brp dam ಭದ್ರಾ ಜಲಾಶಯದ ಬಲದಂಡೆ ಕಾಲುವೆಯಿಂದ ಹೊಸದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆ ಹರಿಹರ ತಾಲೂಕು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ನೇತೃತ್ವದಲ್ಲಿ ಹರಿಹರ ತಾಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಶಿವಮೊಗ್ಗದ ಬಿಆರ್ಪಿ ಬಳಿ ಇರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಮಾರಕವಾಗಿರುವ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅವರು ಕುಡಿಯುವ ನೀರು ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ನೀರು ಪೂರೈಸಲು ಎರಡು ಪರ್ಯಾಯ ಮಾರ್ಗಗಳಿದ್ದವು, ಮೊದಲನೆಯದು ಜಲಾಶಯದ ಹಿನ್ನೀರಿನಿಂದ ನೀರನ್ನು ಲಿಫ್ಟ್ಟ್ ಮಾಡುವುದು, ಹಾಗೆಯೇ ಎರಡನೆಯದು ಕಾಲುವೆ ಮೂಲಕ ನೀರನ್ನು ಹರಿಸುವುದು. ಆದರೆ, ಅಧಿಕಾರಿಗಳು ಕಾಮಗಾರಿ ವೆಚ್ಚ ಉಳಿಸಲು ಬಲದಂಡೆ ಕಾಲುವೆಯನ್ನು ಒಡೆದು ನೀರು ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.

brp dam : ಕೊನೆಯ ಭಾಗದ ರೈತರಿಗೆ ನೀರಿನ ಕೊರತೆ ಭೀತಿ
ಈಗಿನ ಯೋಜನೆಯಿಂದ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಬರುವ ಕಾಲುವೆಯ ಬಲದಂಡೆ ಹಾಗೂ ಜಲಾಶಯದ ಬುಡದಲ್ಲಿಯೇ ಪೈಪ್ ಮೂಲಕ ನೀರು ತೆಗೆದುಕೊಂಡು ಹೋಗುವುದು ಕೊನೆಯ ಭಾಗದ ರೈತರಿಗೆ ಮಾರಕವಾಗಿದೆ. ಅಲ್ಲದೆ, ಇದರಿಂದ ಜಲಾಶಯದ ಭದ್ರತೆಗೂ ಅಪಾಯವಿದೆ ಎಂದು ಎಚ್ಚರಿಸಿದರು.
ಈಗಾಗಲೇ ದಾವಣಗೆರೆ ಜಿಲ್ಲೆಯ ಹರಿಹರ ಮತ್ತು ದಾವಣಗೆರೆ ತಾಲೂಕಿನ ಕೊನೆಯ ಭಾಗದ ರೈತರಿಗೆ ಬೇಸಿಗೆಯಲ್ಲಿ ನೀರು ಸಿಗುತ್ತಿಲ್ಲ. ಈಗ ಚಿಕ್ಕಮಗಳೂರು ಜಿಲ್ಲೆ ಮತ್ತು ಹೊಸದುರ್ಗ ತಾಲೂಕಿಗೆ ಕುಡಿಯುವ ನೀರಿನ ಯೋಜನೆ ಜಾರಿಯಾದರೆ, ಮಳೆಗಾಲದಲ್ಲೂ ನಮ್ಮ ಕೊನೆಯ ಭಾಗದ ರೈತರಿಗೆ ನೀರು ಸಿಗುವುದು ಕಷ್ಟವಾಗುತ್ತದೆ. ಹಾಗಾಗಿ, ನಾವು ಈ ಯೋಜನೆಯನ್ನು ವಿರೋಧಿಸುತ್ತೇವೆ ಮತ್ತು ಕಾಮಗಾರಿಯನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಿಭಟನೆಯ ಭಾಗವಾಗಿ, ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ರೈತರು ಬುಟ್ಟಿಯಲ್ಲಿ ಮಣ್ಣು ತುಂಬಿ ಪೈಪ್ಗೆ ಸಾಂಕೇತಿಕವಾಗಿ ಹಾಕುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.