SHIVAMOGGA | Jan 18, 2024 | ಶಿವಮೊಗ್ಗದಲ್ಲಿ ಮರಳಿಗೆ ಹಾಹಕಾರ ಆರಂಭವಾಗಿದೆ. ಮರಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಅಕ್ರಮ ಸಾಗಾಟವೂ ಸಹ ಹೆಚ್ಚಾಗಿದೆ. ಮರಳು ಟೆಂಡರ್ ಕರೆಯದ ಪರಿಣಾಮ ಜನರಿಗೆ ಮರಳು ಸಿಗುತ್ತಿಲ್ಲ. ಹೀಗಾಗಿ ಡಿಮ್ಯಾಂಡ್ ಹೆಚ್ಚಾಗಿದೆ. ಈ ಸಂಬಂಧ ಕೂಡಲೇ ಮರಳು ಕ್ವಾರೆ ಟೆಂಡರ್ ಕರೆಯುವಂತೆ ಹಾಗೂ ಸರ್ಕಾರಿ ಕ್ವಾರಿಗಳ ಮೂಲಕ ಸಾರ್ವಜನಿಕರಿಗೂ ಸಹ ಮರಳನ್ನು ಒದಗಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿಯವರಿಗೆ ಮನವಿ ಸಲ್ಲಿಸಲಾಗಿದೆ.
ಸಾರ್ವಜನಿಕರು ಹಾಗೂ ಟಿಪ್ಪರ್, ಲಾರಿ ಮಾಲೀಕರು ಈ ಸಂಬಂಧ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಯವರಿಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಿವಮೊಗ್ಗ ನಗರ ಶಾಸಕ ಚೆನ್ನಬಸಪ್ಪ ರವರ ಸಮ್ಮುಖದಲ್ಲಿ ಮನವಿ ಸಲ್ಲಿಸಿದರು.
ಮರಳು ಬೇಕು..ಬೇಕು ಮರಳು ಮನವಿ
ವಿಷಯ : ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರುವ ಮರಳು ಕ್ವಾರೆಗಳಲ್ಲಿ ಸಾರ್ವಜನಿಕರಿಗೆ ಶೇ. 50ರಷ್ಟು ಮರಳು ಒದಗಿಸಲು ಮತ್ತು ಕಾರ್ಮಿಕರನ್ನು ಸಂಕಷ್ಟದಿಂದ ಪಾರು ಮಾಡುವ ಬಗ್ಗೆ.
ಸ್ವಾಮೀ. ಕಳೆದ ಆರು ತಿಂಗಳ ಹಿಂದೆ ಕ್ಲೋಸ್ ಆಗಿದ್ದ ಮರಳು ಟೆಂಡರ್ ಅನ್ನು ಮತ್ತೆ ಕರೆದಿಲ್ಲ. ಕೆಲವೇ ಕ್ವಾರಗಳಲ್ಲಿ ಮಾತ್ರ ಮರಳು ತೆಗೆಯುತ್ತಿದ್ದು, ಸರ್ಕಾರಿ ಕಾಮಗಾರಿಗಳಿಗೆ ಮಾತ್ರ ಈ ಮರಳನ್ನು ಒದಗಿಸಲಾಗುತ್ತಿದೆ. ಹಲವಾರು ಕ್ವಾರೆಗಳು ಬಂದ್ ಆಗಿರುವುದರಿಂದಾಗಿ ಸಾರ್ವಜನಿಕರಿಗೆ ಮನೆ, ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮರಳು ಸಿಗದೇ ಪರದಾಡುವಂತಾಗಿದೆ.
ಹಾಗೆಯೇ ಮರಳು ಕಾರೆಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದ್ದು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸಾರ್ವಜನಿಕರು ಮರಳಿನ ಅಭಾವದಿಂದಾಗಿ ನಿಗಧಿತ ಸಮಯದಲ್ಲಿ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ. ಹೊರಜಿಲ್ಲೆಗಳಿಂದ ಮರಳು ಖರೀದಿ ಮಾಡಲೂ ಆಗುತ್ತಿಲ್ಲ. ಅಲ್ಲದೇ ಜಿಲ್ಲೆಯಿಂದ ಅಕ್ರಮವಾಗಿ ಮರಳು ಬೇರೆಡೆ ಸಾಗಾಟವಾಗುತ್ತಿದೆ. ಇದರಿಂದಾಗಿ ಮರಳಿನ ಬೆಲೆಯೂ ಹೆಚ್ಚಾಗಿದ್ದು, ಕಟ್ಟಡ ನಿರ್ಮಾಣ ಮಾಡಿಸುವವರಿಗೆ ಹೊರೆಯಾಗುತ್ತಿದ್ದು, ಕಟ್ಟಡ ಕಾರ್ಮಿಕರು, ಕ್ವಾರೆಗಳ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.
ಕೂಡಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಮರಳು ಕಾರೆಗಳಿಗೆ ಟೆಂಡರ್ ಕರೆಯಬೇಕು. ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರುವ ಕ್ವಾರೆಗಳಲ್ಲಿ ಶೇ. 50ರಷ್ಟು ಮರಳನ್ನು ಸಾರ್ವಜನಿಕರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಎಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ.