ಶಿವಮೊಗ್ಗ : ನಗರದ ಕೃಷಿನಗರದಲ್ಲಿ ಕಾರು ತೊಳೆಯುವ ವಿಚಾರವಾಗಿ ಅಕ್ಕಪಕ್ಕದ ಮನೆಯವರ ನಡುವೆ ನಡೆದ ಸಣ್ಣ ಮನಸ್ತಾಪವೊಂದು ವಿಕೋಪಕ್ಕೆ ತಿರುಗಿ, ಪರಸ್ಪರ ಹಲ್ಲೆ ನಡೆಸಿಕೊಂಡಿರುವ ಘಟನೆ ಸಂಭವಿಸಿದೆ. ಈ ಗಲಾಟೆಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಇಬ್ಬರು ಜೀವಾವಧಿ ಕೈದಿ ಸೇರಿ ರಾಜ್ಯದೆಲ್ಲೆಡೆ 30 ಕೈದಿಗಳ ರಿಲೀಸ್!
ಘಟನೆಗೆ ಮೂಲ ಕಾರಣ ಕಾರು ತೊಳೆಯುವ ನೀರು. ವಾಹನ ಚಾಲಕರೊಬ್ಬರು ತಮ್ಮ ಮನೆಯ ಆವರಣದಲ್ಲಿ ಕಾರು ತೊಳೆಯುವಾಗ, ಆ ನೀರು ಪಕ್ಕದ ಮನೆಯ ಗೋಡೆಗೆ ಅಥವಾ ಕಿಟಕಿಯ ಮೂಲಕ ಒಳಗೆ ಸಿಡಿಯುತ್ತಿದೆ ಎಂಬ ವಿಚಾರವಾಗಿ ಈ ಹಿಂದೆಯೇ ಹಲವು ಬಾರಿ ಕಿರಿಕಿರಿ ಉಂಟಾಗಿತ್ತು. ಶನಿವಾರ ರಾತ್ರಿ ಚಾಲಕ ಕಾರು ತೊಳೆಯುತ್ತಿದ್ದಾಗ ಇದೇ ವಿಷಯಕ್ಕೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಚಾಲಕ ನೀಡಿರುವ ದೂರಿನ ಪ್ರಕಾರ, ತಾವು ಕೆಲಸ ಮುಗಿಸಿ ಬಂದು ಕಾರು ತೊಳೆಯುತ್ತಿದ್ದಾಗ ನೆರೆಮನೆಯವರು ಅನಗತ್ಯವಾಗಿ ಗಲಾಟೆ ತೆಗೆದು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತಲೆಗೆ ಪೆಟ್ಟಾಗಿದ್ದು, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ನೆರೆಮನೆಯ ಹಿರಿಯರು ನೀಡಿರುವ ದೂರಿನಲ್ಲಿ, ಗೋಡೆ ಹಾಳಾಗುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಚಾಲಕ ಅತಿರೇಕದಿಂದ ವರ್ತಿಸಿ, ತಮ್ಮನ್ನು ತಳ್ಳಿ ಹಣೆಗೆ ಕಲ್ಲಿನಿಂದ ಹೊಡೆದಿದ್ದಾನೆ ಎಂದು ದೂರಿದ್ದಾರೆ.
ಸದ್ಯ ಪೊಲೀಸರು ಎರಡೂ ಕಡೆಯ ದೂರುಗಳನ್ನು ಸ್ವೀಕರಿಸಿದ್ದು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
Neighbours Clash Over Car Washing in Shivamogga






