cancer treatment in thirthahalli : ತೀರ್ಥಹಳ್ಳಿ mio ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈ ಯೋಜನೆ ಮೂಲಕ ಉಚಿತ ಚಿಕಿತ್ಸೆ
cancer treatment in thirthahalli : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (MIO) ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಕ್ಯಾನ್ಸರ್ ಚಿಕಿತ್ಸೆ ಆರಂಭಗೊಂಡಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಡಿ. ಸುರೇಶ್ ರಾವ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ಸುರೇಶ್ ರಾವ್, ಕಳೆದ 15 ವರ್ಷಗಳಲ್ಲಿ ಕಿದ್ವಾಯಿ ಆಸ್ಪತ್ರೆ ಹೊರತುಪಡಿಸಿದರೆ, ಆಯುಷ್ಮಾನ್ ಯೋಜನೆ ಅಡಿಯಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಅತಿದೊಡ್ಡ ಆಸ್ಪತ್ರೆ ತಮ್ಮ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯಾಗಿದೆ . ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದು. ಈ ಯೋಜನೆಯನ್ನು ನಾವು ಜಾರಿಗೆ ಬಂದು ಒಂದು ತಿಂಗಳಾಗಿದೆ. ಇದುವರೆಗೆ 70 ರೋಗಿಗಳು ಆಯುಷ್ಮಾನ್ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮಂಗಳೂರಿನಲ್ಲಿರುವ MIO ಆಸ್ಪತ್ರೆಗೆ ಚಿತ್ರದುರ್ಗ, ಶಿವಮೊಗ್ಗ. ಶಿಕಾರಿಪುರ ಸೇರಿದಂತೆ ವಿವಿಧ ಪ್ರದೇಶಗಳಿಂದ ರೋಗಿಗಳು ಬರುತ್ತಿದ್ದರು. ಕೇವಲ 5 ನಿಮಿಷಗಳ ಸಾಮಾನ್ಯ ತಪಾಸಣೆಗಾಗಿ ಇಷ್ಟು ದೂರದಿಂದ ಬರುವ ರೋಗಿಗಳಿಗೆ ಪ್ರಯಾಣ ವೆಚ್ಚ ಬಹಳಾ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿಯೇ ತಾವು ತೀರ್ಥಹಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ತೆರೆದಿರುವುದಾಗಿ ವಿವರಿಸಿದರು.

ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ತಾಲ್ಲೂಕು ಮಟ್ಟದಲ್ಲಿ, ಅದರಲ್ಲೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಮೊದಲ ಕ್ಯಾನ್ಸರ್ ಆಸ್ಪತ್ರೆ ಇದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತೀರ್ಥಹಳ್ಳಿಯಲ್ಲಿ ಈಗ ಪ್ರತಿ ತಿಂಗಳು ಸುಮಾರು 60 ಹೊಸ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಹಳ್ಳಿಯ ಭಾಗದಲ್ಲಿ ಇಷ್ಟರ ಮಟ್ಟಿಗೆ ಕ್ಯಾನ್ಸರ್ ಇರುವುದಕ್ಕೆ ಆಶ್ಚರ್ಯವ್ಯಕ್ತಪಡಿಸಿದರು.