KARNATAKA NEWS/ ONLINE / Malenadu today/ Jul 3, 2023 SHIVAMOGGA NEWS
ಶಿವಮೊಗ್ಗ/ ಮಹಾಭಾರತದಲ್ಲಿ ಅಭಿಮನ್ಯೂ ಚಕ್ರವ್ಯೂಹವನ್ನೇ ಭೇದಿಸಿದರೂ ಅದರಿಂದ ಹೊರಕ್ಕೆ ಬರಲು ಆತನಿಗೆ ಸಾಧ್ಯವಾಗಲಿಲ್ಲ. ಆದರೆ ಈ ಅಭಿಮನ್ಯು ಎಂಬತ್ತು ದಿನಗಳ ಕಾಲ ಚಕ್ರವ್ಯೂಹದಲ್ಲಿದ್ದು ಅದನ್ನ ಭೇದಿಸಿಕೊಂಡು ವಿನಯವಂತನಾಗಿ ಹೊರಬಂದಿದೆ. 80 ದಿನಗಳ ಕಾಲ ಕ್ರಾಲ್ನಲ್ಲಿದ್ದು, ಇಂದು ಅಭಿಮನ್ಯು ಹೊರಬಂದಾಗ ಆತನಲ್ಲೂ ಸಂತಸವಿತ್ತು, ಅಲ್ಲಿದವರ ಮೊಗದಲ್ಲೂ ಸಂತಸ ಮನೆ ಮಾಡಿತ್ತು.
ಚಕ್ರವ್ಯೂಹದಿಂದ ಹೊರಬಂದ ಅಭಿಮನ್ಯು
ಓರ್ವ ಮಹಿಳೆ ಮತ್ತು ಮಗುವಿನ ಪ್ರಾಣತೆಗೆದಿದ್ದ ಹಾಗು ವನ್ಯಜೀವಿ ವೈದ್ಯ ಡಾ. ವಿನಯ್ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ಕಾಡಾನೆ ಇಂದು ಶಾಂತ ಸ್ವರೂಪಿಯಾಗಿ ಕ್ರಾಲ್ ನಿಂದ ಹೊರಬಂದಿತು. ಎಂಬತ್ತು ದಿನಗಳ ಕಾಲ ಕ್ರಾಲ್ ನಲ್ಲಿ ಒಂದೇ ಸ್ಥಳದಲ್ಲಿ ಬಂಧಿಯಾಗಿದ್ದ ಕಾಡಾನೆಯನ್ನು ಇಂದು ಏಕಾಏಕಿ ಕ್ರಾಲ್ ನಿಂದ ಹೊರತಂದಾಗ ಒಂಟಿ ಸಲಗ ಸ್ವಾತಂತ್ರ ಸಿಕ್ಕಷ್ಟು ಖುಷಿಯಿಂದ ಹೊರಬಂತು.
ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು,ಸಕ್ರೆಬೈಲು ಆನೆ ಬಿಡಾರ. ಚೆನ್ನಗಿರಿ ಮತ್ತು ಹೊನ್ನಾಳಿ ಗಡಿಭಾಗದ ಗ್ರಾಮಗಳ ಹೊಲಗದ್ದೆಗಳಲ್ಲಿ ಬೀಡುಬಿಟ್ಟು ಬೆಳೆಹಾನಿ ಮಾಡುತ್ತಿದ್ದ ಕಾಡಾನೆ ಓರ್ವ ಮಹಿಳೆ ಮತ್ತು ಮಗುವನ್ನು ಬಲಿ ಪಡೆದಿತ್ತು. ಚೆನ್ನಗಿರಿ ಗಡಿಭಾಗದಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ವನ್ಯಜೀವಿ ವೈದ್ಯ ವಿನಯ್ ಮೇಲೆ ಕಾಡಾನೆ ದಾಳಿ ಮಾಡಿ ಮಾರಣಾಂತಿಕವಾಗಿ ದಾಳಿ ಮಾಡಿತ್ತು.
ಅತ್ತ ಗಂಭೀರವಾಗಿ ಗಾಯಗೊಂಡಿದ್ದ ವಿನಯ್ ರನ್ನು ಎಕ್ಮಾ ಟ್ರೀಟ್ ಮೆಂಟ್ ಮೂಲಕ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ರವಾನಿಸಲಾಗಿತ್ತು. ಇತ್ತ ಕಾಡಾನೆಯನ್ನು ಸಕ್ರೆಬೈಲು ಬಿಡಾರಕ್ಕೆ ಅಂದೇ ಕರೆತರಲಾಗಿತ್ತು. ಕ್ರಾಲ್ ನಲ್ಲಿ ಹಾಕಿದ ಕಾಡಾನೆ ವಾರಗಟ್ಟಲೆ ಘೀಳಿಟ್ಟರೂ, ಅದನ್ನು ಶಾಂತಸ್ವರೂಪಕ್ಕೆ ತರುವಲ್ಲಿ ಮಾವುತ ಕಾವಾಡಿಗಳು ಯಶಸ್ವಿಯಾದರು. ಸತತ ಎಂಬತ್ತು ದಿನಗಳ ಕಾಲ ಆನೆಯ ಲಾಲನೆ ಪಾಲನೆಯ ಜವಬ್ದಾರಿಯನ್ನು ಜಮೇದಾರ್ ಖುದ್ರತ್ ಪಾಷಾ ಮಂಜು ಅಂಡ್ ಟೀಂ ಹೊತ್ತುಕೊಂಡಿತ್ತು. ಹಗಲು ರಾತ್ರಿ ಆನೆಯತ್ತ ಬೀಡುಬಿಟ್ಟು ಅದರ ವಿಶ್ವಾಸಗಳಿಸುವಲ್ಲಿ ಮಾವುತ ಕಾವಾಡಿಗಳು ನಡೆದ ಹಗಲು ರಾತ್ರಿಯ ಪರಿಶ್ರಮ ಯಶಸ್ವಿಯಾಗಿದೆ.
ಕಾಡಾನೆಗೆ ಇತ್ತಿಚ್ಚೆಗೆ ಮಾಜಿ ಗೃಹ ಸಚಿವ ಆರಗಾ ಜ್ಞಾನೇಂದ್ರ ಅಭಿಮನ್ಯು ಎಂದು ಹೆಸರಿಟ್ಟಿದ್ದರು.ಹೀಗಾಗಿ ಸಂಪೂರ್ಣವಾಗಿ ಮಾವುತರಿಂದ ಪಳಗಿದ ಹಾಗು ತರಬೇತಿ ಪಡೆದ ಅಭಿಮನ್ಯುವನ್ನು ಇಂದು ಖೆಡ್ಡಾದಿಂದ ಹೊರತೆಗೆಯಲಾಯಿತು. ಯಾವುದೇ ಅಹಿತಕರ ಘಟನೆಯಾಗದಂತೆ ಕುಮ್ಕಿ ಆನೆಗಳನ್ನು ಬಳಸಲಾಗಿತ್ತು.
ಅಭಿಮನ್ಯುವನ್ನು ಖೆಡ್ಡಾದಿಂದ ಹೊರತೆಗೆಯುವ ಮುನ್ನ ಪೂಜಾ ಕಾರ್ಯ ನೆರವೇರಿಸಿ, ಕ್ರಾಲ್ ನಿಂದ ಹೊರತೆಗೆಯಲಾಯಿತು. ಅಭಿಮನ್ಯು ಸೊರಗಿದಂತೆ ಕಂಡರೂ, ವನ್ಯಜೀವಿ ವೈದ್ಯರು ತರಬೇತಿ ಸಂದರ್ಭದಲ್ಲಿ ತೂಕ ಕಡಿಮೆಯಾಗುವುದು ಸಾಮಾನ್ಯ. ಅಭಿಮನ್ಯು ಆರೋಗ್ಯ ಉತ್ತಮವಾಗಿದೆ. ದೇಹದಲ್ಲಿ ಉಣ್ಣೆಗಳಿದ್ದು, ಅವೆಲ್ಲವನ್ನು ತೆಗೆಯಲಾಗಿದೆ ಎಂದು ವನ್ಯಜೀವಿ ವೈದ್ಯ ಮುರುಳಿ ಮನೋಹರ ಹೇಳಿದ್ದಾರೆ.
ಖೆಡ್ಡಾದಿಂದ ಹೊರಬಂದ ಅಭಿಮನ್ಯು ಈಗ ಸ್ವತಂತ್ರನಾಗಿದ್ದಾನೆ. ಮೈಮೇಲೆ ಮಣ್ಣನ್ನು ಮೆತ್ತಿಕೊಂಡು ಕಾಡಿನಲ್ಲಿದ್ದಷ್ಟೆ ನೈಸರ್ಗಿಕ ಸ್ವಭಾವವನ್ನು ತೋರಿತು. ಮಾವುತರು ನೀಡುತ್ತಿದ್ದ ಎಲ್ಲಾ ಆದೇಶಗಳನ್ನು ಶಾಂತವಾಗಿ ಪಾಲನೆ ಮಾಡುತ್ತಿದ್ದ. ಇನ್ನು ಕೆಲವು ತರಬೇತಿಗಳನ್ನು ನೀಡಿ ಸಧ್ಯದಲ್ಲಿಯೇ ಸಕ್ರೆಬೈಲು ಬಿಡಾರಕ್ಕೆ ಅಭಿಮನ್ಯು ಆಗಮಿಸಲಿದ್ದಾನೆ.