3 ಮುಕ್ಕಾಲು ಕೋಟಿಯಲ್ಲಿ ಶಿವಮೊಗ್ಗದಲ್ಲಿ ರಿಂಗ್​ ರೋಡ್! 2 ಕಡೆ ಅಪಾರ್ಟ್​ಮೆಂಟ್​! ಗುದ್ದಲಿ ಹಾಕಾಯ್ತು! ಏನಿದು ಪ್ರಾಜೆಕ್ಟ್!

Ring Road Construction in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ವತಿಯಿಂದ 3.70 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಸಂಬಂಧ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. 1200 ಮೀಟರ್ ಉದ್ದದ ಈ ನೂತನ ವರ್ತುಲ ರಸ್ತೆಯು ಗೆಜೇನಹಳ್ಳಿ ಮತ್ತು ಸೋಮಿನಕೊಪ್ಪ ರಸ್ತೆಗೆ ನೇರ ಸಂಪರ್ಕ ಕಲ್ಪಿಸಲಿದೆ. ಕಳೆದ ಗುರುವಾರ ಭೂಮಿಪೂಜೆ ಮಾಡಲಾಗಿದೆ. 60 ಮೀಟರ್ ಅಗಲದ ಹೊರ ವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಚಾಲನೆ ನೀಡಿದ್ದಾರೆ. ಇದಷ್ಟೆ ಅಲ್ಲದೆ ಇನ್ನಷ್ಟು ಯೋಜನೆಗಳ ಜಾರಿಗೆ ಪಯತ್ನ ನಡೆಯುತ್ತಿದೆ. ಅದರ ವಿವರ ಹೀಗಿದೆ

ಸೂಡಾ ಯೋಜನೆಯ ವಿವರ /Ring Road Construction in Shivamogga

  • ವಾಜಪೇಯಿ ಬಡಾವಣೆಯ ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಒಟ್ಟು 5 ಕೋಟಿ ರೂಪಾಯಿ ಮೊತ್ತದ ಟೆಂಡ‌ರ್ ಕರೆಯಲಾಗಿತ್ತು. ಪ್ರಸ್ತುತ 3.70 ಕೋಟಿ ರೂಪಾಯಿ ಕರಾರು ಮೊತ್ತದಲ್ಲಿ ಕಾಮಗಾರಿ ಆರಂಭವಾಗಿದೆ.
  • ಭವಿಷ್ಯದ ದೃಷ್ಟಿಯಿಂದ 34 ಕಿಲೋಮೀಟರ್ ಉದ್ದದ ಬೃಹತ್ ರಿಂಗ್ ರಸ್ತೆ ನಿರ್ಮಾಣಕ್ಕಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಇದನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗತ್ತದೆ.
  • ಇದಷ್ಟೆ ಅಲ್ಲದೆ ಉರಗಡೂರು ಹಾಗೂ ಜಿ.ಎಚ್. ಪಟೇಲ್ ಬಡಾವಣೆಯ 1.15 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಅಪಾರ್ಟ್‌ಮೆಂಟ್ ನಿರ್ಮಿಸುವ ಬೃಹತ್ ಯೋಜನೆಯನ್ನು ರೂಪಿಸಲಾಗಿದೆ.
  • ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಸಿಗುವ ಈಜುಕೊಳ, ಸುಸಜ್ಜಿತ ಪಾರ್ಕ್, ಕ್ಲಬ್ ಹೌಸ್, ವಿಶಾಲವಾದ ಸಭಾಂಗಣ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು ಈ ಪ್ರಾಧಿಕಾರದ ಅಪಾರ್ಟ್‌ ಮೆಂಟ್‌ನಲ್ಲಿ ಒದಗಿಸಲಾಗುವುದು ಎಂದು ಸೂಡಾ ಅಧ್ಯಕ್ಷರು ಹೇಳುತ್ತಾರೆ.
  • ಅಲ್ಲದದೆ ಸಾಮಾನ್ಯ ಜನರ ಅನುಕೂಲಕ್ಕಾಗಿ ವಿವೇಕಾನಂದ ಬಡಾವಣೆ ಹಾಗೂ ಸೋಮಿನಕೊಪ್ಪದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ.
  • ಇದರ ಜೊತೆಗೆ, ವಾಜಪೇಯಿ ಬಡಾವಣೆಯಲ್ಲಿಯೇ ಪ್ರಾಧಿಕಾರದ ನೂತನ ಕಚೇರಿಯನ್ನು ನಿರ್ಮಿಸುವ ಯೋಚನೆ ಇದ್ದು, ನಗರದಾದ್ಯಂತ ಉದ್ಯಾನವನಗಳು ಹಾಗೂ ಕೆರೆಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಿ ಕ್ರಮ ವಹಿಸಲಾಗುತ್ತಿದೆ

ಇನ್ನು . ಶಿವಮೊಗ್ಗ ನಗರವು ದಿನೇ ದಿನೇ ವೇಗವಾಗಿ ಬೆಳೆಯುತ್ತಿದ್ದು, ನಿವೇಶನ ಮತ್ತು ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಸಾಮಾನ್ಯ ಜನರಿಗೆ ನಿವೇಶನ ಖರೀದಿಸಿ ಸ್ವಂತ ಮನೆ ಕಟ್ಟುವುದು ದುಸ್ತರವಾಗಿದೆ. ಈ ಸಮಸ್ಯೆಕ್ಕೆ ತಕ್ಕಂತೆ ಅಭಿವೃದ್ಧಿಯೋಜನೆಗಳನ್ನ ರೂಪಿಸಲಾಗುತ್ತಿದೆ ಅಂತಾ ಸೂಡಾ ಅಧ್ಯಕ್ಷ ಹೆಚ್​ಎಸ್​ ಸುಂದರೇಶ್ ಹೇಳಿದ್ದಾರೆ.

ಇತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ಸೂಡಾ ವತಿಯಿಂದ ಸಾಮಾನ್ಯ ಜನರಿಗೆ ಕೈಗೆಟಕುವ ಮತ್ತು ಕಡಿಮೆ ಬೆಲೆಯಲ್ಲಿ ನಿವೇಶನ ಹಂಚಿಕೆ ಮಾಡುವ ಮಹತ್ವದ ಕೆಲಸವಾಗುತ್ತಿದೆ. ಇದರೊಂದಿಗೆ ನಗರದ ಮೂಲಸೌಕರ್ಯಗಳ ಅಭಿವೃದ್ಧಿ, ಕೆರೆಗಳ ಪುನರುಜ್ಜಿವನ, ಮತ್ತು ಉದ್ಯಾನವನಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ. ರಾಜ್ಯ ಸರ್ಕಾರವು ಇಂತಹ ನಗರಾಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಆವಶ್ಯಕತೆಯಿದೆ ಎಂದರು.

ನಗರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕಾಗಿ ಈಗಾಗಲೇ 12 ಎಕರೆ ಜಾಗವನ್ನು ಮಂಜೂರು ಮಾಡಲಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕಿದೆ. ಫುಟ್‌ ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಕ್ರೀಡಾ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು

ಎಸ್​.ಎನ್​ ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು

ಭೂಮಿಪೂಜೆ ಕಾರ್ಯಕ್ರಮದಲ್ಲಿ ಸೂಡಾ ಸದಸ್ಯ ಪ್ರವೀಣ್, ಆಯುಕ್ತ ಬಿ.ಆರ್. ಮಂಜುನಾಥ್, ಪ್ರಮುಖರಾದ ಗಂಗಾಧರ್, ಬಸವರಾಜಪ್ಪ, ಅಭಿಲಾಷ್ ಸೇರಿದಂತೆ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ : ಮಲೆನಾಡು TODAY, ಜನ ಮನದ ಜೀವ ನದಿ

Whatsapp / https://chat.whatsapp.com/JrsZ8He4nN600n0r3tJItz