ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಹೊಸನಗರ ತಾಲ್ಲೂಕು ಹುಲಿಕಲ್ ಘಾಟಿಯಲ್ಲಿ ನಿನ್ನೆ ಗುರುವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ 3 ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದು, ಅವಶೇಷಗಳಡಿ ಸಿಲುಕಿದ್ದ ಇತರ 4 ಮಂದಿಯನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇನ್ನೂ ಕಾರ್ಯಾಚರಣೆಯ ದೃಶ್ಯಾವಳಿಗಳು ಮಲೆನಾಡು ಟುಡೆಗೆ ಲಭ್ಯವಾಗಿದೆ.
ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಇನ್ನಷ್ಟು ಮಾಹಿತಿ ಕೆಳಗಡೆ ಇದೆ
ಹುಲಿಕಲ್ ಘಾಟಿ ಭೂಕುಸಿತ ಕಾರಣ!
ಶಿವಮೊಗ್ಗ ಹಾಗೂ ಕುಂದಾಪುರ ಹೆದ್ದಾರಿಯನ್ನು ಸಂಪರ್ಕಿಸುವ ಹುಲಿಕಲ್ ಘಾಟ್ ಮಾರ್ಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಜೆ ಸುಮಾರು 6:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಭೂಕುಸಿತ ಉಂಟಾದಾಗ ಒಟ್ಟು 7 ಮಂದಿ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಕಾರ್ಯಾಚರಣೆ ನಡೆಸಿ 4 ಮಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಮೃತಪಟ್ಟಿರುವ 3 ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮೃತಪಟ್ಟವರನ್ನು ಹಾವೇರಿ ಜಿಲ್ಲೆ ಮೂಲದ ರಾಜು (30) ಹಾಗೂ ಶಬ್ಬೀರ್ ಮತ್ತು ಮೇಸ್ತ್ರಿ ರಾಘವೇಂದ್ರ (37) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಹಾಗೂ ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಉಡುಪಿ ಮತ್ತು ಕುಂದಾಪುರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಎಸ್ಪಿ ನಿಖಿಲ್ ಬಿ, ಶಿವಮೊಗ್ಗ
ಘಾಟಿ ಸಂಚಾರ ಅಸ್ತವ್ಯಸ್ತ
ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಲೆನಾಡು ಮತ್ತು ಕರಾವಳಿ ಭಾಗಗಳನ್ನು ಬೆಸೆಯುವ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹುಲಿಕಲ್ ಘಾಟಿ ಇದೇ ಸ್ಥಳದಲ್ಲಿ ಈ ಹಿಂದೆಯೂ ಇಂತಹದೇ ಭೂಕುಸಿತ ಪ್ರಕರಣಗಳು ವರದಿಯಾಗಿದ್ದವು. ಇನ್ನೂ ಘಾಟಿ ರಸ್ತೆಯಲ್ಲಿ ಸಂಭವಿಸಿದ ದುರಂತ ಹಿನ್ನೆಲೆಯಲ್ಲಿ ಘಾಟಿ ಸಂಚಾರ ಬಹುತೇಕ ಬಂದ್ ಆಗಿದ್ದು, ವೆಹಿಕಲ್ಗಳನ್ನು ನಗರ ನಿಟ್ಟೂರು ಕೊಲ್ಲೂರು ಘಾಟಿಯ ಮೂಲಕ ಕಳುಹಿಸಲಾಗುತ್ತಿದೆ.








