ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿನ 12 ವರ್ಷ ವಯಸ್ಸಿನ ನೀರಾನೆ ‘ಹಂಸಿಣಿ’ ಸಾವನ್ನಪ್ಪಿದೆ. ಈ ಮೊದಲೇ ಮೃಗಾಲಯದ ಅಧಿಕಾರಿಗಳು ತಿಳಿಸಿದಂತೆ, ಗಂಭೀರ ಸ್ಥಿತಿಯಲ್ಲಿದ್ದ ನೀರಾನೆ ಸಾವನ್ನಪ್ಪಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವನ್ಯಜೀವಿ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಇದೇ ನೀರಾನೆಯ ದಾಳಿಯಿಂದಾಗಿ ಸಾವನ್ನಪ್ಪಿದ್ದರು. ಈ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೆ ಇದೀಗ ನೀರಾನೆಯು ಸಹ ಸಾವನ್ನಪ್ಪಿದೆ. ನಿನ್ನೆಯಷ್ಟೆ ನೀರಾನೆಯ ಹೊಟ್ಟೆಯಲ್ಲಿದ್ದ ಮರಿಯು ಸಾವನ್ನಪ್ಪಿತ್ತು ಎಂದು ತಿಳಿಸಲಾಗಿತ್ತು. ಆ ಕಾರಣದಿಂದಲೇ ಹೊಟ್ಟೆಯೊಳಗೆ ಇನ್ಪೆಕ್ಷನ್ ಆಗಿ ನೀರಾನೆಯು ತೀವ್ರ ಕ್ರಿಟಿಕಲ್ ಸ್ಥಿತಿಯಲ್ಲಿತ್ತು ಎಂದು ಮಾಹಿತಿ ನೀಡಲಾಗಿತ್ತು. ಇದೀಗ ನೀರಾನೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಲೆನಾಡು ಟುಡೆಗೆ ಸಿಕ್ಕಿರುವ ಅಧಿಕೃತ ಮಾಹಿತಿಯ ಪ್ರಕಾರ, ಇವತ್ತು, ಮಧ್ಯಾಹ್ನ 3.08ರ ಸುಮಾರಿಗೆ ಹಂಸಿಣಿ ಕೊನೆಯುಸಿರೆಳೆದಿದೆ. (Tyavarekoppa Tiger Lion Safari) ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರ ಅಧಿಕೃತ ಪ್ರಕಟಣೆಯಲ್ಲಿ ಸಾಮಾನ್ಯವಾಗಿ 8 ತಿಂಗಳ ಗರ್ಭಧಾರಣೆಯ ಅವಧಿಯನ್ನು ಹೊಂದಿರುವ ನೀರಾನೆಯ ಪ್ರಸವದ ಸಮಯ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿಯೇ ಪೂರ್ಣಗೊಂಡಿತ್ತು. ಆದಾಗ್ಯೂ, ಹಂಸಿಣಿಯಲ್ಲಿ ಯಾವುದೇ ರೀತಿಯ ಪ್ರಸವದ ಲಕ್ಷಣಗಳು ಕಂಡುಬಂದಿರಲಿಲ್ಲ. ಕಳೆದ ಕೆಲವು ದಿನಗಳಿಂದ ಪ್ರಾಣಿಯು ಆಹಾರ ಸೇವಿಸುವುದನ್ನು ಕಡಿಮೆ ಮಾಡಿತ್ತು ಹಾಗೂ ಮಂದವಾಗಿತ್ತು ಎಂದು ತಿಳಿಸಲಾಗಿದೆ.

ಈ ನಡುವೆ ಹಂಸಿಣಿಯ ಆರೋಗ್ಯದಲ್ಲಿ ಏರುಪೇರಾದ ಕಾರಣ 10.04.2026ರಂದು ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವನ್ಯಜೀವಿ ಪಶುವೈದ್ಯರ ತಂಡವು ಆರೋಗ್ಯ ತಪಾಸಣೆ ನಡೆಸಿತ್ತು. ಹೆಚ್ಚಿನ ಪರೀಕ್ಷೆಗಾಗಿ ಪ್ರಾಣಿಯ ರಕ್ತ ಹಾಗೂ ಇತರೆ ದ್ರವಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಪ್ರಯೋಗಾಲಯದ ವರದಿ ಹಾಗೂ ಪಶುವೈದ್ಯರ ತಪಾಸಣೆಯ ಆಧಾರದ ಮೇಲೆ, ಹಿಪ್ಪೋಪೋಟಾಮಸ್ ಗರ್ಭಾಶಯದಲ್ಲಿ ತೀವ್ರ ಸ್ವರೂಪದ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಗರ್ಭಾಶಯದ ಒಳಗಡೆಯೇ ಭ್ರೂಣವು ಮೃತಪಟ್ಟಿರುವ ಕಾರಣದಿಂದಾಗಿ ಈ ಗಂಭೀರ ಸೋಂಕು ಉಂಟಾಗಿರಬಹುದು ಎಂದು ಪಶುವೈದ್ಯರು ದೃಢಪಡಿಸಿದ್ದರು.
ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರ ಪ್ರಕಟಣೆ
ಇನ್ನೂ ತಜ್ಞರ ಸಲಹೆಯ ಮೇರೆಗೆ ನೀರಾನೆಗೆ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ಚಿಕಿತ್ಸೆಗಳು ಫಲಕಾರಿಯಾಗದೆ ಇಂದು ಹಂಸಿಣಿ ಸಾವನ್ನಪ್ಪಿದೆ. ಮೃಗಾಲಯದ ಪ್ರಾಧೀಕಾರ ನೀರಾನೆಯಿಂದ ಸಾವನ್ನಪ್ಪಿದ್ದ ಡಾ.ಸಮೀಕ್ಷಾ ರೆಡ್ಡಿಯವರ ಹೆಸರನ್ನು ಇದೇ ಹಂಸಿಣಿಯ ಮರಿಗೆ ಇಡಲಾಗುವುದು ಎಂದಿದ್ದರು. ಆದರೆ ಈಗ ಡಾ.ಸಮೀಕ್ಷಾ ರೆಡ್ಡಿಯು ಇಲ್ಲ, ನೀರಾನೆಯ ಮರಿಯು ಇಲ್ಲ. ನೀರಾನೆಯು ಇಲ್ಲವಾಗಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
