by Raghavendra ಶಿವಮೊಗ್ಗ:ಮಹಿಳಾ ಮೀಸಲಾತಿಗೆ ಪೂರಕವಾಗಿದ್ದ ನಾರಿಶಕ್ತಿ ವಂದನಾ ನಿಯಮ್ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು ಅದನ್ನು ಕಾಂಗ್ರೆಸ್ ಸರ್ಕಾರ ವಿರೋಧಿಸಿದೆ, ಆದ್ದರಿಂದ ಕಾಂಗ್ರೆಸ್ ಸರ್ಕಾರನ್ನು ಭಾರತದ ಮಹಿಳೆಯರು ಕ್ಷಮಿಸಲ್ಲ ಎಂದು ಸಂಸದ ಬಿವೈ ರಾಘವೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ, ಶಿವಮೊಗ್ಗ, ಸಾಗರ, ಪುತ್ತೂರು ಮಾರುಕಟ್ಟೆಗಳಲ್ಲಿನ ಅಡಿಕೆ ದರದ ವಿವರ
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಬಸವಣ್ಣನವರ ಅನುಭವ ಮಂಟಪದಲ್ಲಿ ಲಿಂಗ ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯಕ್ಕೆ ನಾಂದಿ ಹಾಡಲಾಗಿತ್ತು. ಆದರೆ, ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಅಂತಹ ಪಕ್ಷಗಳು ಸ್ತ್ರೀ ಸ್ವಾತಂತ್ರ್ಯದ ಆಶಯಗಳಿಗೆ ತಣ್ಣೀರೆರಚುವ ಕೆಲಸ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಸಂವಿಧಾನದ 131ನೇ ತಿದ್ದುಪಡಿ, ಕ್ಷೇತ್ರ ಮರು ವಿಂಗಡಣೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ ಸೇರಿದಂತೆ ಮಹಿಳಾ ಮೀಸಲಾತಿಗೆ ಪೂರಕವಾದ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿತ್ತು. ಆದರೆ, ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಾ ಇದನ್ನು ತಡೆಯುವ ಷಡ್ಯಂತ್ರ ರೂಪಿಸಿದೆ ಎಂದು ದೂರಿದರು.
ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದು ತಿಳಿದಿದ್ದರೂ, ಮುಸ್ಲಿಮರಿಗೆ ಅವಕಾಶವಿಲ್ಲ ಎಂಬ ನೆಪವೊಡ್ಡಿ ದೇಶವನ್ನು ವಿಭಜಿಸುವ ಕುತಂತ್ರ ನಡೆಸಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ತಪ್ಪು ಕಲ್ಪನೆ ಬಿತ್ತಲಾಗುತ್ತಿದೆ. ಆದರೆ ಸರ್ಕಾರವು ಪ್ರಸ್ತುತ ಕ್ಷೇತ್ರಗಳ ಸಂಖ್ಯೆಯನ್ನು ಶೇ.50 ರಷ್ಟು ಹೆಚ್ಚಿಸುವ ಭರವಸೆ ನೀಡಿದ್ದರೂ, ಸಾಮಾಜಿಕ ನ್ಯಾಯದ ಈ ಮಸೂದೆಯನ್ನು ಕಾಂಗ್ರೆಸ್ ದುರುದ್ದೇಶದಿಂದ ವಿರೋಧಿಸಿದೆ. ಮಸೂದೆ ಬಿದ್ದಾಗ ಕಾಂಗ್ರೆಸ್ ನಾಯಕರು ವಿಜಯೋತ್ಸವ ಆಚರಿಸಿದ್ದು ಮಹಿಳೆಯರಿಗೆ ಮಾಡಿದ ದೊಡ್ಡ ಅವಮಾನ. ಯುಪಿಐ, ಜನ ಧನ್, ಮತ್ತು ಜಿಎಸ್ಟಿ ಅಂತಹ ಪ್ರತಿಯೊಂದು ಜನಪರ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ನ ಕೆಲಸವಾಗಿದೆ ಎಂದು ಟೀಕಿಸಿದರು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 16 ಅನ್ನು ದೇಶದ ಪಾಲಿನ ಕರಾಳ ದಿನ ಎಂದ ಬಿವೈ ರಾಘವೇಂದ್ರ ಅವರು, ಕಾಂಗ್ರೆಸ್ನ ಈ ವಿರೋಧದ ವಿರುದ್ಧ ಪ್ರತಿ ಮನೆಮನೆಗೂ ಜಾಗೃತಿ ತಲುಪಿಸಲಾಗುವುದು ಎಂದರು. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್ಗೆ ಛೀಮಾರಿ ಹಾಕುವ ಅಭಿಯಾನ ನಡೆಸಲಾಗುವುದು. ಪ್ರಧಾನಿ ಮೋದಿಯವರು ಮಹಿಳಾ ಸಬಲೀಕರಣದ ವಿಷಯದಲ್ಲಿ ಎಂದೂ ಹಿಂದೇಟು ಹಾಕುವುದಿಲ್ಲ, ಈ ಪ್ರಯತ್ನ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಹೊಸನಗರದ ವಿಷಯವಾಗಿ ಮಾತನಾಡಿ, ಪಶ್ಚಿಮ ಘಟ್ಟ ವ್ಯಾಪ್ತಿಯ ಜನಸಂಖ್ಯೆಯನ್ನು ಮಾನದಂಡವಾಗಿ ಪರಿಗಣಿಸದೆ ಮಲೆನಾಡಿನ ಸಮಸ್ಯೆಗಳಿಗೆ ವಿಶೇಷವಾಗಿ ಧ್ವನಿ ಎತ್ತಿದ್ದೇನೆ ಎಂದು ತಿಳಿಸಿದರು.
by Raghavendra Slams Congress over Women’s Bill


