ಶಿವಮೊಗ್ಗ: ಸಾರ್ವಜನಿಕ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುವುದನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಐದು ಜನರ ಪುಂಡರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ಶಿವಮೊಗ್ಗ : ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮಿರಿಗೆ ರೇಖಾ ರಂಗನಾಥ್, ಸುನಿಲ್, ದೇವಂದ್ರಪ್ಪ!
Shivamogga ಘಟನೆ ವಿವರ
ಶಿವಮೊಗ್ಗದ ಗ್ರಾಮವೊಂದರಲ್ಲಿರುವ ದೂರುದಾರರು ತಮ್ಮ ಶುಂಠಿ ತೋಟವನ್ನು ನೋಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರ ಎದುರುಗಡೆಯಿಂದ ಎರಡು ದ್ವಿಚಕ್ರ ವಾಹನಗಳಲ್ಲಿ ಒಟ್ಟು ಐದು ಜನ ಯುವಕರು ಬಂದಿದ್ದಾರೆ. ಆ ಪೈಕಿ ಒಂದು ಬೈಕ್ ಸವಾರ ರಸ್ತೆಯಲ್ಲೇ ಅತಿ ವೇಗವಾಗಿ ಬೈಕ್ ವೀಲಿಂಗ್ ಮಾಡುತ್ತಾ ಬರುತ್ತಿದ್ದನು. ಇದನ್ನು ಗಮನಿಸಿದ ದೂರುದಾರರು, ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುತ್ತಿರುತ್ತಾರೆ, ಈ ರೀತಿ ವೀಲಿಂಗ್ ಮಾಡಿದರೆ ತೊಂದರೆಯಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಐದೂ ಜನ ಪುಂಡರು, ದೂರುದಾರರನ್ನು ಏಕವಚನದಲ್ಲಿ ನಿಂದಿಸಿ ಗಲಾಟೆ ಆರಂಭಿಸಿದ್ದಾರೆ. ನಾವು ಹೇಗೆ ಬೇಕಾದರೂ ಗಾಡಿ ಓಡಿಸುತ್ತೇವೆ, ಕೇಳಲು ನೀನ್ಯಾರು ಎಂದು ಜಗಳ ತೆಗೆದು, ಎಲ್ಲರೂ ಸೇರಿ ಅವರ ಮೈಕೈ, ಬೆನ್ನು ಹಾಗೂ ತಲೆಗೆ ಕೈಗಳಿಂದ ಮನಸೋಇಚ್ಛೆ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ದೂರುದಾರರಿಗೆ ಗಂಭಿರವಾಗಿ ಗಾಯಗಳಾಗಿವೆ.
ಇದೇ ವೇಳೆ ಆ ರಸ್ತೆಯಲ್ಲಿ ಬರುತ್ತಿದ್ದ ಇತರ ಸ್ಥಳೀಯರು ತಕ್ಷಣ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಆಗ ಆ ಪುಂಡರ ಗುಂಪು, ದೂರುದಾರರಿಗೆ ಕೊಲೆ ಬೆದರಿಕೆ ಹಾಕಿ ಬೈಕ್ಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣವೇ ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
