Shikaripura ಶಿಕಾರಿಪುರ : ಶಿಕಾರಿಪುರ ಪಟ್ಟಣದಲ್ಲಿ ನಡೆದಿದ್ದ ಕಳವು ಪ್ರಕರಣವೊಂದನ್ನುಭೇದಿಸುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಮನೆಯೊಂದರ ಬೀರುವನ್ನು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಳುವಾಗಿದ್ದ ಮಾಲನ್ನುವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಶಿಕಾರಿಪುರ ಟೌನ್ ಅರಸುನಗರದ 2ನೇ ಕ್ರಾಸ್ ನಿವಾಸಿಯಾದ ಗೌರಮ್ಮ ಎಂಬುವವರು ಜೂನ್ 4 ರಂದು ಬೆಳಿಗ್ಗೆ 8:30 ರಿಂದ ಸಂಜೆ 5:45 ರ ಅವಧಿಯಲ್ಲಿ ವೈಯಕ್ತಿಕ ಕೆಲಸದ ನಿಮಿತ್ತ ಮನೆಯಿಂದ ಹೊರಗೋಗಿದ್ದರು. ಈ ಸಮಯವನ್ನು ಬಳಸಿಕೊಂಡ ಕಳ್ಳರು, ಅವರ ಮನೆಯ ಬೀರೊನಲ್ಲಿದ್ದ ಲಕ್ಷಾಂತರ ಮೌಲ್ಯದ ಸೊತ್ತನ್ನು ಲೂಟಿ ಮಾಡಿದ್ದರು. ಈ ಬಗ್ಗೆ ಗೌರಮ್ಮ ಅವರು ಜೂನ್ 5 ರಂದು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ಈ ಹಿನ್ನೆಲೆ ಕಳ್ಳರ ಪತ್ತೆಗಾಗಿ ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ತನಿಖೆ ಚುರುಕುಗೊಳಿಸಿದ ಈ ವಿಶೇಷ ತಂಡವು ಶಿಕಾರಿಪುರ ಪಟ್ಟಣದ ಸೊಪ್ಪಿನಕೇರಿ ಮಾಸೂರು ರಸ್ತೆ ನಿವಾಸಿಯಾದ 47 ವರ್ಷದ ಅಮಿತ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ ಕಳವು ಮಾಡಲಾಗಿದ್ದ 3,14,400 ರೂಪಾಯಿ ಮೌಲ್ಯದ 28 ಗ್ರಾಂ ತೂಕದ ಚಿನ್ನದ ಆಭರಣಗಳು, 26,800 ರೂಪಾಯಿ ಮೌಲ್ಯದ 134 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಹಾಗೂ 2 ಲಕ್ಷ ರೂಪಾಯಿ ಹಾರ್ಡ್ ಕ್ಯಾಶ್ ಸೇರಿದಂತೆ ಒಟ್ಟು ಮೊತ್ತವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
