Cauvery Row ಶಿವಮೊಗ್ಗ: ಪ್ರತಿ ವರ್ಷದಂತೆ ಈ ಬಾರಿಯೂ ಮುಂಗಾರು ಆರಂಭವಾಗುತ್ತಿದ್ದಂತೆಯೇ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ಎತ್ತಿದೆ. ಈ ಕುರಿತು ಶಿವಮೊಗ್ಗದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದ ಬಿವೈ ರಾಘವೇಂದ್ರ ಅವರು ನಮ್ಮ ರಾಜ್ಯದಲ್ಲೇ ಕುಡಿಯಲು ಮತ್ತು ಕೃಷಿಗೆ ನೀರಿಲ್ಲದ ಪರಿಸ್ಥಿತಿ ಇರುವಾಗ, ನೆರೆ ರಾಜ್ಯಕ್ಕೆ ನೀರು ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಲ್ವರಿಗೆ 20 ವರ್ಷ ಜೈಲು! ತೀರ್ಥಹಳ್ಳಿಯ ಕೋವಿ ಕಥೆ ಜೊತೆಗೆ ಶಿವಮೊಗ್ಗ 112 ಸುದ್ದಿ! ಇವತ್ತಿನ ಶಾರ್ಟ್ ನ್ಯೂಸ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ಪ್ರತಿವರ್ಷ ಅವರ ಪಾಲಿನ ನೀರನ್ನು ಕೇಳುವುದು ಮಾಮೂಲಿಯಾಗಿದೆ. ಆದರೆ ಪ್ರಸ್ತುತ ನಮ್ಮಲ್ಲಿಯೇ ನೀರಿನ ಅಭಾವವಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ನೀರು ಹರಿಸಲು ಹೇಗೆ ಸಾಧ್ಯ? ಈ ಗಂಭೀರ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಆಡ್ವೋಕೇಟ್ ಜನರಲ್ (ಎಜಿ) ಅವರು ತಕ್ಷಣವೇ ಸಮಾಲೋಚನೆ ನಡೆಸಿ, ಬಲವಾದ ಕಾನೂನು ಹೋರಾಟದ ಮೂಲಕ ತಮಿಳುನಾಡಿನ ಹಠಾತ್ ಧೋರಣೆಯನ್ನು ವಿರೋಧಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ಸಾಮಾನ್ಯವಾಗಿ ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ ಕರ್ನಾಟಕ ಮತ್ತು ತಮಿಳುನಾಡು ನಡುವೆ ನೀರಿನ ಹಂಚಿಕೆ ಕುರಿತು ಚರ್ಚೆಗಳು, ಸಂಘರ್ಷಗಳು ಮುನ್ನೆಲೆಗೆ ಬರುತ್ತವೆ. ಈ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಜಲ ಸಮಿತಿ ಕೂಡ ಮಧ್ಯಸ್ಥಿಕೆ ವಹಿಸಿ ನಿರ್ದೇಶನಗಳನ್ನು ನೀಡುತ್ತವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಕಾವೇರಿ ವಿವಾದ ದೊಡ್ಡ ಮಟ್ಟದ ಬಿಕ್ಕಟ್ಟಾಗಿ ಪರಿಣಮಿಸುವ ಮುನ್ಸೂಚನೆ ಸಿಗುತ್ತಿದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ತಮಿಳುನಾಡು ಸರ್ಕಾರವು ಕೃಷ್ಣರಾಜಸಾಗರ ಜಲಾಶಯ ಹಾಗೂ ಅದರ ಸುತ್ತಮುತ್ತಲಿನ ಉಪ ಡ್ಯಾಂಗಳಲ್ಲಿರುವ ನೀರನ್ನು ತನಗೇ ಬಿಡಬೇಕು ಎಂದು ಹಠ ಹಿಡಿದಿರುವುದು ಆತಂಕ ಮೂಡಿಸಿದೆ.
ಇದೇ ವೇಳೆ ರಾಜ್ಯ ಸರ್ಕಾರದ ನಡೆ ಹಾಗೂ ಮುಖ್ಯಮಂತ್ರಿಗಳ ಪ್ರವಾಸದ ಕುರಿತು ಮಾತನಾಡಿದ ಬಿ.ವೈ.ರಾಘವೇಂದ್ರ ಅವರು, ಮುಖ್ಯಮಂತ್ರಿಯವರು ಸದ್ಯ ಅತಿ ಉತ್ಸಾಹದಿಂದ ತುಂಗಾಭದ್ರಾ ಜಲಾಶಯದ ಕ್ರಸ್ಟ್ ಗೇಟ್ಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಆಗಮಿಸಿದ್ದಾರೆ. ಇಷ್ಟೆಲ್ಲಾ ಗಂಭೀರ ವಿದ್ಯಮಾನಗಳ ಮಧ್ಯೆ, ಕಾವೇರಿ ನದಿ ನೀರಿನ ರಕ್ಷಣೆ ಹಾಗೂ ತಮಿಳುನಾಡಿನ ತಗಾದೆಯ ವಿರುದ್ಧ ಮುಖ್ಯಮಂತ್ರಿಗಳು ರಾಜ್ಯದ ಹಿತದೃಷ್ಟಿಯಿಂದ ಯಾವ ರೀತಿಯ ದೃಢ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ನಾವು ಕಾದು ನೋಡುತ್ತಿದ್ದೇವೆ ಎಂದು ತಿಳಿಸಿದರು.
