SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 11, 2025

ಶಿವಮೊಗ್ಗ | ರೈತರ ಜಮೀನುಗಳು ದಾಖಲೆಗಳನ್ನ ರದ್ದು ಮಾಡಲು ನೋಟಿಸ್ ಕೊಟ್ಟಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಎಪ್ರಿಲ್ 15 ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪ ತಿಳಿಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಮುಳುಗಡೆಯಿಂದ ಸ್ಥಳಾಂತರಗೊಂಡ ಸಂತ್ರಸ್ಥ ರೈತರಿಗೆ ಬೇರೆ ಕಡೆ ಜಮೀನು ಮಂಜೂರು ಮಾಡಿದೆ. ಕಂದಾಯ ಭೂಮಿ, ಗೋಮಾಳ ಭೂಮಿ, ಹುಲ್ಲುಬನ್ನಿ ಕರಾಬು ಜಮೀನುಗಳಲ್ಲಿ ಇತರೆ ಯವರಿಗೂ ಜಮೀನು ಮಂಜೂರು ಮಾಡಿದ್ದು, ಸುಮಾರು 60-70 ವರ್ಷಗಳಿಂದಲೂ ಸರ್ಕಾರದಿಂದ ಹಕ್ಕುಪತ್ರ ಪಡೆದು ಖಾತೆ, ಪಹಣಿ, ದಾಖಲಾಗಿ ಪೋಡು ಮಾಡಿಸಿಕೊಂಡು ನೆಮ್ಮದಿಯಿಂದ ತೋಟಗಳನ್ನು ಇತರೆ ಬೆಳೆಗಳನ್ನು ಬೆಳೆದು ವ್ಯವಸಾಯ ವೃತ್ತಿ ಮಾಡುತ್ತಿದ್ದಾರೆ. ಕೆಲವು ರೈತರು 30-40ವರ್ಷಗಳಿಂದ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿದ್ದರೂ ಹಕ್ಕುಪತ್ರಗಳನ್ನು ಕೊಟ್ಟಿರುವುದಿಲ್ಲ.

ಶರಾವತಿ ಮುಳುಗಡೆ ರೈತರು ಮತ್ತು ಇತರೆ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರ ಹೆಸರಿಗೆ ಇಂಡೀಕರಣ ಮಾಡಿಕೊಂಡಿದ್ದಾರೆ. ಸರ್ಕಾರವೇ ಮಂಜೂರು ಮಾಡಿದ ಜಮೀನುಗಳನ್ನು ಅರಣ್ಯ ಇಲಾಖೆಗೆ ಸೇರಿದ್ದು ಈ ಜಮೀನುಗಳ ದಾಖಲೆಯನ್ನು ವಜಾ ಮಾಡಬೇಕೆಂದು ಉಪವಿಭಾಗ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಉಪವಿಭಾಗ ಅಧಿಕಾರಿಗಳು ರೈತರಿಗೆ ನೋಟೀಸ್ನ್ನು ಕೊಡುತ್ತಿದ್ದಾರೆ. ಇದುವರೆಗೂ ನೋಟೀಸ್ ಬಾರದೇ ಇದ್ದ ರೈತರಿಗೂ ಮುಂದೆ ನೋಟೀಸ್ ಬರುತ್ತದೆ. ಇದರಿಂದ ಲಕ್ಷಾಂತರ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಮತ್ತು ಅನಾವಶ್ಯಕವಾಗಿ ಕೋರ್ಟ್ಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.
ಸಂವಿಧಾನದಲ್ಲಿ ಭಾರತ ದೇಶದ ಪ್ರತಿಯೊಬ್ಬ ರೈತನಿಗೂ ಜೀವನ ಮಾಡಲು ಸರ್ಕಾರಗಳು ಉದ್ಯೋಗ ದೊರಕಿಸಿ ಕೊಡಬೇಕಾಗಿದೆ. ಸರ್ಕಾರಗಳು ವಿಫಲವಾದಾಗ ಸ್ವಯಂ ರೈತರೇ ಉದ್ಯೋಗ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇವರೆಲ್ಲರೂ ಸಣ್ಣ ಮತ್ತು ಅತೀ ಸಣ್ಣ ರೈತರೆ ಆಗಿದ್ದಾರೆ. ಆದ್ದರಿಂದ ನೋಟೀಸ್ ಕೊಡುವುದನ್ನು ನಿಲ್ಲಿಸಬೇಕು. ನೋಟೀಸ್ ಕೊಟ್ಟಿರುವ ರೈತರ ದಾಖಲೆಗಳನ್ನ ವಜಾ ಮಾಡಬಾರದು ಮತ್ತು ಬಗರ್ಹುಕ್ಕುಂ ಸಾಗವಾಳಿ ಮಾಡಿಕೊಂಡು ಬಂದಿರುವ ರೈತರಿಗೆ ತಕ್ಷಣವೇ ಹಕ್ಕುಪತ್ರ ಕೊಡಬೇಕೆಂದು ಒತ್ತಾಯಿಸಿ ಈ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಸೈನ್ಸ್ ಮೈದಾನ ದಿಂದ ಹೊರಡುವ ಈ ಮೆರವಣಿಗೆ ಬೆಳಿಗ್ಗೆ 11:30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ತಲುಪುತ್ತದೆ. ನಂತರ ಅಲ್ಲ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಈ ಬೃಹತ್ ಪ್ರತಿಭಟನೆಗೆ ರೈತರು, ಅರಣ್ಯಹಕ್ಕು ಸಮಿತಿ ರೈತರು, ಎಲ್ಲಾ ಸಹಕಾರಿ ಸಂಘಟನೆಗಳ ಸದಸ್ಯರು, ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ರೈತ ಮಹಿಳೆಯರು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಎಲ್ಲಾ ಸಂಘಟನೆಗಳ ಮುಖಂಡರು, ಯುವಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಈ ಮೂಲಕ ಕೋರುತ್ತೇವೆ ಎಂದರು.
SUMMARY | On April 15, we will take out a massive protest march of farmers at Science Ground in Shivamogga against the revenue and forest department officials who have issued notices to cancel the land records of farmers
KEYWORDS | April 15, Shivamogga, farmers, Science,