DVS Shimoga ಶಿವಮೊಗ್ಗ : ನಗರದ ಪ್ರತಿಷ್ಠಿತ ಡಿವಿಎಸ್ ಶಿಕ್ಷಣ ಸಂಸ್ಥೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೈದು ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಕೆ.ಬಸಪ್ಪಗೌಡ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
DVS Shimoga ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 83 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಇತಿಹಾಸ ಹೊಂದಿರುವ ನಮ್ಮ ಸಂಸ್ಥೆಯು ನಿರಂತರವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಾ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಈ ವಿದ್ಯಾಕೇಂದ್ರದಲ್ಲಿ ಜ್ಞಾನಾರ್ಜನೆ ಮಾಡಿ ಇಂದು ದೇಶ-ವಿದೇಶಗಳ ವಿವಿಧ ರಂಗಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವ ಅಸಂಖ್ಯಾತ ಸುಸಂಸ್ಕೃತ ನಾಗರಿಕರನ್ನು ಮತ್ತು ಮಹಾನ್ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹೆಮ್ಮೆ ನಮ್ಮದಾಗಿದೆ ಎಂದು ಹೆಮ್ಮೆಯಿಂದ ನುಡಿದರು.
ಕಳೆದ ಹಲವು ದಶಕಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಡಿವಿಎಸ್ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಪ್ರಸ್ತುತ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಡಿವಿಎಸ್ ಸಂಯುಕ್ತಾ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಶಾಂಭವಿ ಕೆ.ಪಿ. 625 ಅಂಕಗಳಿಗೆ 621 ಅಂಕಗಳನ್ನು ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿನಿ ಲಕ್ಷ್ಮೀ ಪಿ.ಎ. 602 ಅಂಕಗಳನ್ನು ಪಡೆದಿದ್ದಾರೆ. ಉಳಿದಂತೆ ಬಹುತೇಕ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಶಾಲೆಗೆ ಶೇ. 95.45ರಷ್ಟು ಅತ್ಯುತ್ತಮ ಫಲಿತಾಂಶ ಬಂದಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ವಿನೋಬನಗರದ ಡಿವಿಎಸ್ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಹಾಗೆಯೇ, ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 5, ವಿಜ್ಞಾನ ವಿಭಾಗದಲ್ಲಿ 1 ಹಾಗೂ ಕಲಾ ವಿಭಾಗದಲ್ಲಿ 2 ರ್ಯಾಂಕ್ಗಳು ಸೇರಿದಂತೆ ಒಟ್ಟು 8 ರ್ಯಾಂಕ್ಗಳನ್ನು ಬಾಚಿಕೊಳ್ಳುವ ಮೂಲಕ ಜಿಲ್ಲೆಯಲ್ಲೇ ಅತಿ ಹೆಚ್ಚು ರ್ಯಾಂಕ್ ಪಡೆದ ಏಕೈಕ ಪಿಯು ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 100ರಷ್ಟು ಪೂರ್ಣ ಫಲಿತಾಂಶ ಬಂದಿದೆ. ಈ ಐತಿಹಾಸಿಕ ಯಶಸ್ಸಿಗೆ ಕಾರಣರಾದ ಮತ್ತು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ, ಶಾಲಾ-ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಬಳಿಕ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ದಿನೇಶ್ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ 2024-25ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ಡಿವಿಎಸ್ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಪೂಜಾ ಎಸ್.ಜಿ (ಬಿಎ-2ನೇ ರ್ಯಾಂಕ್), ಗುಣಶ್ರೀ ಹೆಚ್.ಎಂ (ಬಿಎಸ್ಸಿ-5ನೇ ರ್ಯಾಂಕ್), ಸಂಜನಾ ಆರ್. (ಬಿಸಿಎ-5ನೇ ರ್ಯಾಂಕ್), ಯಶಸ್ವಿನಿ ಜಿ. (ಬಿಎಸ್ಸಿ-7ನೇ ರ್ಯಾಂಕ್), ಬಿಂದುಶ್ರೀ ಆರ್. (ಬಿಎಸ್ಸಿ-8ನೇ ರ್ಯಾಂಕ್) ಹಾಗೂ ಪುನೀತ್ ಡಿ.ಯು. (ಬಿಸಿಎ-9ನೇ ರ್ಯಾಂಕ್) ಸೇರಿದಂತೆ ಒಟ್ಟು 6 ರ್ಯಾಂಕ್ಗಳು ಹಾಗೂ 3 ಬಂಗಾರದ ಪದಕಗಳನ್ನು ಮುಡಿಗೇರಿಸಿಕೊಂಡು ಕಾಲೇಜಿಗೆ ಗೌರವ ತಂದಿದ್ದಾರೆ ಎಂದು ಪ್ರಶಂಸಿಸಿದರು.
ಪ್ರತಿ ವರ್ಷವೂ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಇಂತಹದೇ ಸಾರ್ವಕಾಲಿಕ ಶ್ರೇಷ್ಠ ಫಲಿತಾಂಶಗಳನ್ನು ತರುತ್ತಿದ್ದು, ಸಂಸ್ಥೆಯು ದಿನೇ ದಿನೇ ಯಶಸ್ಸಿನ ಉತ್ತುಂಗಕ್ಕೇರುತ್ತಿದೆ. ಈ ಅಮೋಘ ಸಾಧನೆಯ ಹಿಂದೆ ಪ್ರಾಧ್ಯಾಪಕರ ನಿರಂತರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಅಡಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಡಾ. ಸತೀಶ್ ಕುಮಾರ್ ಶೆಟ್ಟಿ, ಎನ್.ಆರ್. ನಿತಿನ್, ಡಾ. ಎಂ. ವೆಂಕಟೇಶ್, ಜി. ಮಧುಸೂದನ್, ಸಿ.ಕೆ. ಶ್ರೀಧರ್, ಡಾ. ಸವಿತಾ ಎನ್. ರಾವ್, ಉಮೇಶ್, ಡಾ. ಕೆ.ಎಸ್. ಪವಿತ್ರಾ, ಬಿ. ಗೋಪಿನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
