಲಕ್ಕಿಂತ ಮೇಲ್ಭಾಗದಲ್ಲಿ ಇಡಬಹುದು. ಯಾವ ಮಗನು ರಾಜಸಿಂಹಾಸನ ಏರುತ್ತಾನೆ ಎಂದು ಆಕೆ ಕನಸು ಕಂಡಿದ್ದಳೋ, ಅದೇ ಮಗನನ್ನು ತನ್ನ ಕಣ್ಣೆದುರಲ್ಲೇ ಕಾಡಿಗೆ ಕಳುಹಿಸಬೇಕಾದ ದುಸ್ಥಿತಿ ಅವಳಿಗೆ ಎದುರಾಯಿತು. ರಾಮನು 14 ವರ್ಷಗಳ ವನವಾಸವನ್ನು ಕಾಡಿನಲ್ಲಿ ಕಳೆದರೆ, ಕೌಸಲ್ಯೆ ಆ 14 ವರ್ಷಗಳ ಪುತ್ರ ವಿಯೋಗದ ಘೋರ ನರಕವನ್ನು ಅಯೋಧ್ಯೆಯಲ್ಲೇ ಜೀವಿಸಿದಳು.ಕೌಸಲ್ಯೆಯ ಆಳವಾದ ವೇದನೆಯನ್ನು ಅರ್ಥಮಾ ಡಿಕೊಳ್ಳಬೇಕಾದರೆ, ನಾವು ಅಯೋಧ್ಯೆಯು ರಾಮನ ಪಟ್ಟಾಭಿಷೇಕದ ಸಿದ್ಧತೆಯಲ್ಲಿ ಮುಳುಗಿದ್ದ ಆ ಮುಂಜಾನೆಯತ್ತ ಹಿಂತಿರುಗಿ ನೋಡಬೇಕು. ತನ್ನ ಮಗನಿಗೆ ರಾಜ್ಯಾಭಿಷೇಕ ನಡೆಯಲಿದೆ ಎಂದು ಸಂಭ್ರಮದಿಂದ ಸಿದ್ಧತೆಗಳಲ್ಲಿ ತೊಡಗಿದ್ದ ತಾಯಿಗೆ ಕ್ಷಣಾರ್ಧದಲ್ಲಿ ಎದುರಾದ ಆಘಾತವು ಆಕೆಯ ತ್ಯಾಗದ ಪರಾಕಾಷ್ಠೆಯನ್ನು ಸಾರುತ್ತದೆ.
