ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲು ವ್ಯಾಪ್ತಿಯಲ್ಲಿ ಯಾರೋ ವ್ಯಕ್ತಿಗಳು ಬಂದೂಕು ಹಾಗೂ ಕೋಲುಗಳನ್ನು ಹಿಡಿದು ತಮ್ಮನ್ನು ತಡೆದಿರುವುದಾಗಿ 112 ಪೊಲೀಸ್ ಸಿಬ್ಬಂದಿಗೆ ದೂರು ಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿ ವಿಚಾರಿಸಿದ ಪೊಲೀಸರು, ಪ್ರಕರಣವನ್ನು ಸ್ಥಳದಲ್ಲೇ ಮುಕ್ತಾಯಗೊಳಿಸಿ ಬಂದಿದ್ದಾರೆ.
Sakrebyle ಘಟನೆಯ ವಿವರ
ದೂರುದಾರರು ತಮ್ಮ ವಾಹನದಲ್ಲಿ ಸಕ್ರೆಬೈಲ್ನಿಂದ ಜಂಕ್ಷನ್ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬಂದೂಕು ಹಾಗೂ ಕೋಲುಗಳನ್ನು ಹಿಡಿದಿದ್ದ ಕೆಲವು ವ್ಯಕ್ತಿಗಳು ಇವರನ್ನು ತಡೆದಿದ್ದಾರೆ. ಇದರಿಂದ ಭಯಗೊಂಡ ದೂರುದಾರರು ಕೂಡಲೇ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕರೆ ಬಂದ ತಕ್ಷಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾಗ, ಅಲ್ಲಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿದರು. ಬಂದೂಕು ಮತ್ತು ಕೋಲುಗಳನ್ನು ಹಿಡಿದು ಯುವಕರನ್ನು ತಡೆದಿದ್ದು ಬೇರೆ ಯಾರೂ ಅಲ್ಲ, ತಾವೇ ಎಂಬುದನ್ನು ಅರಣ್ಯ ಸಿಬ್ಬಂದಿ ಸ್ಪಷ್ಟಪಡಿಸಿದರು. ತಮ್ಮ ಕರ್ತವ್ಯದ ಭಾಗವಾಗಿ ಯುವಕರನ್ನು ತಡೆದು ವಿಚಾರಣೆ ನಡೆಸುತ್ತಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದರು. ಅರಣ್ಯ ಸಿಬ್ಬಂದಿಯ ವಿವರಣೆಯ ನಂತರ ಪೊಲೀಸರು ಈ ದೂರನ್ನು ಇತ್ಯರ್ಥಪಡಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.
