shivamogga news 15-06-2025 ಶಿವಮೊಗ್ಗ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಆಟೋ ಚಾಲಕನ ಮೇಲೆ ಹಲ್ಲೆ, ಆಟೋ ಜಖಂ
ಶಿವಮೊಗ್ಗ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕರೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಆಟೋದ ಗಾಜುಗಳನ್ನು ಕಲ್ಲಿನಿಂದ ಜಜ್ಜಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಬದಿಯ ಗೇಟ್ ಬಳಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಆಟೋ ಚಾಲಕ ಅನ್ವರ್ ಬಾಷಾ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಬೈಕ್ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅನ್ವರ್ ಬಾಷಾ ಬಳಿ ಬೀಡಿ ಕೇಳಿದ್ದಾರೆ. ಬೀಡಿ ಇಲ್ಲ ಎಂದು ಹೇಳಿದ ತಕ್ಷಣ ಜಗಳ ಶುರುಮಾಡಿದ ಕಿಡಿಗೇಡಿಗಳು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಆಟೋದ ಗಾಜುಗಳನ್ನು ಒಡೆದು ಹಾಕಿದ್ದಾರೆ. “ಇನ್ನೊಮ್ಮೆ ಈ ನಿಲ್ದಾಣದಲ್ಲಿ ಕಾಣಿಸಿಕೊಂಡರೆ ಜೀವಕ್ಕೆ ಅಪಾಯ” ಎಂದು ಬೆದರಿಕೆ ಹಾಕಿದ್ದಾರೆ ಎಂದೂ ಅನ್ವರ್ ಬಾಷಾ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಅನ್ವರ್ ಬಾಷಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Shivamogga news 15-06-2025 ಶಿವಮೊಗ್ಗ: ಷೇರು ಹೂಡಿಕೆ ಹೆಸರಿನಲ್ಲಿ ಶಿಕ್ಷಕಿಗೆ ₹40.85 ಲಕ್ಷ ವಂಚನೆ
ಶಿವಮೊಗ್ಗ: ಷೇರು ವ್ಯವಹಾರದಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವುದಾಗಿ ನಂಬಿಸಿ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಯೊಬ್ಬರಿಗೆ (ಹೆಸರು ಗೌಪ್ಯ) ಬರೋಬ್ಬರಿ ₹40.85 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಶಿಕ್ಷಕಿಯ ಇನ್ಸ್ಟಾಗ್ರಾಂನಲ್ಲಿ “ಷೇರುಗಳಲ್ಲಿ ಹೂಡಿಕೆ ಕುರಿತು ಉಚಿತ ಸಲಹೆ” ಎಂಬ ಜಾಹೀರಾತು ನಂಬಿ ಅದನ್ನ ಕ್ಲಿಕ್ ಮಾಡಿದ್ದಾರೆ. ಆ ಬಳಿಕ ಶಿಕ್ಷಕಿಯ ಮೊಬೈಲ್ ಸಂಖ್ಯೆ ಒಂದು ವಾಟ್ಸಪ್ ಗ್ರೂಪ್ಗೆ ಸೇರ್ಪಡೆಯಾಗಿದೆ. ಆ ಗುಂಪಿನಲ್ಲಿ ಹಲವರು ಷೇರಿನಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸಿರುವ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು.
ಇದರಿಂದ ಪ್ರಭಾವಿತರಾದ ಶಿಕ್ಷಕಿಯು ವಾಟ್ಸಪ್ ಗ್ರೂಪ್ನ ಅಡ್ಮಿನ್ಗೆ ಸಂದೇಶ ಕಳುಹಿಸಿದ್ದಾರೆ, ವಾಟ್ಸಪ್ನ ಅಡ್ಮಿನ್ ಒಂದು ಲಿಂಕ್ ಕಳುಹಿಸಿ, ಪ್ರತಿಷ್ಠಿತ ಬ್ರೋಕರೇಜ್ ಸಂಸ್ಥೆಯ ಹೆಸರಿನಲ್ಲಿ ಖಾತೆ ತೆರೆಯುವುದಾಗಿ ನಂಬಿಸಿದ್ದಾನೆ. ನಂತರ ಹಲವು ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ತಿಳಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಸೂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ವಂಚಕರ ಮಾತು ನಂಬಿದ ಶಿಕ್ಷಕಿ ಹಂತ ಹಂತವಾಗಿ ಸುಮಾರು 40.85 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದರು. ಆನಂತರ ಲಾಭಾಂಶ ಬರದ ಕಾರಣ ಅನುಮಾನ ಗೊಂಡು ವಿಚಾರಿಸಿದಾಗ ತಾವು ಮೋಸಹೋಗಿರುವುದು ಅವರಿಗೆ ಗೊತ್ತಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ (ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shivamogga news 15-06-2025 ಖ್ಯಾತ ಶಾಸನತಜ್ಞ ಡಾ. ಜಗದೀಶ ಅಬಸಿಬಾಗಿಲವರ್ ನಿಧನ
ಶಿವಮೊಗ್ಗ: ಪ್ರಖ್ಯಾತ ಇತಿಹಾಸಕಾರ, ಶಾಸನತಜ್ಞ ಮತ್ತು ಸಿವಿಲ್ ಇಂಜಿನಿಯರ್ ಡಾ. ಜಗದೀಶ ಅಬಸಿಬಾಗಿಲವರ್ (65) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವೃತ್ತಿಯಿಂದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ (ಕೆಎಸ್ಎಸ್ಐಡಿಸಿ) ಮುಖ್ಯ ಇಂಜಿನಿಯರ್ ಆಗಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಜಗದೀಶ ಅವರು, ಪ್ರವೃತ್ತಿಯಿಂದ ಇತಿಹಾಸ ಮತ್ತು ಶಾಸನಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಇಂಜಿನಿಯರ್ ಆಗಿದ್ದರೂ, ಬಾಹ್ಯವಾಗಿ ಇತಿಹಾಸದಲ್ಲಿ ಬಿ.ಎ., ಎಂ.ಎ. ಪದವಿ ಪಡೆದು, “ಮಧ್ಯ ಯುಗೀನ ಕರ್ನಾಟಕದಲ್ಲಿ ತೂಕ ಮತ್ತು ಅಳತೆ” ವಿಷಯದ ಕುರಿತು ಸಂಶೋಧನೆ ನಡೆಸಿ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದರು.
shivamogga news 15
ಕರ್ನಾಟಕ ಇತಿಹಾಸ ಅಕಾಡೆಮಿಯು ಸಂಶೋಧನಾ ಕ್ಷೇತ್ರಕ್ಕೆ ನೀಡುವ ಪ್ರತಿಷ್ಠಿತ ಸೂರ್ಯಕೀರ್ತಿ ಪ್ರಶಸ್ತಿಗೂ ಅವರು ಭಾಜನರಾಗಿದ್ದರು. ನೂರಾರು ವಿಚಾರ ಸಂಕಿರಣಗಳಲ್ಲಿ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿ, ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದ ಡಾ. ಅಬಸಿಬಾಗಿಲ, ಅನೇಕ ಯುವ ಸಂಶೋಧಕರಿಗೆ ಶಾಸನಶಾಸ್ತ್ರದಲ್ಲಿ ಮಾರ್ಗದರ್ಶಕರಾಗಿದ್ದರು. ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರಲ್ಲೊಬ್ಬರಾಗಿಯೂ ಸೇವೆ ಸಲ್ಲಿಸಿದ್ದರು.
ಅವರ ನಿಧನವು ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯ ಪದಾಧಿಕಾರಿಗಳಾದ ಡಾ. ಬಾಲಕೃಷ್ಣ ಹೆಗಡೆ, ನಿತಿನ್ ಓಲಿಕಾರ್ ಮತ್ತು ಅಜಯಕುಮಾರ್ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (ಜೂನ್ 16, 2025) ಬೆಳಿಗ್ಗೆ ಅವರ ಹುಟ್ಟೂರಾದ ರಟ್ಟಿಹಳ್ಳಿ ಸಮೀಪದ ಕೂಲಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
shivamogga news 15