Shivamogga ಶಿವಮೊಗ್ಗ: ಜಿಲ್ಲೆಯಲ್ಲಿ ಈ-ಚಲನ್ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಂಬರ್ ಪ್ಲೇಟ್ ತೆಗೆದು ಓಡಾಡುತ್ತಿದ್ದ ಸುಮಾರು 74 ವಾಹನಗಳನ್ನು ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಬಿ. ಅವರು ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಶಿವಮೊಗ್ಗ: ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ನೋಡಿ ಸಿಹಿಸುದ್ದಿ
ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಯ ಈ-ಚಲನ್ ದಂಡದಿಂದ ಪಾರಾಗಲು ನಂಬರ್ ಪ್ಲೇಟ್ಗಳನ್ನು ತೆಗೆದು ಸಿಟಿಯಲ್ಲಿ ಸಂಚರಿಸುತ್ತಿರುವುದು ಸಂಚಾರಿ ಪೊಲೀಸರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಇದುವರೆಗೂ ಸರಿಸುಮಾರು 74 ವಾಹನಗಳನ್ನು ಸೀಜ್ ಮಾಡಲಾಗಿದೆ. ಸೀಜ್ ಮಾಡಲಾದ ಕೆಲವೊಂದು ವಾಹನಗಳಲ್ಲಿ ಹಿಂಬದಿಯ ನಂಬರ್ ಪ್ಲೇಟ್ ಅಳವಡಿಸಿ, ಮುಂಭಾಗದ ಜಾಗವನ್ನು ಖಾಲಿ ಬಿಡಲಾಗಿತ್ತು. ಇನ್ನು ಕೆಲವರು ಸಂಚಾರ ನಿಗಾ ಕ್ಯಾಮೆರಾಗಳಿಗೆ ನಂಬರ್ ಕಾಣದಂತೆ ಪ್ಲೇಟ್ಗಳನ್ನು ಮರೆಮಾಚಿ ಸಂಚರಿಸುತ್ತಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಂಚಾರಿ ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಿದ ಎಸ್ಪಿ ನಿಖಿಲ್ ಬಿ. ಅವರು ಬೈಕ್ ಮಾಲೀಕರಿಗೆ ಕಠಿಣ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಹನ ಸವಾರರು ಕಡ್ಡಾಯವಾಗಿ ಮುಂಭಾಗ ಹಾಗೂ ಹಿಂಭಾಗ ಎರಡೂ ಕಡೆ ನಂಬರ್ ಪ್ಲೇಟ್ ಅಳವಡಿಸಿಕೊಂಡೇ ಚಲಿಸಬೇಕು. ಇನ್ನೊಮ್ಮೆ ಇಂತಹ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ, ಅಂತಹ ಸವಾರರ ಮೇಲೆ ನೇರವಾಗಿ ಎಫ್ಐಆರ್ ದಾಖಲಿಸಿ ಎಂದು ಸಂಚಾರಿ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.





