ಶಿವಮೊಗ್ಗ: ನಗರದ ಶರಾವತಿ ನಗರದ 2ನೇ ಕ್ರಾಸ್ನಲ್ಲಿ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಮನೆ ಖರೀದಿ ವಿಚಾರದಲ್ಲಿ ನಡೆದ ಗಲಾಟೆಯೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಶಿವಮೊಗ್ಗ: ಮಾ. 1 ರಂದು ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಘಟನೆಯ ವಿವರ: ಮಾರ್ಚ್ 3ರಂದು ರಾತ್ರಿ ಶರಾವತಿ ನಗರದ ನಿವಾಸಿ ಸುರೇಶ್ ಎಂಬುವವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಮುಸುಕುಧಾರಿಗಳು ಆಯುಧಗಳಿಂದ ಒಡೆದು ಪರಾರಿಯಾಗಿದ್ದರು. ಈ ಬಗ್ಗೆ ಸುರೇಶ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್ ಕೆ., ಪ್ರಶಾಂತ್ ಹಾಗೂ ಸತೀಶ್ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಮನೆ ಖರೀದಿ ವಿಚಾರವಾಗಿ ನಡೆದ ಜಗಳದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿಂದೆ ದೂರುದಾರ ಸುರೇಶ್ ಖರೀದಿಸಬೇಕಿದ್ದ ಆಸ್ತಿಯನ್ನು ಆರೋಪಿ ಸತೀಶ್ ಖರೀದಿಸಿದ್ದನು. ಈ ಹಿನ್ನೆಲೆಯಲ್ಲಿ ಸತೀಶ್ ಹಾಗೂ ಸುರೇಶ್ ನಡುವೆ ಜಗಳ ನಡೆದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು-ಪ್ರತಿಕೇಸುಗಳು ದಾಖಲಾಗಿದ್ದವು.
ಇದೇ ಹಳೆಯ ದ್ವೇಷವನ್ನು ಸತೀಶ್ ತನ್ನ ಸ್ನೇಹಿತರಾದ ಶರತ್ ಮತ್ತು ಪ್ರಶಾಂತ್ ಬಳಿ ಹೇಳಿಕೊಂಡಿದ್ದನು. ಬಳಿಕ ಮೂವರು ಸೇರಿ ಮದ್ಯದ ಅಮಲಿನಲ್ಲಿ ಸುರೇಶ್ಗೆ ಸೇರಿದ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ. ಇದರಿಂದ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.
Shivamogga Car Vandalism 3 Arrested


