ಮಳೆ ಆರ್ಭಟಕ್ಕೆ, ಬೆಂಗಳೂರು ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲು ಸಂಚಾರದಲ್ಲಿ ಏರುಪೇರು!

ಶಿವಮೊಗ್ಗ / ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಕೆಲವು ಗಂಟೆಗಳ ಕಾಲ ಸುರಿದ ಮಳೆ ಸಾಕಷ್ಟು ಸಮಸ್ಯೆಯನ್ನ ತಂದಿಟ್ಟಿತ್ತು. ಅದರಲ್ಲಿಯು ಮಳೆಯಿಂದಾಗಿ ಮರಗಳು ಬಿದ್ದ ಕಾರಣಕ್ಕೆ ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಿಶೇಷವಾಗಿ ಶಿವಮೊಗ್ಗ ಮತ್ತು ಭದ್ರಾವತಿ ನಡುವಿನ ರೈಲ್ವೆ ಮಾರ್ಗದಲ್ಲಿ ಮರ ಉರುಳಿ ಹಲವು ರೈಲುಗಳು ಅಲ್ಲಲ್ಲೆ ಗಂಟೆಗಟ್ಟಲೇ ನಿಂತಿದ್ದವು. ಜನಶತಾಬ್ದಿ ಎಕ್ಸ್​ಪ್ರೆಸ್​ ತರಿಕೆರೆಯಲ್ಲಿಯೇ ಒಂದು ಗಂಟೆಗೂ ಹೆಚ್ಚು ಕಾಲ ನಿಂತಿದ್ದರಿಂದ ಶಿವಮೊಗ್ಗಕ್ಕೆ ಬರಬೇಕಿದ್ದ ಪ್ರಯಾಣಿಕರು ತರಿಕೆರೆಯಲ್ಲಿ ಕಾಯುವಂತಾಗಿತ್ತು. ಇದಷ್ಟೆ ಅಲ್ಲದೆ ಶಿವಮೊಗ್ಗ ಚಿಕ್ಕಮಗಳೂರು ಪ್ಯಾಸೆಂಜರ್ ರೈಲು, ಕುವೆಂಪು ಎಕ್ಸ್​ಪ್ರೆಸ್ ಟ್ರೈನ್ಗಳು ಕೂಡ ಸಮಸ್ಯೆ ಎದುರಿಸಿದೆ.

ನಿನ್ನೆ ಮಳೆ ಗಾಳಿಗೆ ಶಿವಮೊಗ್ಗ ಹಾಗೂ ಭದ್ರಾವತಿ ನಡುವೆ ಮರ ಬಿದ್ದ ರಭಸಕ್ಕೆ ರೈಲ್ವೆ ವಿದ್ಯುತ್ ಲೈನ್ ತುಂಡಾಗಿತ್ತು. ಹೀಗಾಗಿ ರೈಲುಗಳ ಓಡಾಟಕ್ಕೆ ಅಡಚಣೆ ಎದುರಾಯಿತು ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಮುಂದಕ್ಕೆ ಹೋಗಲಾಗದೆ ಶಿವಮೊಗ್ಗ ವಾಪಸ್ ತರಲಾಯ್ತು. ಸಂಜೆ 6:35ಕ್ಕೆ ಶಿವಮೊಗ್ಗದಿಂದ ಪ್ರಯಾಣ ಬೆಳೆಸಿದ್ದ ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಮರ ಬಿದ್ದ ಕಾರಣ ಮಾರ್ಗಮಧ್ಯದಿಂದಲೇ ಹಿಂದಕ್ಕೆ ಮರಳಿತು. ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಇಂಟರ್‌ಸಿಟಿ ರೈಲು ರಾತ್ರಿ ಹತ್ತು ಗಂಟೆಯವರೆಗೂ ಮಧ್ಯದಲ್ಲಿಯೇ ನಿಂತಿತ್ತು ಜನಶತಾಬ್ದಿ ರೈಲು ತರೀಕೆರೆಯಲ್ಲಿಯೇ ಒಂದು ಗಂಟೆಗೂ ಹೆಚ್ಚು ಕಾಲ ನಿಲ್ಲಿಸಲಾಗಿತ್ತು. ಬಳಿಕ 10 ಗಂಟೆಯ ನಂತರ ಶಿವಮೊಗ್ಗಕ್ಕೆ ಪ್ರಯಾಣಿಸಿದೆ. ಮೈಸೂರು-ಶಿವಮೊಗ್ಗ ಕುವೆಂಪು ಎಕ್ಸ್‌ಪ್ರೆಸ್ ರೈಲನ್ನು ಸಹ ತರೀಕೆರೆಯಲ್ಲಿ ಸ್ಟಾಪ್ ಮಾಡಲಾಗಿತ್ತು. ಈ ರೈಲು ಸಹ 10 ಗಂಟೆಯ ನಂತರ ಪ್ರಯಾಣ ಆರಂಭಿಸಿತು.

ಒಟ್ಟಾರೆ, ವಿದ್ಯುತ್ ಲೈನ್​ಗೆ ಸಮಸ್ಯೆಯಾದ್ದರಿಂದ ರೈಲು ಸಂಚಾರದಲ್ಲಿ ಏರುಪೇರಾಗಿತ್ತು. ಅಂತಿಮವಾಗಿ ರೈಲ್ವೆ ಸಿಬ್ಬಂದಿಯ ಮಳೆಯ ನಡುವೆಯು ಲೈನ್ ಕ್ಲೀಯರ್ ಮಾಡಿ, ರೈಲುಗಳ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಆದಾಗ್ಯು ಈ ಸಮಸ್ಯೆಯಿಂದಾಗಿ ಪ್ರಯಾಣಿಕರು ನಡುದಾರಿಯಲ್ಲಿ ತೊಂದರೆ ಎದುರಿಸಿದರು.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw