ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಮಯ ಹೋಗೋದೇ ಗೊತ್ತಾಗಲ್ಲ ಎನ್ನುವುದಕ್ಕೆ ಸಿಗಂದೂರು ಸೇತುವೆ ಸಾಕ್ಷಿಯಾಗ್ತಿದೆ. ಮೊನ್ನೆ ಮೊನ್ನೆ ಉದ್ಘಾಟನೆಯಾದಂತಿದ್ದ ಸಿಗಂದೂರು ಸೇತುವೆ ಮಲ್ನಾಡಿಗರ ಮನೆ ಮನದ ಬಾಯಿ ಮಾತುಗಳಲ್ಲಿ ಬಹುಚರ್ಚಿತವಾಗಿ, ಕೊನೆಗೊಂದು ದಿನ ಸುಂದರ ನಿಸರ್ಗನೋಟದ ಅವಕಾಶ ಕೊಟ್ಟು ಉದ್ಘಾಟನೆಗೊಂಡಿತ್ತು. ಆಗ ಧೋ ಎಂದು ಸುರಿಯುತ್ತಿದ್ದ ಮಳೆಯ ನಡುವೆ, ಹಿನ್ನೀರನ್ನ ಮೊದಲ ಸಲ ಸೇತುವೆ ಮೇಲಿಂದ ದಾಟುತ್ತಿದ್ದ ಅನುಭವವನ್ನು ಹೆಕ್ಕಿ ಮನಸ್ಸಿಗೆ ಹಾಕಿಕೊಂಡವರು ಬಹಳಷ್ಟು ಮಂದಿ.
ಆ ದಿನದ ಸಂಭ್ರಮದ ಕ್ಷಣಗಳನ್ನು ಮತ್ತೆ ನೆನಪಿಸುತ್ತಿದೆ ಸಿಗಂದೂರು ಸೇತುವೆ. ಇದೀಗ ಸೇತುವೆ ನಿರ್ಮಾಣವಾಗಿ ವರ್ಷವಾಗಿದೆ. ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿನ್ನೆ ಸೋಮವಾರ ರಾತ್ರಿ ಪಟಾಕಿ ಹೊಡೆದು ಖುಷಿ ಪಟ್ಟಿದ್ದಾರೆ. ಬಂಡಲ್ ಪಟಾಕಿಯು ಕ್ಷಣಗೊಂದರಂತೆ ಡಂಢಂ ಎನ್ನುತ್ತಾ ಆಕಾಶದಲ್ಲಿ ಚಿತ್ರ ಬಿಡಿಸಿದರೆ, ಇತ್ತ ಸೇತುವೆಯ ಬ್ಯಾಕ್ಡ್ರಾಪ್ನಲ್ಲಿ ಕಾಣುತ್ತಿದ್ದ ಸಿಡಿಮದ್ದಿನ ಚಿತ್ತಾರ ಕಂಡು ಜನರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಟಿ.ಡಿ. ಮೇಘರಾಜ್, ಕೆ.ಜಿ. ಪ್ರಶಾಂತ್, ಮಂಜಯ್ಯ ಸಂಸೆ, ಗಣಪತಿ ಹಿನ್ಸೋಡಿ, ಸಂತೋಷ ಹೊನ್ನಳ್ಳಿ, ಸಚಿನ್, ಸಿರಿ ತುಮರಿ, ಮಂಜುನಾಥ್ ತುಮರಿ, ಸಾವಿತ್ರಿ ಶಿವರಾಜ್, ಅರುಣ್ ಕರೂರು, ಗಣಪತಿ ಸುಳಮಕ್ಕಿ ಹಾಗೂ ಸನ್ಮಾನ್ ಶ್ರೀಧರ್ ಉಪಸ್ಥಿತರಿದ್ದರು.
