Shivamogga Kote Sri Marikamba jatre | ನಿನ್ನೆ ಚಪ್ಪರ, ಇವತ್ತು ಸಾರಾ! ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಕೇಳ್ರಪ್ಪೋ ಕೇಳಿ! ಪೂರ್ತಿ ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

Shivamogga Mar 5, 2024  | Shivamogga Kote Sri Marikamba jatre | ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಗೆ ಸಿದ್ದತೆಗಳು ಮುಖ್ಯ ಹಂತಕ್ಕೆ ಬಂದು ತಲುಪಿದೆ. ನಿನ್ನೆಯಷ್ಟೆ ಗಾಂಧಿಬಜಾರ್​ನಲ್ಲಿ ವಿದ್ಯುಕ್ತವಾಗಿ ಕೋಟೆ ಮಾರಿಕಾಂಬಾ ಜಾತ್ರೆಗೆ ಚಪ್ಪರ ಶಾಸ್ತ್ರವನ್ನ ನೆರವೇರಸಲಾಗಿತ್ತು. ಚಪ್ಪರ ಶಾಸ್ತ್ರ ನಡೆವಾಗ ಶ್ರೀ ಕೋಟೆ ಮಾರಿಕಾಂಬಾ  ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.‌ ಮಂಜುನಾಥ್‌, ಪೂಜಾ ಕನ್ವಿನರ್‌ ಸತ್ಯನಾರಾಯಣ, ಕಾರ್ಯದರ್ಶಿ ಲೋಕೇಶ್‌, ಸಹ ಕಾರ್ಯದರ್ಶಿ ಸುನೀಲ್‌, ಡಿ.ಎಸ್‌.ಚಂದ್ರಶೇಖರ್‌, ಪ್ರಭಾಕರ ಗೌಡ, ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಹಾಜರಿದ್ದರು. 

ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ

ನಿನ್ನೆ ಚಪ್ಪರಶಾಸ್ತ್ರ  ಇವತ್ತು ಸಾರಾ

ಇನ್ನೂ ಇವತ್ತು ಕೋಟೆ ಮಾರಿಕಾಂಬಾ ದೇವಿ ಜಾತ್ರೆಯ ಅಂಗವಾಗಿ ಜಾತ್ರೆಯ ಸಾರಾ ಹೊಡೆಯಲಾಗಿದೆ. ಅಂದರೆ ಶಿವಮೊಗ್ಗದಲ್ಲಿ ಇಂತಹ ದಿನ ಕೋಟೆ ಮಾರಿಕಾಂಬಾ ದೇವಿಯ ಜಾತ್ರೆ ನಡೆಯಲಿದೆ ಎಲ್ಲರೂ ಪಾಲ್ಗೊಳ್ಳಬೇಕು ಎಂಬ ಕರೆಯೋಲೆಯನ್ನು ನೀಡುವ ರೀತಿಯಲ್ಲಿ ಡಂಗುರವನ್ನ ಸಾರಲಾಗುತ್ತದೆ.

ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ

ಆಟೋಗಳ ಮೂಲಕ ಪ್ರತಿ ಎರಿಯಾಗಳಲ್ಲಿಯು ಸಾರಲಾಗುತ್ತದೆ. ಪದ್ದತಿಯಂತೆ ಇದನ್ನ ಸಾರಾ ಹಾಕುವುದು ಎನ್ನಲಾಗುತ್ತದೆ. ಈ ವಿಧಾನಕ್ಕೆ ಇವತ್ತು ದೇವಸ್ಥಾನದ ಸಮಿತಿಯು ಚಾಲನೆ ನೀಡಿದೆ. 

ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ

ಕೋಟೆ ಶ್ರೀ  ಮಾರಿಕಾಂಬಾ ಜಾತ್ರೆಯ ವಿವರಗಳು

ಮಾರ್ಚ್ 12 ರ ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ಬಿ.ಬಿ.ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ.  ನಂತರ ಆ ಕುಟುಂಬದ ಮುತ್ತೈದೆಯರು ಬಾಸಿಂಗದೊಂದಿಗೆ ಮಂಗಳ ವಾದ್ಯದದ ಸಮೇತ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ.

ತದ ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ ಮಂಗಳವಾರ ರಾತ್ರಿ 10 ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡಿಲಕ್ಕಿ ನೀಡಿ ಉಡಿ ತುಂಬಿ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ .

ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ

ಹಾಗೆಯೇ ಅದೇ ದಿನ ಮಾರಿ ಗದ್ದುಗೆಯಲ್ಲಿ ಬೆಳಿಗ್ಗೆ 5 ರಿಂದ ಎಡೆ ಪೂಜೆ ಆರಂಭವಾಗುತ್ತದೆ. ನಂತರ ಮಂಗಳವಾರ ರಾತ್ರಿ 9 ಗಂಟೆಗೆ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಗಾಂಧಿಬಜಾರ್​​ನಿಂದ ಮೆರವಣಿಗೆಯಲ್ಲಿ ಉಪ್ಪಾರ ಸಮಾಜ ಬಾಂಧವರು ಗದ್ದಿಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. 

Malenadu Today Shivamogga

ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗೆಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮಾಜ ಬಾಂಧವರು ಬೇವಿನುಡುಗೆಯೊಂದಿಗೆ ಆಗಮಿಸಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. 

ತದನಂತರ ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ ಪೂಜೆ ಸಲ್ಲಿಸುತ್ತಾರೆ. ಬುಧವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 10 ಗಂಟೆಯವರೆಗೆ ವಾಲ್ಮೀಕಿ ಸಮಾಜದವರು, 10 ರಿಂದ 2 ಗಂಟೆಯವರೆಗೆ ಉಪ್ಪಾರ ಸಮಾಜದವರು, ತದನಂತರ ರಾತ್ರಿ 11 ಗಂಟೆ ವರೆಗೆ ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಗದ್ದಗೆಯಲ್ಲಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. 

ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ

ಮಾರ್ಚ್ 16 ರ ಶನಿವಾರ ರಾತ್ರಿ 7 ಗಂಟೆಗೆ ಸಮಿತಿ ವತಿಯಿಂದ ದೇವಿಗೆ ಮಹಾಮಂಗಳಾರತಿ ಸಲ್ಲಿಸಿದ್ದನಂತರ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜಾನಪದ ತಂಡಗಳ ಮೆರುಗಿನೊಂದಿಗೆ ಲಕ್ಷಾಂತರ ಮಂದಿ ಭಕ್ತಾದಿಗಳು ಅತ್ಯಂತ ಸಂಭ್ರಮದಿಂದ ಅಮ್ಮನವರ ವನಪ್ರವೇಶ ನಡೆಯಲಿದೆ. 

ಈ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ಅಮ್ಮನವರನ್ನು ಮಧ್ಯರಾತ್ರಿ ವನಕ್ಕೆ ತೆಗೆದುಕೊಂಡು ಹೋಗಿ ಅಂತಿಮವಾಗಿ ಸಮಾಜದ ಸಂಪ್ರದಾಯದಂತೆ ಶಾಸ್ತ್ರವನ್ನು ನಡೆಸಿ, ಪೂಜೆ ಸಲ್ಲಿಸಿ ವನದಿಂದ ಹಿಂದಿರುಗುತ್ತಾರೆ.

Malenadu Today Shivamogga

ಇನ್ನು ಜಾತ್ರೆಯ ಅಂಗವಾಗಿ ಮಾರ್ಚ್ 15 ರಿಂದ 17 ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯದ ಪೈಲ್ವಾನರುಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ  ಅಂತರರಾಜ್ಯದ ಹೆಸರಾಂತ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ನಡೆಸಲಾಗುತ್ತದೆ 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor