ಶಿವಮೊಗ್ಗ : ನಗರದ ಗೌಸಿಯಾ ಸರ್ಕಲ್ನಲ್ಲಿರುವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು, ಮನೆ ಮಾಲೀಕನ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದಲ್ಲಿ ಉದ್ಯೋಗ ನೇರ ಸಂದರ್ಶನ: ಎಲ್ಲಿ, ಯಾವಾಗ
Shivamogga Crime ಘಟನೆ ವಿವರ
ಜೂನ್ 9ರ ಸಂಜೆ ಗೌಸಿಯಾ ಸರ್ಕಲ್ನಲ್ಲಿರುವ ದೂರುದಾರರ ಮನೆಗೆ ಆರೋಪಿಗಳ ಗುಂಪು ನುಗ್ಗಿದೆ. ಈ ಸಮಯದಲ್ಲಿ ಮನೆಯಲ್ಲಿ ದೂರುದಾರರ ಮಗಳು ಮಾತ್ರ ಒಬ್ಬಳೇ ಇದ್ದರು. ಇದನ್ನು ಗಮನಿಸಿದ ಆರೋಪಿಗಳು, ನಿನ್ನ ತಂದೆ ಎಲ್ಲಿದ್ದಾನೆ ಆತನನ್ನು ಜೀವಸಹಿತ ಬಿಡುವುದಿಲ್ಲ ಎಂದು ಯುವತಿಗೆ ಹೆದರಿಸಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಅಲ್ಲಿಂದ ತೆರಳಿದ್ದಾರೆ. ಇದರಿಂದ ಗಾಬರಿಗೊಂಡ ಮಗಳು, ಕೂಡಲೇ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ತಂದೆ ತಕ್ಷಣವೇ ಮನೆಗೆ ಧಾವಿಸಿದ್ದಾರೆ. ಆದರೆ, ದೂರುದಾರರ ಬರುವಿಕೆಯನ್ನೇ ಹೊಂಚು ಹಾಕಿ ಕಾದು ಕುಳಿತಿದ್ದ ಆರೋಪಿಗಳ ಗುಂಪು, ಮತ್ತೊಮ್ಮೆ ಮನೆಗೆ ನುಗ್ಗಿದೆ. ಈ ವೇಳೆ ತಂದೆಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರವಾದ ಡ್ರ್ಯಾಗರ್ನಿಂದ ಅವರ ಬೆನ್ನಿಗೆ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಅಲ್ಲದೆ, ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಭೀಕರ ದಾಳಿಗೆ ನಿಖರವಾದ ಕಾರಣ ಏನೆಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.
