SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024
ಆಡುವುದಕ್ಕೆ ಮನಸ್ಸಿನದ್ದರೇ ಎಳೆ ವಯಸ್ಸೇ ಬೇಕಿಲ್ಲ ಎನ್ನುವಂತಿತ್ತು ನಿನ್ನೆ ಶಿವಮೊಗ್ಗದ ಡಿಎಆರ್ ಗ್ರೌಂಡ್ನಲ್ಲಿ ನಡೆದ ಪೊಲೀಸ್ ಕ್ರೀಡಾಕೂಟದ ಭಾಗವಾಗಿ ನಡೆದ ಕ್ರಿಕೆಟ್ ಆಟ. ಪ್ರತಿವರ್ಷ ಇದೇ ಸಮಯದಲ್ಲಿ ಶಿವಮೊಗ್ಗ ಪೊಲೀಸ್ ಹಾಗೂ ಶಿವಮೊಗ್ಗ ಪ್ರೆಸ್ ಮಂದಿ ನಡುವೆ ಕ್ರಿಕೆಟ್ ಆಟ ನಡೆಯುತ್ತದೆ. ಅದೇ ರೀತಿಯಲ್ಲಿ ನಿನ್ನೆಯು ಸಹ ಫ್ರೆಂಡ್ಲಿ ಕ್ರಿಕೆಟ್ ಮ್ಯಾಚ್ ನಡೆಯಿತು. ಇಷ್ಟುವರ್ಷ ಪೊಲೀಸ್ & ಪ್ರೆಸ್ ಮ್ಯಾಚ್ನಲ್ಲಿ ಯುವ ಕ್ರಿಕೆಟ್ ಅನುಭವಿಗಳು ತಮ್ಮ ಆಕರ್ಷಕ ಹೊಡೆತಗಳ ಚೆಂಡಾಟ ಪ್ರದರ್ಶನ ಮಾಡುತ್ತಿದ್ದರು.

ಆದರೆ ನಿನ್ನೆ ನಡೆದ ಮ್ಯಾಚ್ ಸ್ವಲ್ಪ ಭಿನ್ನವಾಗಿತ್ತು. ಕಿರಿಯರ ಬದಲಿಗೆ ಹಿರಿಯರೆಲ್ಲಾ ಸೇರಿ ಮೈದಾನಕ್ಕೆ ಇಳಿದಿದ್ದರು. ಪ್ರೆಸ್ ಮಂದಿ ನಡೆಸಿದ ಈ ಅಧೀಕೃತ ಮ್ಯಾಚ್ ಪಿಕ್ಸಿಂಗ್ಗೆ ಈ ಪೊಲೀಸ್ ಇಲಾಖೆಯು ಸೈ ಅಂದಿತ್ತು. ಅವರ ಟೀಂನಲ್ಲಿಯು ವೆಲ್ ಟ್ರೈನ್ಡ್ ಕ್ರಿಕೆಟ್ ಟೀಂಗೆ ಬದಲಾಗಿ, ಸೀನಿಯರ್ಸ್ ಅಧಿಕಾರಿಗಳ ತಂಡ ಅಂಕಣದಲ್ಲಿ ಆಟ ಪ್ರದರ್ಶನಕ್ಕೆ ಮುಂದಾಗಿತ್ತು.
ಜೀ ಕನ್ನಡದ ಜೇಸುದಾಸ್ ನಾಯಕತ್ವದಲ್ಲಿ, ಹುಲಿಮನೆ ತಿಮ್ಮಪ್ಪ ಸೀನಿಯರ್ ಮೋಸ್ಟ್ ಪ್ರೆಸ್ ಟೀಂನ ಮೆಂಬರ್ ಆಗಿದ್ದರು. ಇವರನ್ನ ಹೊರತುಪಡಿಸಿ ಕನ್ನಡಪ್ರಭದ ಗೋಪಾಲ್ ಯಡಗೆರೆ, ನಮ್ಮನಾಡು ಶಿವಕುಮಾರ್, ಪ್ರಜಾವಾಣಿ ವೆಂಕಟೇಶ್, ಸುವರ್ಣ ಟಿವಿ ರಾಜೇಶ್ ಕಾಮತ್ , ಮಲೆನಾಡು ಮಿತ್ರ ನಾಗರಾಜ್ ನೇರಿಗೆಯಂತ ಹಿರಿಯರು ಆಡುವ 11 ರ ಬಳಗದ ಮುಖ್ಯ ಆಟಗಾರರಾಗಿದ್ದರು. ಇವರಿಗೆ ಪೂರಕವಾಗಿ ಪವರ್ ಟಿವಿ ಮೋಹನಕೃಷ್ಣ, ಶಿವಮೊಗ್ಗ ಟೈಮ್ಸ್ ಅರುಣ್, ಫಸ್ಟ್ ನ್ಯೂಸ್ ಮಹೇಶ್, ಪಬ್ಲಿಕ್ ಟಿವಿ ಸತೀಶ್, ನಮ್ಮ ಟಿವಿ ಜಗದೀಶ್, ಈ ಟಿವಿ ಭಾರತ್ ಕಿರಣ್ ಹಾಗೂ ಮಲೆನಾಡು ಟುಡೆ ಗಣೇಶ್ ನಾವುಡ ಟೀಂನಲ್ಲಿದ್ದರು.

ಮ್ಯಾಚ್ನಲ್ಲಿ ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತಲೂ ಕೆಲವೊಮ್ಮೆ ಆಟವಾಡುವವರ ಆಟವೇ ಹೆಚ್ಚು ಖುಷಿ ಕೊಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸೀನಿಯರ್ಗಳ ಆಟ ಅಲ್ಲಿ ನೆರದವರಿಗೆ ತುಸು ಜಾಸ್ತಿಯೇ ಸಂಭ್ರಮ ನೀಡಿತ್ತು. ಪೆವಿಲಿಯನ್ನಲ್ಲಿ ನ್ಯೂಸ್ 18 ವಿನಯ್, ಚಿರಾಗ್, ಅಶ್ವಿನಿ, ಶರತ್, ಭೀಮನಾಯ್ಕ್ ಟೀಂ ಕಣಕಣದಲ್ಲಿಯು ಕೇಸರಿ ಎನ್ನುತ್ತಾ ಚಿಯರ್ ಟೀಂ ಆಗಿ ಪತ್ರಕರ್ತರ ಆಟಕ್ಕೆ ಇನ್ನಷ್ಟು ಉತ್ಸಾಹ ನೀಡುತಿತ್ತು.
ಈ ಕಡೆ ಎಸ್ಪಿ ಮಿಥುನ್ ಕುಮಾರ್ ನಾಯಕತ್ವದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಪೊಲೀಸ್ ಅಧಿಕಾರಿಗಳಿಗೆ ಬೌಲಿಂಗ್ ಮಾಡುತ್ತಿದ್ದ ನಾಗರಾಜ್ ನೇರಿಗೆ ಎದುರಾಳಿ ಟೀಂಗೆ ಒಂದೇ ಸಮನೆ ಕಾಡಿದರು. ರನ್ ಕದಿಯಲು ಅವಕಾಶ ನೀಡದೇ ವಿಕೆಟ್ ಕಿತ್ತ ಅವರ ನಂತರ ಬೌಲಿಂಗ್ಗೆ ಇಳಿದ ನಮ್ಮನಾಡು ಶಿವಣ್ಣ ಎಸ್ಪಿಯವರ ವಿಕೆಟ್ ಉರುಳಿಸಿದರು. ಇಬ್ಬರು ಹಿರಿಯ ಬೌಲರ್ಗಳ ನಡುವೆ ರಾಜೇಶ್ ಕಾಮತರು ಬೌಲಿಂಗ್ ಹಾಗು ಪಿಲ್ಡೀಂಗ್ನಲ್ಲಿ ಮಿಂಚಿದರು. ಆದಾಗ್ಯು, ಪೊಲೀಸ್ ಟೀಂ ಒಟ್ಟಾರೆ 134 ರನ್ ಕಲೆ ಹಾಕಿತು ಅನ್ನಿ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ 17 ರನ್ ಗಳಿಸಿದರೆ, DYSP ಗಜಾನನ ಸುತಾರ 12, ಇನ್ಸ್ಪೆಕ್ಟರ್ ಅಣ್ಣಯ್ಯ 36, ನಾರಾಯಣ ಸ್ವಾಮಿ 19 ಹಾಗೂ ಪ್ರಶಾಂತ್ 32 ರನ್ ಗಳಿಸಿ ಕ್ರಿಕೆಟ್ ಅಂಕಣದಲ್ಲಿ ಖಾಕಿ ಪವರ್ ತೋರಿಸಿದ್ದರಿಂದ ಸ್ಕೋರ್ ಸ್ವಲ್ಪ ಜಾಸ್ತಿನೇ ಆಗಿತ್ತು.
ಉತ್ತರೊತ್ತರವಾಗಿ ಬ್ಯಾಟಿಂಗ್ಗೆ ಇಳಿಯುವ ಮೊದಲೇ ಹಿರಿಯ ಪತ್ರಕರ್ತರು ನೀವು ಬ್ಯಾಟಿಂಗ್ ಮಾಡಿ ಎಂದು ಜ್ಯೂನಿಯರ್ ಪತ್ರಕರ್ತರಿಗೆ ತಮ್ಮ ಆಟವನ್ನು ಬಿಟ್ಟುಕೊಟ್ಟಿದ್ದರು. ಇದರ ನಡುವೆ ನಮ್ಮನಾಡು ಶಿವಣ್ಣ ಭಯಂಕರ ಆಟ ಪ್ರದರ್ಶಿಸಿದರೇ, ಪವರ್ ಟಿವಿ ಮೋಹನ ಕೃಷ್ಣ ಮಿಂಚಿನ ಗೇಮ್ ಆಡಿದರು. ಜಗದೀಶ್ , ಸತೀಶ್ , ರಾಜೇಶ್ , ವೆಂಕಟೇಶ್ , ನಾಗರಾಜ್ , ಮಹೇಶ್ , ಗಣೇಶ್ ಟೀಂಗೆ ಒಂದಿಷ್ಟು ರನ್ ಸೇರಿಸಿದರು. ಅಂತಿಮವಾಗಿ ಮ್ಯಾಚ್ನಲ್ಲಿ ಪತ್ರಕರ್ತರ ತಂಡ 67ರನ್ ಗಳಿಸಿತು, ಪೊಲೀಸ್ ಟೀಂ ಗೆಲುವು ಸಾಧಿಸಿತು.
ಇವರ ಸೋಲು ಅವರ ಗೆಲುವಿನ ನಡುವೆ, ಕೆಲವರು ಆಗಲ್ಲೋ ನೋಯ್ತದೋ ಎಂದರು, ಓಡಲಾಗದೆ ಬಾಲ್ ಬಿಟ್ಟರು, ಕ್ಯಾಚ್ ಕೈ ಚೆಲ್ಲಿದರು, ಅವರನ್ನ ನೋಡಿ ಉಳಿದವರು ನಕ್ಕರು, ನಕ್ಕರವೇ ಎಡವಿದಾಗ ಉಳಿದವರು ಗೊಳ್ಳೆಂದರು. ಒಟ್ಟಾರೆ ಎಲ್ಲರು ಖುಷಿಪಟ್ಟರು , ಸಂಭ್ರಮಿಸಿದರು. ಅಂತಿಮವಾಗಿ ವೆಲ್ ಪ್ಲೇಯಿಡ್ ಸರ್ ಅಂತಾ ಪರಸ್ಪರ ಕೈ ಕುಲುಕಿ, ಅಸಲಿಗೆ ಮ್ಯಾಚ್ ಹೀಗೆ ಇರಬೇಕು. ಎಂದು ಆಡದವರು ಒಮ್ಮೆ ಆಡಿ ಮನಸ್ಸು ಹಗುರವಾಗಿಸಿಕೊಳ್ಳಬೇಕೆಂದು ತಮ್ಮತಮ್ಮಲ್ಲೆ ಮಾತನಾಡಿಕೊಂಡರು. ಕೊನೆಯಲ್ಲಿ ಪಾಲ್ಗೊಂಡವರಿಗೆಲ್ಲರಿಗೂ ಥ್ಯಾಂಕ್ಸ್ ಹೇಳಿದ ಎಸ್ಪಿ ಮಿಥುನ್ ಕುಮಾರ್, ಆಟಗಾರರಿಗೆ ಗಿಫ್ಟ್ ಕೊಟ್ಟು ಮತ್ತೊಮ್ಮೆ ಸಿಗೋಣ ಎನ್ನುತ್ತಾ ಗ್ರೂಫ್ ಫೋಟೋಕ್ಕೆ ಸಾಕ್ಷಿಯಾದರು.
SUMMARY | Cricket match between Shivamogga Press and Shivamogga Police Team
KEY WORDS | Cricket match , Shivamogga Press , Shivamogga Police Team