ಮಳೆಗಾಲದಲ್ಲಿ ಜ್ವರ , ಶೀತದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ, ತಾಪಮಾನದಲ್ಲಿ ಬದಲಾವಣೆ ಮತ್ತು ತೇವಾಂಶ ಹೆಚ್ಚಾಗಿರುವುದರಿಂದ ಬ್ಯಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರಗಳು (Fungi) ವೇಗವಾಗಿ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಇದರ ಪರಿಣಾಮವಾಗಿ ವಿವಿಧ ರೀತಿಯ ಸೋಂಕು ಮತ್ತು ಜ್ವರ ಹೆಚ್ಚಾಗುತ್ತವೆ. ಜೊತೆಗೆ ಸೊಳ್ಳೆಗಳು ಹಾಗೂ ಇತರ ಆರೋಗ್ಯ ಸಮಸ್ಯೆ ವಾಹಕ ಕೀಟಗಳ ಸಂಖ್ಯೆಯೂ ಹೆಚ್ಚಾಗುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚುತ್ತದೆ. ಸಾಕಷ್ಟು ಜನರು ಜ್ವರ, ಶೀತದಂತಹ ಸಮಸ್ಯೆಯನ್ನು ಆರಂಭದಲ್ಲಿ ನಿರ್ಲಕ್ಷಿಸುತ್ತಾರೆ, ಆದರೆ ಇದು ಮುಂದುವರೆದು ವಿವಿಧ ಗಂಭಿರ ಆರೋಗ್ಯ ಸಮಸ್ಯೆಗಳಾದ ಡೆಂಗ್ಯೂ, ಟೈಪಾಯ್ಡ್ನಂತಹ ರೋಗಗಳಿಗೆ ಕಾರಣವಾಗಬಹುದು. ಅಥವಾ ಇಂತಹ ಗಂಭೀರ ಸಮಸ್ಯೆಯ ಆರಂಭಿಕ ಲಕ್ಷಣಗಳೂ ಆಗಿರಬಹುದು.
ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ಬಹಳ ಮುಖ್ಯ!
ಡೆಂಗ್ಯೂ ಜ್ವರವು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡುವ ರೋಗವಲ್ಲ. ಡೆಂಗ್ಯೂ ಜ್ವರದಲ್ಲಿ ತೀವ್ರವಾಗಿ ಮೈ ಕೈ ನೋವು, ಕೀಲು ನೋವು ಹಾಗೂ ರಕ್ತದಲ್ಲಿನ ಪ್ಲೇಟ್ಲೆಟ್ಗಳ ಪ್ರಮಾಣ ಕಡಿಮೆಯಾಗುವುದು ಪ್ರಮುಖ ಲಕ್ಷಣಗಳಾಗಿವೆ. ಇತರೆ ಸೋಂಕುಗಳಲ್ಲಿ ಗಂಟಲು ನೋವು, ಕೆಮ್ಮು, ನೆಗಡಿ ಮತ್ತು ಸಾಧಾರಣ ಮೈ ಕೈ ನೋವು ಕಂಡುಬರುತ್ತವೆ. ಡೆಂಗ್ಯೂ ಸಮಸ್ಯೆಗೆ ಮುನ್ನೆಚ್ಚರಿಕೆ ಕ್ರಮಗಳೆಂದರೆ ನಿಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು. ನೀರು ನಿಲ್ಲದಂತೆ , ಸೊಳ್ಳೆಗಳ ಉತ್ಪತ್ತಿಯಾಗದಂತೆ ತಡೆಯುವುದು. ಕಲುಶಿತ ನೀರಿನ, ಆಹಾರ ಸೇವನೆಯನ್ನು ತಡೆಯಿರಿ. ರೋಗದ ಲಕ್ಷಣ ಕಂಡುಬಂದಲ್ಲಿ ಸ್ವಯಂ ಚಿಕಿತ್ಸೆಗೆ ಮುಂದಾಗದೇ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯ.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆಯೇ ಬಹಳ ಮುಖ್ಯ. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯ:
- ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.
- ಸೊಳ್ಳೆ ಪರದೆ ಅಥವಾ ಸೊಳ್ಳೆ ಪರದೆ ಬಳಸಿ ನಿದ್ರೆ ಮಾಡಿ.
- ಕುಡಿಯುವ ನೀರನ್ನು ಪ್ರತಿದಿನ ಬದಲಾಯಿಸಿ ಹಾಗೂ ಕುದಿಸಿದ ನೀರನ್ನು ಮಾತ್ರ ಸೇವಿಸಿ.
- ಮಳೆಯಲ್ಲಿ ನೆನೆದರೆ, ಚೆನ್ನಾಗಿ ಸ್ನಾನ ಮಾಡಿ ದೇಹವನ್ನು ಒಣಗಿಸಿಕೊಳ್ಳಿ.
- ತಾಜಾ ಆಹಾರ ಸೇವಿಸಿ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಸಮೃದ್ಧ ಆಹಾರಗಳನ್ನು ಸೇವಿಸಿ.
- ತೋಟ ಗದ್ದೆಗಳಲ್ಲಿ ಕೆಲಸ ಮಾಡುವವರು ಆದಷ್ಟು ಸೊಳ್ಳೆ ಕಡಿತಗಳಿಂದ ದೂರವಿರಿ, ಸಂಪೂರ್ಣ ಮೈ ಮುಚ್ಚುವ ಬಟ್ಟೆಗಳನ್ನು ಧರಿಸಿ.
- ಹೊರ ಆವರಣದಲ್ಲಿ ಕೆಲಸ ಮಾಡುವವರು ನಿಮ್ಮ ಕೈ, ಕಾಲುಗಳನ್ನು ಸ್ವಚ್ಚವಾಗಿ ತೊಳೆಯಿರಿ
- ಸದಾ ಒಣಗಿದ ಬಟ್ಟೆಯ ಬಳಕೆ ಇರಲಿ.
- ವೃದ್ಧರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆದಷ್ಟು ಬೆಚ್ಚಗಿನ ಬಟ್ಟೆ ಧರಿಸಿ
- ಶಾಲೆಗಳಿಗೆ ಹೋಗುವ ಮಕ್ಕಳ ಬಗ್ಗೆ ಅಧಿಕ ಎಚ್ಚರಿಕೆ ವಹಿಸಿ, ಮಳೆಯಲ್ಲಿ , ನಿಂತ ನೀರಿನಲ್ಲಿ ಆಟ ವಾಡದಂತೆ, ಕಲುಷಿತ ಆಹಾರ ಸೇವಿಸದಂತೆ ಸಲಹೆ ನೀಡಿ.
ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:
- 1 ರಿಂದ 2 ದಿನಗಳಿಗಿಂತ ಹೆಚ್ಚು ಕಾಲ ಜ್ವರ ಮುಂದುವರಿದರೆ.
- ಅತಿಯಾದ ದೌರ್ಬಲ್ಯ ಅಥವಾ ಸುಸ್ತು ಕಂಡುಬಂದರೆ.
- ಉಸಿರಾಟದ ತೊಂದರೆ ಉಂಟಾದರೆ.
- ಯಾವುದೇ ರೀತಿಯ ರಕ್ತಸ್ರಾವ ಕಂಡುಬಂದರೆ.
ಮಳೆಗಾಲದ ಜ್ವರವನ್ನು ನಿರ್ಲಕ್ಷಿಸಬೇಡಿ. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ ಈ ನಿಟ್ಟಿನಲ್ಲಿ ಗಮನ ಹರಿಸಿ,
ಬರಹ : ಡಾ. ಸುರೇಶ್ , ತುರ್ತು ಚಿಕಿತ್ಸಾ ವಿಭಾಗ, ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ , ಶೃಂಗೇರಿ
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz

