| ಮಿಡಿದ ಹೃದಯಗಳು | ಮಗನ ಆಸೆ | ಪೋಷಕರ ಮನವಿ | ಮಾನವೀಯತೆ ಮೆರೆದ ಎಸ್ಪಿ | ಅದಿಕಾರ ಹಸ್ತಾಂತರಿಸಿದ ಇನ್ ಸ್ಪೆಕ್ಟರ್ | ಅರ್ದ ಗಂಟೆ ಪೊಲೀಸ್ ಅಧಿಕಾರಿಯಾದ ಬಾಲಕನ ಹಿಂದಿದೆ ನೂರೆಂಟು ನೋವು

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಎಂಟುವರೆ ವರ್ಷದ ಬಾಲಕ ಅಧಿಕಾರ ಸ್ವೀಕರಿಸಿ ಎಲ್ಲರಿಗೂ ಹುಬ್ಬೇರುವಂತೆ ಮಾಡಿದ್ದಾನೆ. ನೇಮಕವಾದ ಕೆಲವೇ ನಿಮಿಷದಲ್ಲಿ ಖಡಕ್ ಆದೇಶ ನೀಡಿ ಸಿಬ್ಬಂದಿಗೆ ಅಲರ್ಟ್ ಮಾಡಿದ್ದಾನೆ. ಓರ್ವ ಪೇದೆಗೆ ರಜೆಯನ್ನು ಸಹ ನೀಡಿದ್ದಾನೆ. ಇದು ರಿಯಲ್ ಕಥೆ ಅಲ್ಲದಿದ್ದರೂ ರೀಲ್ ಕೂಡ ಅಲ್ಲ. ದೊಡ್ಡಪೇಟೆ ಪೊಲೀಸ್ ಠಾಣೆ ಬುಧವಾರ ಸಂಜೆ ಅಪರೂಪದ ಮನಕಲುಕುವ ಕ್ಷಣಕ್ಕೆ ಸಾಕ್ಷಿಯಾಗಿತ್ತು. 

ದೊಡ್ಡಪೇಟೆ ಪೊಲೀಸ್ ಠಾಣಾಧಿಕಾರಿಯಾದ ಪುಟ್ಟ ಬಾಲಕ

ಬಾಲಕನ ಆಸೆ ಈಡೇರಿಸಿದ ಎಸ್ಪಿ ಮಿಥುನ್ ಕುಮಾರ್

ಪೊಲೀಸ್ ಜೀಪಿನಲ್ಲಿ ಬಂದಿಳಿದು, ಸಿಬ್ಬಂದಿಗಳಿಂದ ಸೆಲ್ಯೂಟ್ ಸ್ವೀಕರಿಸಿ, ಠಾಣೆಗೆ ಬಂದ ಪುಟ್ಟ ಬಾಲಕನನ್ನು ಕಂಡು ಅಲ್ಲಿ ನೆರೆದವರು ಅಚ್ಚರಿಗೊಂಡಿದ್ದರು. ಪೊಲೀಸ್ ಅಧಿಕಾರಿಯಾಗಿ ಠಾಣೆಗೆ ಬಂದ ಬಾಲಕ  ಅರ್ಧ ಗಂಟೆ ಕರ್ತವ್ಯವನ್ನು ಕೂಡ ನಿರ್ವಹಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ. ಹೌದು ಎಂಟೂವರೆ ವರ್ಷದ ಬಾಲಕ ಆಜಾನ್ ಖಾನ್‌ಗೆ ಅರ್ದ  ಕಾಲ ಇನ್ಸ್ಪೆಕ್ಟರ್ ಆಗುವ ಅವಕಾಶ ಸಿಕ್ಕಿತ್ತು. ಖುದ್ದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಇನ್ಸ್ ಪೆಕ್ಟರ್‌ಗೆ ಸ್ವಾಗತ ಮಾಡಿ ಅಧಿಕಾರ ವಹಿಸಿಕೊಟ್ಟರು. ಇನ್ಸ್ಪೆಕ್ಟರ್ ಖುರ್ಚಿಯಲ್ಲಿ ಕುಳಿತ ಕೂಡಲೇ ಸಿಬ್ಬಂದಿ ಆರೋಗ್ಯ ವಿಚಾರಿಸಿದ. ಓರ್ವ ಸಿಬ್ಬಂದಿಗೆ  ರಜೆ ಕೂಡ ಮಂಜೂರು ಮಾಡಿದ. ಕಳ್ಳಕಾಕರಿಗೆ ಆವಾಜ್ ಹಾಕಿ ಇನ್ಮುಂದೆ ಇಂತಹ ಕೆಲಸ ಮಾಡದಂತೆ ಸಲಹೆ ಕೂಡ ನೀಡಿದ.

Malenadu Today Shivamogga

ಚಿಕ್ಕಮಗಳೂರು ಜಿಲ್ಲೆಯ. ಬಾಳೆಹೊನ್ನೂರು ತಬ್ರೇಜ್ ಖಾನ್ ಮತ್ತು ನಗ್ಮಾ ಖಾನ್ ದಂಪತಿಯ  ಪುತ್ರ ಆಜಾನ್ ಖಾನ್ ಎಂಬ ಬಾಲಕನಿಗೆ ಪೊಲೀಸ್ ಅಧಿಕಾರಿಯಾಗಬೇಕೆಂದು ಆಸೆ ಇತ್ತು. ಚಿಕ್ಕ ವಯಸ್ಸಿನಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ ಹೊಂದಿದ್ದ ಬಾಲಕನಿಗೆ, ಹುಟ್ಟಿನಿಂದಲೇ ಆರೋಗ್ಯ ಕೈಕೊಟ್ಟಿತ್ತು.  ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ಪೊಷಕರಲ್ಲಿ ನಾನು ಪೊಲೀಸ್ ಆಗಬೇಕೆಂಬ ಬಯಯನ್ನು ವ್ಯಕ್ತಪಡಿಸಿದ್ದ. ಮಗನ ಆಸೆಯನ್ನು ಈಡೇರಿಸಲು  ಮುಂದಾಗ ಪೋಷಕರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಬಳ  ಅಳಲು ತೋಡಿಕೊಂಡಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಪೋಷಕರ ಕೋರಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

Malenadu Today Shivamogga

ಮಿಥುನ್ ಕುಮಾರ್ ಬಾಲಕನಿಗೆ ಪೊಲೀಸ್ ಅಧಿಕಾರಿಯಾಗಲು ಅನುವು ಮಾಡಿಕೊಟ್ಟ ನಂತರ, ಪೊಲೀಸರು ಸಮವಸ್ತ್ರದ ವ್ಯವಸ್ಥೆಯನ್ನು ಮಾಡಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಯುನಿಫಾರಂ ತೊಟ್ಟು ಬಾಲಕ ಜೀಪಿನಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಬಾಲಕನಿಗೆ ಅದ್ಧೂರಿ ಸ್ವಾಗತ ನೀಡಿ ಪ್ರೀತಿ ತೋರಲಾಯಿತು. ಇನ್ ಸ್ಪೆಕ್ಟರ್ ಅಂಜನ್ ಕುಮಾರ್ ಬಾಲಕನಿಗೆ ಅಧಿಕಾರ ಹಸ್ತಾಂತರಿಸಿದರು. ಅರ್ದಗಂಟೆ ಇನ್ ಸ್ಪೆಕ್ಟರ್ ಛೇರಿನಲ್ಲಿ ಕೂತ ಬಾಲಕ ಸಿಬ್ಬಂದಿಗಳ ಕುಂದುಕೊರತೆ ವಿಚಾರಿಸಿದ್ದಾನೆ. ಓರ್ವ ಪೊಲೀಸ್ ಸಿಬ್ಬಂದಿಗೆ ರಜೆ ನೀಡಿದ್ದಾನೆ. ದೊಡ್ಡವನಾದ ಮೇಲೆ ನಾನು ಎಸ್‌ಪಿ ಆಗಬೇಕು ಅಂದುಕೊಂಡಿದ್ದೇನೆ. ನಾನು ಪೊಲೀಸ್‌ ಆಗಬೇಕು ಎಂದು ಅಪ್ಪನಿಗೆ ಹೇಳಿದೆ. ಈಗ ನನಗೆ ಖುಷಿಯಾಗಿದೆ. ಎಸ್‌ಪಿ ಸರ್‌ ಬಂದಿದ್ದರು. ಇಲ್ಲಿ ಬಂದಾಗ ಸ್ಟೇಷನ್‌ ತೋರಿಸಿದರು.

Malenadu Today Shivamogga

ಪೊಲೀಸ್ ಇಲಾಖೆಯಿಂದ ಸಹಕಾರಕ್ಕೆ ಪೋಷಕರು ಭಾವುಕರಾಗಿದ್ದಾರೆ. ನನ್ನ ಮಗನಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆ ಇದೆ. ಹತ್ತು ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇಂತಹ ಕಾಯಿಲೆ ಬರಲಿದೆಯಂತೆ. ಆತನ ಹೃದಯ ಬಳೆದಿಲ್ಲ. ವೈದ್ಯರು, ತಜ್ಞರ ಬಳಿ ತೋರಿಸಿದಾಗ ಶಸ್ತ್ರಚಿಕಿತ್ಸೆ ಮಾಡಲು ಆಗುವುದಿಲ್ಲ ಎಂದರು. ಹೃದಯ ಮತ್ತು ಶಾಸ್ವಕೋಶದ ಕಸಿ ಮಾಡಬೇಕು ಎಂದಿದ್ದಾರೆ. ಆತನಿಗೆ ಪೊಲೀಸ್‌ ಆಗಬೇಕು ಅನ್ನುವ ಆಸೆ ಇದೆ ಎಂದು ಪೋಷಕರು ಹೇಳಿದ್ದಾರೆ.

ಬಾಲಕನಿಗೆ ಅಧಿಕಾರ ಹಸ್ತಾಂತರಿಸಿದ ಇನ್ ಸ್ಪೆಕ್ಟರ್ ಅಂಜನ್ ಕುಮಾರ್ ಕೂಡ ಭಾವುಕರಾಗಿದ್ದಾರೆ. ಮಾನವೀಯ ನೆಲೆಯಲ್ಲಿ ಆ ಮಗುವನ್ನು ಒಂದು ಗಂಟೆ ಇನ್ಸ್‌ಪೆಕ್ಟರ್‌ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಬಹಳ ಖುಷಿಯಿಂದ ಒಂದು ಗಂಟೆ ಕಾಲ ಆ ಮಗುವಿನ ನನ್ನ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಠಾಣೆಯ ಸಿಬ್ಬಂದಿಯನ್ನು ಕರೆದು ರೋಲ್‌ ಕಾಲ್‌ ಮಾಡಿದ. ಒಬ್ಬ ಸಿಬ್ಬಂದಿ ಒಂದು ದಿನ ರಜೆ ಕೇಳಿದರೆ ಎರಡು ದಿನ ರಜೆಯನ್ನು ಕೊಟ್ಟಿದ್ದಾನೆ. ಮಗುವಿನ ಖುಷಿ ಕಂಡು ನಮಗೆ ಖುಷಿಯಾಯಿತು.

Malenadu Today Shivamogga

ಪೋಷಕರಿಗೆ ಮಗನ ಆಸೆ ಈಡೇಸಿದ ಸಾರ್ಥಕ ಭಾವ..ಪೊಲೀಸರಿಗೆ ಬಾಲಕನ ತಂದೆತಾಯಿಯ ಕನಸ್ಸನ್ನು ನನಸು ಮಾಡಿದ ತೃಪ್ತಿ ಎಲ್ಲರಲ್ಲೂ ಎದ್ದು ಕಾಣುತ್ತಿತ್ತು. ಕೇವಲ ಕಳ್ಳಕಾಕರಿಂದಲೇ ಸದ್ದು ಮಾಡುತ್ತಿದ್ದ ದೊಡ್ಡಪೇಟೆ ಪೊಲೀಸ್ ಠಾಣೆ ನೆನ್ನೆ ಮನಮಿಡಿಯುವ ಕ್ಷಣಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor