Shivamogga | Feb 3, 2024 | ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಾಪತ್ತೆಯಾದ ಮಹಿಳೆಯ ಪ್ರಕರಣ ಸಂಬಂಧ ನಾಲ್ಕು ವರ್ಷಗಳ ಬಳಿಕ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸೂಳೆಕೆರೆ ಸಮೀಪ ಸಮಾದಿ ಮಾಡಲಾಗಿದ್ದ ಮೃತದೇಹವನ್ನು ಹೊರತೆಗೆಯಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಅರತೊಳಲು ಕೈಮರದ ಸಮೀಪದ ನಿವಾಸಿ ನಾಗರತ್ನಮ್ಮ ಎಂಬವರು ಕಾಣೆಯಾಗಿದ್ದರು. ಈ ಸಂಬಂಧ ಪ್ರಕರಣ ಸಹ ದಾಖಲಾಗಿತ್ತು. ಇದೇ ಸಂದರ್ಭದಲ್ಲಿ 40 ವರ್ಷದ ಮಹಿಳೆಯ ಮೃತದೇಹವೊಂದು ಭದ್ರಾ ನಾಲೆಯಲ್ಲಿ ಕೊಚ್ಚಿಕೊಂಡು ಬಂದು ಸೂಳೆಕೆರೆ ಸಮೀಪ ಪತ್ತೆಯಾಗಿತ್ತು. ವಾರಸ್ಸುದಾರರು ಇಲ್ಲದ ಕಾರಣಕ್ಕೆ ಮೃತರನ್ನು ಪೊಲೀಸರು ಸಮಾದಿ ಮಾಡಿದ್ದರು.
2020 ರಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಕಾಣೆಯಾದ ಮಹಿಳೆಯ ಫೋಟೋಗೂ ಸೂಳೆಕೆರೆ ಸಮೀಪ ಸಮಾದಿ ಮಾಡಿದ್ದ ಮಹಿಳೆಯ ಮೃತದೇಹಕ್ಕೂ ಹೋಲಿಕೆ ಕಂಡು ಬಂದಿತ್ತು. ಈ ಸಂಬಂಧ ಚನ್ನಗಿರಿ ಹಿರಿಯ ಸಿವಿಲ್ ಹಾಗೂ ಜೆಎಂಫಿಸಿ ಕೋರ್ಟ್ನಲ್ಲಿ ಪಿಟಿಷನ್ ಹಾಕಲಾಗಿತ್ತು. ಈ ಸಂಬಂಧ ಇದೀಗ ಕೋರ್ಟ್ ಆದೇಶ ಹೊರಬಿದ್ದಿದೆ.
ಈ ನಿಟ್ಟಿನಲ್ಲಿ ಕೋರ್ಟ್ ಆದೇಶದನ್ವಯ ಸೂಳೆಕೆರೆ ಸಮೀಪ ಮಣ್ಣುಮಾಡಲಾಗಿದ್ದ ಮೃತದೇಹವನ್ನು ಎಫ್ಎಸ್ಎಲ್ ತಜ್ಞರು ಹಾಗೂ ವೈದ್ಯರ ಸಮ್ಮುಖದಲ್ಲಿ ಹೊರಕ್ಕೆ ತೆಗೆದು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದೆ.