ಪರಿಷತ್​ ಎಲೆಕ್ಷನ್​ನಲ್ಲಿ ಭಿನ್ನರ ನಿಷ್ಠೆ! ಅಡ್ಜೆಸ್ಟ್​ಮೆಂಟ್​ಗೆ ಸಿಡಿದ ಕುಮಾರ್​ ಬಂಗಾರಪ್ಪ

Kumar Bangarappa /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಭಿನ್ನರೇ ಪಕ್ಷ ನಿಷ್ಠೆ ತೋರಿಸಿದರು. ಆದಾಗ್ಯು ಅಡ್ಡ ಮತದಾನ ನಡೆದಿದ್ದು, ಕೇಸರಿ ಪಾಳಯ ನಿಗಿ ನಿಗಿ ಕೆಂಡವಾಗಲು ಕಾರಣವಾಗಿದೆ. ರಾಜ್ಯ ನಾಯಕರ ಮೇಲೆ ಕೇಂದ್ರದ ನಾಯಕರು ಅಬ್ಬರಿಸಿ ಬೊಬ್ಬರಿಯುತ್ತಿದ್ದಾರೆ. ಈ ಮಧ್ಯೆ ಸೊರಬದ ಮಾಜಿ ಶಾಸಕ ಕುಮಾರ್ ಬಂಗಾರಪ್ಪರವರು ಸಹ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ. ಅಲ್ಲದೆ ಅಡ್ಜೆಸ್ಟ್​ಮೆಂಟ್ ರಾಜಕಾರಣದ ವಿರುದ್ದ ಸಿಡಿದೆದ್ದಿದ್ದಾರೆ. ಹೀಗೆ ಮುಂದುವರಿದರೆ, ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟರೂ ಆಶ್ಚರ್ಯವಿಲ್ಲ ವ್ಯಂಗ್ಯವಾಡಿದ್ದಾರೆ.

ಕುಮಾರ್ ಬಂಗಾರಪ್ಪನವರ (Kumar Bangarappa) ಮಾತಿನ ಪ್ರಮುಖ ಸಾರಾಂಶ

  • ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ತನ್ನ ತೀರ್ಮಾನಗಳನ್ನು ಅತ್ಯಂತ ಎಚ್ಚರಿಕೆ ಹಾಗೂ ಸೂಕ್ಷ್ಮತೆಯಿಂದ ಕೈಗೊಳ್ಳುತ್ತಾನೆ ಎಂಬುದನ್ನು ಈ ವಿಧಾನ ಪರಿಷತ್ ಚುನಾವಣೆ ಸಾಬೀತುಪಡಿಸಿದೆ.
  • ಪಕ್ಷದ ವಿಪ್ ಉಲ್ಲಂಘಿಸಿ ಕ್ರಾಸ್ ವೋಟಿಂಗ್ ನಡೆಸಿರುವವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗಿದ್ದೇನೆ ಮತ್ತು ಪ್ರಾಮಾಣಿಕತೆಯಿಂದ ಈ ಪಕ್ಷ ನನಗೆ ಅನ್ನ ನೀಡಿದೆ. ಹೀಗಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ
  • ಆದರೆ, ಇಂದಿನ ರಾಜಕಾರಣವು ಕೇವಲ ವ್ಯವಹಾರದ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಬೇಸರದ ಸಂಗತಿ. ಇದು ಅಕ್ಷಮ್ಯ ಅಪರಾಧವಾಗಿದ್ದು, ಇಂತಹ ಪರಿಸ್ಥಿತಿಯನ್ನು ನಿಭಾಯಿಸುವವರನ್ನು ನಾವು ಪ್ರಶ್ನಿಸಬೇಕಾದ ಅನಿವಾರ್ಯತೆ ಇದೆ. ಅವರು ಇದಕ್ಕೆ ಸೂಕ್ತ ಉತ್ತರ ನೀಡಲೇಬೇಕಾಗುತ್ತದೆ.
  • ಈ ಚುನಾವಣೆಯು ನಂಬರ್ ಗೇಮ್ ಆಗಿತ್ತು. ನಮ್ಮ ಪಕ್ಷ ಹಾಗೂ ಮಿತ್ರಪಕ್ಷವಾದ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿತ್ತು.
  • ಒಂದೊಮ್ಮೆ ನಮಗೆ ಹೆಚ್ಚಿನ ಮತಗಳಿಲ್ಲದಿದ್ದರೂ, ಎರಡನೇ ಪ್ರಾಶಸ್ತ್ಯದ ಮತಗಳ ಮೂಲಕವಾದರೂ ಗೆಲ್ಲುವ ಅವಕಾಶವಿತ್ತು. ಆದರೆ, ಈ ಲೆಕ್ಕಾಚಾರವನ್ನು ಸಂಪೂರ್ಣವಾಗಿ ತಲೆಕೆಳಗೆ ಮಾಡುವ ಮೂಲಕ ಪಕ್ಷದ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಈ ಚುನಾವಣೆಯಲ್ಲಿ ಮಾಡಲಾಗಿದೆ
  • ಪಕ್ಷದ ವರಿಷ್ಠರಲ್ಲಿ ನನ್ನದೊಂದು ಪ್ರಮುಖ ಮನವಿಯಿದೆ. ರಾಜ್ಯವು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತ, ಭ್ರಷ್ಟಾಚಾರ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸೂಕ್ತ ನಿರ್ಧಾರಗಳನ್ನು ಕೈಗೊಂಡರೆ, ಮುಂದಿನ ಚುನಾವಣೆಯಲ್ಲಿ ನಾವು 140-150 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸವಿದೆ.
  • ಈ ನಿಟ್ಟಿನಲ್ಲಿ, ಪಕ್ಷವನ್ನು ತೊರೆದಿರುವ, ವಿಶೇಷವಾಗಿ ಪ್ರಾಮಾಣಿಕತೆ ಮತ್ತು ಪಕ್ಷನಿಷ್ಠೆ ಹೊಂದಿರುವ ಯತ್ನಾಳ್ ಅವರಂತಹ ನಾಯಕರನ್ನು ಮರಳಿ ಕರೆತರುವ ಪ್ರಯತ್ನಗಳು ನಡೆಯಬೇಕು ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರೆ, ಅವರು ಪ್ರಬಲ ನಾಯಕರಾಗಿ ಹೊರಹೊಮ್ಮಲಿದ್ದಾರೆ.
  • ರಾಜ್ಯವು ಅಂತಹ ಸಮರ್ಥ ನಾಯಕರಿಗಾಗಿ ಕಾಯುತ್ತಿದೆ. ಪಕ್ಷದಲ್ಲಿ ಈಗಾಗಲೇ ಅನೇಕ ನಾಯಕರಿದ್ದರೂ, ಯತ್ನಾಳ್ ಅವರಂತಹವರನ್ನು ಮರಳಿ ಕರೆತರುವುದು ಪಕ್ಷಕ್ಕೆ ಹೆಚ್ಚಿನ ಬಲ ನೀಡಲಿದೆ. ಯಾರಾದರೂ ತಪ್ಪು ಮಾಡಿದ್ದರೆ ಅವರಿಗೆ ಕ್ಷಮಾದಾನ ನೀಡಿ, ಪ್ರಾಮಾಣಿಕ ಕಾರ್ಯಕರ್ತರು ಪಕ್ಷಕ್ಕೆ ಬೇಕು ಎಂಬ ವಿಶಾಲ ದೃಷ್ಟಿಕೋನದಿಂದ ಯೋಚಿಸುವುದು ಉತ್ತಮ.

ಇಲ್ಲದಿದ್ದರೆ, ಇಂತಹ ಅಡ್ಜಸ್ಟ್‌ಮೆಂಟ್ ರಾಜಕಾರಣವು ಮುಂದುವರಿದರೆ, ಕಾಂಗ್ರೆಸ್ ಪಕ್ಷದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಏಳಕ್ಕೆ ಏಳು ಸ್ಥಾನಗಳನ್ನೂ ಅವರಿಗೆ ಬಿಟ್ಟುಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಪಕ್ಷದ ವಿರೋಧಿ ಚಟುವಟಿಕೆಯಾಗಿದ್ದು, ಈ ಬಗ್ಗೆ ಆಂತರಿಕ ತನಿಖೆ ನಡೆಯಬೇಕು ಹಾಗೂ ಪಕ್ಷದ ಹಾದಿ ತಪ್ಪಿರುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕುಮಾರ್ ಬಂಗಾರಪ್ಪ (Kumar Bangarappa) ಒತ್ತಾಯಿಸಿದ್ದಾರೆ.