shivamogga Mar 13, 2024 Eshwarappa,MP BY Raghavendra ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗುತ್ತಿದ್ದಂತೆ ಕೆ.ಎಸ್.ಈಶ್ವರಪ್ಪನವರ ಮನೆಗೆ ಮಾಧ್ಯಮಗಳು ದೌಡಾಯಿಸಿದೆ. ಇನ್ನೂ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಭಾವುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಕೆಇ ಕಾಂತೇಶ್ ಹಾಗೂ ಅವರ ಪತ್ನಿ ಈ ವಿಚಾರದಲ್ಲಿ ಭಾವುಕರಾಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನೂ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತಲೇ ಹಲವು ಬೆಳವಣಿಗೆಗಳು ಕೆ.ಎಸ್.ಈಶ್ವರಪ್ಪನವರ ಮನೆಯಲ್ಲಿ ನಡೆದಿದೆ. ಅಲ್ಲದೆ ಫೋನ್ ಕಾಲ್ ಒಂದು ಬಂದ ಬೆನ್ನಲ್ಲೆ ಕೆಎಸ್ ಈಶ್ವರಪ್ಪ ಮತ್ತವರ ಪುತ್ರ ವಾಹನದಲ್ಲಿ ಹೊರಕ್ಕೆ ತೆರಳಿದ್ದಾರೆ. ಈ ವೇಳೆ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಯನ್ನ ನೀಡಲಿಲ್ಲ.
ಇನ್ನೊಂದೆಡೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 4 ನೇ ಬಾರಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿ.ವೈ. ರಾಘವೇಂದ್ರರವರ ಶಿವಮೊಗ್ಗ ನಿವಾಸದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ಶಿವಮೊಗ್ಗದ ವಿನೋಬನಗರದಲ್ಲಿರುವ ಅವರ ಸ್ವಗೃಹದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಂಭ್ರಮ ಹಂಚಿಕೊಳ್ಳಲಾಘಿದೆ.
ರಾಘವೇಂದ್ರ ನಿವಾಸದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು, ರಾಘವೇಂದ್ರರನ್ನು ಎತ್ತಿಕೊಂಡು ಘೋಷಣೆಗಳನ್ನು ಕೂಗಿದರು. ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇನ್ನೂ ಇದೇ ವೇಳೆ ಮಾತನಾಡಿದ ಅವರು, ‘ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದಾರೆ, ಸತತ 4ನೇ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ,ಗೃಹ ಸಚಿವ ಅಮಿತ್ ಶಾ ಗೆ ಧನ್ಯವಾದಗಳು ತಿಳಿಸಿದ್ದಾರೆ.