nsui shivamogga : ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿರುವ ದೇಶಭಕ್ತಿ ಗೀತೆ ಸ್ಪರ್ಧೆಗೆ NSUI ಆಕ್ಷೇಪ : ಕಾರ್ಯಕ್ರಮ ನಡೆಸದಂತೆ ಸಚಿವರಿಗೆ ಮನವಿ
ಜುಲೈ 19 ರಂದು ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಿದೆ. ಇದು ಯುವಜನತೆಯಲ್ಲಿ ರಾಜಕೀಯ-ಕೋಮು ದ್ವೇಷ ಭಾವನೆ ಮೂಡಿಸುವ ಉದ್ದೇಶದಿಂದ ಆಯೋಜಿಸಿದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮಕ್ಕೆ ಕಾಲೇಜಿನ ವಿದ್ಯಾರ್ಥಿಗಳನ್ನು ಕಳುಹಿಸಬಾರದೆಂದು ಎನ್ಎಸ್ಯುಐ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಮನವಿ ಸಲ್ಲಿಸಿದೆ.
ಕೆ.ಎಸ್. ಈಶ್ವರಪ್ಪನವರರು 1975ರ ತುರ್ತು ಪರಿಸ್ಥಿತಿಯ ಕರಾಳ ನೆನಪಿನ 50ನೇ ವರ್ಷದ ಅಂಗವಾಗಿ 2025ರ ಜುಲೈ 19ರಂದು ಶಿವಮೊಗ್ಗ ನಗರದ ಮಟ್ಟದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಿದ್ದು, ಈ ಕಾರ್ಯಕ್ರಮ ಯುವಜನತೆಯಲ್ಲಿ ರಾಜಕೀಯ-ಕೋಮು ದ್ವೇಷ ಭಾವನೆ ಮೂಡಿಸುವ ಉದ್ದೇಶದಿಂದ ಆಯೋಜಿಸದ ಕಾರ್ಯಕ್ರಮವಾಗಿದೆ ಎಂದು ಎನ್ಎಸ್ಯುಐ ಆರೋಪಿಸಿದೆ.
ಈಶ್ವರಪ್ಪನವರು ಬಿಜೆಪಿಯಲ್ಲಿದ್ದಾಗ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದರಿಂದಾಗಿ ಬಿಜೆಪಿ ಈಶ್ವರಪ್ಪನವರಿಗೆ ಟಿಕೆಟ್ ನೀಡದೇ ರಾಜಕೀಯವಾಗಿ ಮೂಲೆಗುಂಪು ಮಾಡಿದೆ. ತಮ್ಮ ರಾಜಕೀಯ ಜೀವನ ಮುಗಿದ ಅಧ್ಯಾಯ ಎಂದು ಗೊತ್ತಿದ್ದರೂ ತಮ್ಮ ಮಗನನ್ನು ರಾಜಕೀಯದಲ್ಲಿ ನೆಲೆಯೂರಿಸುವ ಉದ್ದೇಶದಿಂದ ಕೆ.ಎಸ್.ಈಶ್ವರಪ್ಪನವರು ಈಗ ದೇಶಭಕ್ತಿಯ ನಾಟಕವಾಡುತ್ತಿದ್ದು, ಅದಕ್ಕೆ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎನ್ಎಸ್ಯುಐ ಆರೋಪಿಸಿದೆ.
nsui shivamogga : ದೇಶದ ಬಗ್ಗೆ ಕಾಳಜಿ ಇದ್ದರೆ ಗೋದ್ರಾ ಹತ್ಯಾಕಾಂಡ ನೆನೆಪಿಸಿಕೊಳ್ಳಿ
ಇದೀಗ ರಾಜಕೀಯವಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟಿರುವ ಈಶ್ವರಪ್ಪನವರು ಬಿಜೆಪಿ ವರಿಷ್ಟರನ್ನು ಓಲೈಕೆ ಮಾಡಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ. ಇಂದಿರಾ ಗಾಂಧಿಯವರು ದೇಶದ ಅಂದಿನ ಆರ್ಥಿಕ-ರಾಜಕೀಯ ಪರಿಸ್ಥಿತಿಯನ್ನಾಧರಿಸಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದರು. ಆದರೆ, ಈಶ್ವರಪ್ಪ ತಮ್ಮ ರಾಜಕೀಯ ತೆವಲಿಗೋಸ್ಕರ ವಿದ್ಯಾರ್ಥಿಗಳಿಗೆ ‘ತುರ್ತು ಪರಿಸ್ಥಿತಿಯ ಕರಾಳ ನೆನಪು’ ಎಂದು ಹೇಳುತ್ತಾ ಇಂತಹ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಅವರಲ್ಲಿ ರಾಜಕೀಯ-ಕೋಮು ಪ್ರಚೋದನಾ ಭಾವನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಈಶ್ವರಪ್ಪನವರಿಗೆ ಈ ದೇಶದ ಬಗ್ಗೆ ನೈಜ ಕಾಳಜಿ ಇದ್ದರೆ, ಗೋದ್ರಾ ಹತ್ಯಾಕಾಂಡದಲ್ಲಿ ನಡೆದ ಸಾವಿರಾರು ಜನರ ಮಾರಣಹೋಮವನ್ನು ನೆನಪು ಮಾಡಿಕೊಳ್ಳಲಿ. ರಾಜಕೀಯ ಉದ್ದೇಶಕ್ಕಾಗಿ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುವುದು ಬೇಡ ಎಂದರು.
nsui shivamogga : ವಿದ್ಯಾರ್ಥಿಗಳನ್ನು ಕಳುಹಿಸದಂತೆ ಮನವಿ
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸದಂತೆ ಆದೇಶ ಮಾಡಲು ನಿರ್ದೇಶನ ನೀಡಬೇಕು. ಮತ್ತು ಇಂತಹ ಕಾರ್ಯಕ್ರಮಗಳು ಕೆ.ಎಸ್. ಈಶ್ವರಪ್ಪ ಮತ್ತು ಅವರ ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದರೂ ರದ್ದುಪಡಿಸುವಂತೆ ಸೂಚನೆ ನೀಡಬೇಕೆಂದು ಈ ಮೂಲಕ ಶಿವಮೊಗ್ಗ ಎನ್.ಎಸ್.ಯು.ಐ. ಘಟಕದ ವತಿಯಿಂದ ಮನವಿ ಮಾಡುತ್ತಿದ್ದೇವೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ರವರು, ಹಾಗೂ NSUI ನಗರ ಅಧ್ಯಕ್ಷ ರವಿ HL, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್ ವಿ ಪಂಡಿತ್,ಜೀವನ್, ನಗರ ಪ್ರಧಾನ ಕಾರ್ಯದರ್ಶಿ ಆದಿತ್ಯ, ಸುಭಾನ್, ಸಾಗರ್, ನಂದೀಶ್, ಶ್ರೀಕಾಂತ್, ಮಂಜು, ಚಂದು ಸಚಿವರಿಗೆ ಮನವಿ ಸಲ್ಲಿಸಿದರು.
