Shivamogga news : ಶಿವಮೊಗ್ಗ : ಓದು-ಬರಹ ಕಲಿತು ಸಾಕ್ಷರರಾಗುವುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬ ಅರಿವು ಮೂಡುತ್ತದೆ. ಇದು ಕಾನೂನಿನ ಬಗ್ಗೆ ಸರಿಯಾದ ತಿಳುವಳಿಕೆ ಪಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಅಕ್ಷರ ಕಲಿಕೆಯಿಂದ ಬದುಕಿನಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಸಂತೋಷ್ ಎಂ. ಎಸ್. ಹೇಳಿದ್ದಾರೆ.
ಸೋಮವಾರ ಕೇಂದ್ರ ಕಾರಾಗೃಹದಲ್ಲಿ ನಡೆದ 59ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
Shivamogga news ಸರ್ಕಾರದಿಂದ ಕಾರಾಗೃಹಗಳಲ್ಲಿ ಜಾರಿಯಾಗಿರುವ ಸಾಕ್ಷರತಾ ಯೋಜನೆಯಿಂದ ಓದು-ಬರಹ ಕಲಿತ ಕೈದಿಗಳು ತಮ್ಮ ಪ್ರಕರಣಗಳ ಕುರಿತು ಸೂಕ್ತ ಅರಿವು ಪಡೆದು, ಜೈಲಿನಿಂದ ಬೇಗನೆ ಬಿಡುಗಡೆ ಹೊಂದಲು ಸಾಧ್ಯವಾಗುತ್ತದೆ. ಕೈದಿಗಳಿಗೆ ಉಚಿತ ಕಾನೂನು ಮಾಹಿತಿ ಮತ್ತು ನೆರವು ಒದಗಿಸಲು ಈಗಾಗಲೇ ಪಿಎಲ್ವಿ (ಪ್ಯಾರಾ ಲೀಗಲ್ ವಾಲಂಟಿಯರ್ಸ್) ನೇಮಕ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಿಎಲ್ವಿಗಳನ್ನು ನೇಮಿಸುವ ಮೂಲಕ ಕೈದಿಗಳು ತಮ್ಮ ಪ್ರಕರಣಗಳಿಂದ ಶೀಘ್ರವಾಗಿ ಬಿಡುಗಡೆ ಹೊಂದಲು ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ಮಾತನಾಡಿ, ಸಾಕ್ಷರತೆಯು ವ್ಯಕ್ತಿಯ ನಡತೆಯಲ್ಲಿ ಉತ್ತಮ ಬದಲಾವಣೆ ತರುತ್ತದೆ. ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನ ಪಡೆಯಲು ಇದು ಸಹಕಾರಿ ಎಂದರು. ಮುಖ್ಯ ಅತಿಥಿಯಾಗಿದ್ದ ಡಯಟ್ನ ಹಿರಿಯ ಉಪನ್ಯಾಸಕಿ ರೇಣುಕಾ ಎಸ್. ಮಾತನಾಡಿ, ವಿದ್ಯೆಯಿಂದ ವಿವೇಕ, ಮತ್ತು ವಿವೇಕದಿಂದ ಪರಿಪೂರ್ಣ ಜ್ಞಾನ ಲಭಿಸುತ್ತದೆ. ಅಕ್ಷರ ಕಲಿತ ಮನುಷ್ಯ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಂಡು ಗೌರವಯುತ ಜೀವನ ನಡೆಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಡಯಟ್ನ ಹಿರಿಯ ಉಪನ್ಯಾಸಕ ಉಮಾಶಂಕರ್ ಕೆ.ಆರ್., ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಶಾ ಆರ್., ಉಪನ್ಯಾಸಕ ರಮೇಶ್ ಬಾಬು, ಅಸ್ಟರ್ ಆಲಿ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಬಿ. ಸುರೇಶ್, ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಭವ್ಯ, ಜೈಲರ್ಗಳಾದ ಶ್ರೀಶೈಲ ಎಸ್. ಕಟ್ಟಿಮನಿ, ಶರಣಬಸವ, ವಿಜಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Shivamogga news ಸಾಕ್ಷರತಾ ಪ್ರತಿಜ್ಞೆ ಮತ್ತು ಗುರು ವಂದನೆ
ದಿನಾಚರಣೆಯ ಅಂಗವಾಗಿ ಕೈದಿಗಳು ಹಾಗೂ ಅಧಿಕಾರಿಗಳು ಸಾಕ್ಷರತಾ ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೇಂದ್ರ ಕಾರಾಗೃಹದ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಲೀಲಾ ಎಸ್.ಎನ್. ಅವರನ್ನು ಬಂದಿಗಳು ವಿಶೇಷ ನೃತ್ಯದ ಮೂಲಕ ವೇದಿಕೆಗೆ ಕರೆತಂದು ಗೌರವಿಸಿ ಸನ್ಮಾನಿಸಿದರು. ಸಾಕ್ಷರತೆಯ ಮಹತ್ವ ಕುರಿತು ಕೈದಿಗಳು “ಅಕ್ಷರ ಅರಿವಿನ ಕಿರಣ” ಎಂಬ ಕಿರುನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಡಯಟ್ನ ಉಪನ್ಯಾಸಕ ಹೂವಣ್ಣ ಎಚ್.ಬಿ. ರಚಿಸಿದ ‘ಸಾಕ್ಷರರಾಗೋಣ’ ಎಂಬ ಗೀತೆಯನ್ನು ಕೈದಿಗಳು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.ಕಾರಾಗೃಹದ ಶಿಕ್ಷಕಿ ಲೀಲಾ ಎಸ್.ಎನ್. ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


