SHIVAMOGGA | Dec 6, 2023 | ಹಾಸನದಲ್ಲಿ ದೈತ್ಯ ಕಾಡಾನೆ ಜೊತೆಗಿನ ಕಾಳಗದಲ್ಲಿ ಅಂಬಾರಿ ಆನೆ ಅರ್ಜುನ ಸಾವನ್ನಪ್ಪಿದ ಘಟನೆ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಘಟನೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದು, ಪ್ರಾಣಿಪ್ರಿಯರು ಸ್ಥಳದಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಈ ನಡುವೆ ಕೆಲವೊಂದು ವಿಡಿಯೋಗಳು ವೈರಲ್ ಆಗಿದ್ದು, ಅರ್ಜುನನ ಕಾಲಿಗೆ ಗುಂಡು ಬಿದ್ದಿತ್ತು ಎಂಬ ಆರೋಪವೊಂದು ಕೇಳಿಬರುತ್ತಿದೆ. ಈ ಸಂಬಂಧ ಮಾವುತನೊಬ್ಬ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಅರ್ಜುನ ಆನೆ ಸಾವಿಗೆ ಕಾರಣವೇನು?
ಕಾಡಾನೆಗಳ ಗುಂಪನ್ನ ಲೀಡ್ ಮಾಡುತ್ತಿದ್ದ ಕಾಡಾನೆಯನ್ನು ಹಿಡಿಯುಲು ಮುಂದಾದ ಅರಣ್ಯ ಇಲಾಖೆ ತಂಡಕ್ಕೆ ಆ ಆನೆಯೇ ಪ್ರತಿದಾಳಿ ಮಾಡಿ ಶಾಕ್ ಕೊಟ್ಟಿತ್ತು. ಈ ವೇಳೇ ವೈದ್ಯರ ತಂಡ ಆನೆಗೆ ಗುರಿ ಮಾಡಿ ಅರವಳಿಕೆ ಚುಚ್ಚು ಮದ್ದು ಫೈರ್ ಮಾಡಿದ್ದರು. ಆದರೆ ಈ ಇಂಜೆಕ್ಷನ್ ಕಾಡಾನೆಯ ದಾಳಿಯನ್ನ ತಡೆಯುತ್ತಿದ್ದ ಅರ್ಜುನನ ಕಾಲಿಗೆ ಬಿದ್ದಿತ್ತು. ಇದರಿಂದ ಆತ ಬಲಕಳೆದುಕೊಂಡು ಕಾಡಾನೆಯ ದಾಳಿಗೆ ಬಲಿಯಾದ ಎಂಬದು ಆರೋಪ.
ಅರಣ್ಯ ಇಲಾಖೆ ಪ್ರಕಟಣೆ
ಈ ಬಗ್ಗೆ ಅರಣ್ಯಇಲಾಖೆ ಅಲ್ಲಗಳೆಯುತ್ತಿದ್ದು, ತನ್ನದೇ ಪ್ರಕಟಣೆಯನ್ನು ನೀಡಿದೆ. ಅರಣ್ಯ ಇಲಾಖೆ ನೀಡಿರುವ ಪ್ರಕಟಣೆಯಲ್ಲಿ ಏನಿದೆ ಎಂಬುದನ್ನ ನೋಡುವುದಾದರೆ, ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐಎಫ್ಎಸ್ ಡಿ ಮೋಹನ್ ಕುಮಾರ್ ಈ ಪ್ರಕಟಣೆಯನ್ನು ನೀಡಿದ್ದಾರೆ.
ಹಾಸನ ಅರಣ್ಯ ವಿಭಾಗ
ಹಾಸನ ಅರಣ್ಯ ವಿಭಾಗದ ಆಲೂರು, ಬೇಲೂರು, ಸಕಲೇಶಪುರ ಮತ್ತು ಯಸಳೂರು ವಲಯಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಮತ್ತು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಯ 11ನೇ ದಿನವಾದ ಇಂದು (ದಿನಾಂಕ : 04.12.2023) ಆನೆ ಕಾರ್ಯಪಡೆ ತಂಡದ ಸದಸ್ಯರು ಮತ್ತು ವಿಶೇಷ ಕಾವಾಡಿಗರು ಉಪಟಳ ನೀಡುತ್ತಿದ್ದ ಕಾಡಾನೆಗಳ ಗುಂಪೊಂದು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪದ ಕೆ.ಎಫ್.ಡಿ.ಸಿ ನೆಡುತೋಪಿನ ಬಳ ಇರುವುದನ್ನು ಪತ್ತೆಹಚ್ಚಿ ಮಾಹಿತಿ ನೀಡಲಾಗಿತ್ತು.
READ : ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು! ನಡೆದಿದ್ದರ ಬಗ್ಗೆ ಎಸ್ಪಿ ಹೇಳಿದ್ದೇನು?
ಅರ್ಜುನ, ಸುಗ್ರೀವ, ಅಶ್ವಥಾಮ, ಧನಂಜಯ, ಕರ್ನಾಟಕ ಭೀಮ, ಪ್ರಶಾಂತ
ಈ ಮಾಹಿತಿ ಮೇರೆಗೆ ಬೇಲೂರಿನ ಚಿಕ್ಕೋಡು ಕ್ಯಾಂಪ್ನಿಂದ ಸುಮಾರು ಸಮಯ 11 : 30 ಕ್ಕೆ ಅರ್ಜುನ್, ಸುಗ್ರೀವ, ಅಶ್ವಥಾಮ, ಧನಂಜಯ, ಕರ್ನಾಟಕ ಭೀಮ, ಪ್ರಶಾಂತ ಎಂಬ 06 ಕುಮ್ಮಿ ಆನೆಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈಧ್ಯಾಧಿಕಾರಿಗಳಾದ ಡಾ|| ರಮೇಶ ಹೆಚ್, ದುಬಾರೆ ಆನೆ ಶಿಬಿರದ ಉಪ ವಲಯ ಅರಣ್ಯ ಅಧಿಕಾರಿಯಾದ ರಂಜನ್ ಮತ್ತು ಇಲಾಖಾ ಅಧಿಕಾರಿ/ ಸಿಬ್ಬಂದಿಗಳೊಂದಿಗೆ ತಂಡವು ತೆರಳಿ ಪರಿಶೀಲಿಸಲಾಗಿ ಉಪಟಳ ನೀಡುತ್ತಿದ್ದ 01 ಕಾಡಾನೆಯು ಸದರಿ ಕಾಡಾನೆಯ ಗುಂಪಿನಲ್ಲಿ ಇರುವುದು ಕಂಡುಬಂದಿರುತ್ತದೆ.
ಮಸ್ತಿನಲ್ಲಿದ್ದ ಕಾಡಾನೆ
ಸದರಿ ಕಾಡಾನೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿ ಗುಂಪಿನಲ್ಲಿದ್ದ ಇತರೆ 12 ಕಾಡಾನೆಗಳನ್ನು ಸದರಿ ಕಾಡಾನೆಯು ರಕ್ಷಣೆ ಮಾಡುತ್ತಿರುವುದು ಕಂಡುಬಂದಿರುತ್ತದೆ. ಅದೇ ಕಾಡಾನೆಯನ್ನು ಸೆರೆ ಹಿಡಿಯಬೇಕಾಗಿದ್ದರಿಂದ ಚುಚ್ಚುಮದ್ದು ನೀಡಲು ಮುಂದಾದ ಸಂದರ್ಭದಲ್ಲಿ ಸದರಿ ಕಾಡಾನೆಯು ಬಲಿಷ್ಟವಾಗಿದ್ದು, ಮಸ್ತಿನಲ್ಲಿದ್ದಿದ್ದರಿಂದ ಕುಮ್ಮಿ ಆನೆಗಳ ಮೇಲೆ ಏಕಾಏಕಿ ದಾಳಿ ಮಾಡಲು ಪ್ರಾರಂಭಿಸಿರುತ್ತದೆ.
ಗಾಳಿಯಲ್ಲಿ ಹಲವಾರು ಬಾರಿ ಗುಂಡು
ಆ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿಗಳು ಗಾಳಿಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿರುತ್ತಾರೆ. ಆದರೂ ಸಹ ಸದರಿ ಕಾಡಾನೆಯು ಕುಮ್ಮಿ ಆನೆಗಳ ಮೇಲೆ ದಾಳಿಯನ್ನು ಮುಂದುವರೆಸಿರುತ್ತದೆ. ಸದರಿ ಸಮಯದಲ್ಲಿ ಕುಮ್ಮಿ ಆನೆಗಳು ಹಿಂದಿರುಗುವಾಗ ಕಾಡಾನೆಯು ಅರ್ಜುನ ಆನೆಯ ಮೇಲೆ ನಿರಂತರವಾಗಿ ದಾಳಿ ಮಾಡಿ, ಅರ್ಜುನ ಆನೆಯ ಎಡಕಿವಿಯ ಪಕ್ಕದ ಹೊಟ್ಟೆಯ ಭಾಗಕ್ಕೆ ಕೋರೆಯಿಂದ ಬಲವಾಗಿ ತಿವಿದ ಕಾರಣ ಅರ್ಜುನ ಆನೆಯು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತದೆ.
ಮೈಸೂರು ದಸರಾ ಉತ್ಸವ
ಸದರಿ ಮೃತಪಟ್ಟ ಅರ್ಜುನ ಆನೆಯು 2012 ರಿಂದ 2019ರವರೆಗಿನ ಮೈಸೂರು ದಸರಾ ಉತ್ಸವದಲ್ಲಿ ಒಟ್ಟು 08 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದು. ಕಳೆದ ಬಾರಿಯೂ ಸಹ ದಸರಾ ಕಾರ್ಯಕ್ರಮದಲ್ಲಿ ನಿಶಾನೆ ಆನೆಯಾಗಿ ತಂಡವನ್ನು ಮುನ್ನೆಡೆಸಿರುತ್ತದೆ. ಆದುದರಿಂದ ಸದರಿ ಅರ್ಜುನ ಆನೆಯ ಅಂತ್ಯ ಸಂಸ್ಕಾರ ನಡೆಸುವ ಕುರಿತು ಮೈಸೂರು ರಾಜಮನೆತನದ ಪುರೋಹಿತರಾದ ಪ್ರಹ್ಲಾದ್ ರವರನ್ನು ಸಂಪರ್ಕಿಸಿ, ದಿನಾಂಕ : 05.12.2023ರಂದು ಸಮಯ 12 :00 ಗಂಟೆಗೆ ಅರ್ಜುನ ಆನೆಯು ಮೃತಪಟ್ಟಿರುವ ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪದ ಕೆ.ಎಫ್.ಡಿ.ಸಿ ನೆಡುತೋಪಿನಲ್ಲಿ ಸದರಿಯವರ ಉಪಸ್ಥಿತಿಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಹಾಗೂ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ತೀರ್ಮಾನಿಸಲಾಯಿತು.
