Tyavarekoppa Zoo Negligence ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ತರಬೇತಿ ಪಡೆಯುತ್ತಿದ್ದ ಪಶುವೈದ್ಯಾಧಿಕಾರಿ, ಬೆಂಗಳೂರು ಮೂಲದ 27 ವರ್ಷದ ಡಾ. ಸಮೀಕ್ಷಾ ರೆಡ್ಡಿ ಅವರು ನೀರಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡಿದೆ. ಸದ್ಯ ಈ ಪ್ರಕರಣ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ವನ್ಯಜೀವಿ ವೈದ್ಯರ ಜೀವಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಇಷ್ಟಕ್ಕೂ ನಡೆದಿದ್ದೇನು ಎಂಬ ವಿಚಾರವಾಗಿ ‘ಮಲೆನಾಡು ಟುಡೆ’ ಪರಿಶೀಲನೆ ನಡೆಸಿದಾಗ, ಪ್ರಾಥಮಿಕ ಹಂತದಲ್ಲಿಯೇ ವನ್ಯಜೀವಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ.

ತಡರಾತ್ರಿ 12.30ಕ್ಕೆ ತಪಾಸಣೆಗೆ ಕರೆದಿದ್ದೇಕೆ?
‘ಮಲೆನಾಡು ಟುಡೆ‘ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಲಯನ್ ಸಫಾರಿಯಲ್ಲಿರುವ ನೀರಾನೆಯು ಕಳೆದ 7 ದಿನಗಳಿಂದ ಮರಿ ಹಾಕುವ ಪ್ರಯತ್ನದಲ್ಲಿತ್ತು. ಆದರೆ, ಹೆರಿಗೆಯಾಗಿರಲಿಲ್ಲ. ಹೀಗಾಗಿ ಅದನ್ನು ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ನಿನ್ನೆ ರಾತ್ರಿ ನೀರಾನೆಗೆ ರಕ್ತಸ್ರಾವ ಶುರುವಾಗಿತ್ತು. ಇದನ್ನು ಗಮನಿಸಿದ ಸಿಬ್ಬಂದಿ, ಅಲ್ಲಿಯೇ ಉಳಿದುಕೊಂಡಿದ್ದ ಡಾ. ಸಮೀಕ್ಷಾ ರೆಡ್ಡಿ ಅವರಿಗೆ ವಿಷಯ ತಿಳಿಸಿ, ಅವರನ್ನು ನೀರಾನೆ ಇದ್ದ ಕೇಜ್ ಬಳಿಗೆ ಕರೆದುಕೊಂಡು ಬಂದಿದ್ದಾರೆ. ಆನಂತರ ಇಂತಹದ್ದೊಂದು ದುರ್ಘಟನೆ ನಡೆದಿದೆ. ಹೀಗೆ ವೈದ್ಯರೊಬ್ಬರನ್ನು ವನ್ಯಜೀವಿಯ ಬಳಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ, ಸಕ್ಷಮ ಅಧಿಕಾರಿಗಳು ಅಲ್ಲಿ ಉಪಸ್ಥಿತರಿರಲಿಲ್ಲ ಎಂಬುದು ಗಮನಾರ್ಹ.
ಮಧ್ಯರಾತ್ರಿ 12.30ರ ಸುಮಾರಿಗೆ ನೀರಾನೆ ಇದ್ದ ಕೇಜ್ ಬಳಿ ತೆರಳಿದ ಡಾ. ಸಮೀಕ್ಷಾ ರೆಡ್ಡಿ, ಆನಂತರ ಕೇಜ್ನ ಒಳಗೆ ಹೋಗಿದ್ದಾರೆ. ಹಿರಿಯ ವನ್ಯಜೀವಿ ವೈದ್ಯರು ಹೇಳುವ ಪ್ರಕಾರ, ಮರಿ ಹಾಕುವ ಸಂದರ್ಭವೂ ಸೇರಿದಂತೆ ಎಲ್ಲಾ ಸನ್ನಿವೇಶಗಳಲ್ಲಿಯೂ ವನ್ಯಜೀವಿಗಳ ಬಳಿಗೆ ನೇರವಾಗಿ ಯಾವುದೇ ವೈದ್ಯರು ಹೋಗುವುದಿಲ್ಲ. ಕನಿಷ್ಠ 1 ಅಥವಾ 2 ಗಂಟೆ ನಿಗಾ ವಹಿಸಿದ ಬಳಿಕ, ವನ್ಯಜೀವಿ ಅಧಿಕಾರಿಗಳ ಅನುಮತಿ ಹಾಗೂ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಮೇಲಾಗಿ, ಇನ್ನೇನು ಮರಿಹಾಕುವ ಸ್ಥಿತಿಯಲ್ಲಿರುವ ಪ್ರಾಣಿಗಳಿಗೆ ಡಾರ್ಟ್ ಮಾಡಿ, ಅರಿವಳಿಕೆ (ಅನಸ್ತೇಶಿಯಾ) ನೀಡಿ ಚಿಕಿತ್ಸೆ ಕೊಡುವುದು ಸಹ ಸಾಧ್ಯವಿಲ್ಲ.

ಆದರೆ, ಹುಲಿ ಮತ್ತು ಸಿಂಹಧಾಮದಲ್ಲಿ ನಿನ್ನೆ ರಾತ್ರಿ ಡಾ. ಸಮೀಕ್ಷಾ ರೆಡ್ಡಿ ಅವರನ್ನು ಕೇಜ್ನೊಳಗೆ ಹೋಗುವಂತೆ ನಿರ್ದೇಶಿಸಿದ್ದು ಯಾರು? ಸ್ವತಃ ಕೇಜ್ನೊಳಗೆ ಹೋಗುವುದಕ್ಕೆ ಅವರಿಗೆ ಅನುಮತಿಯೇ ಇರುವುದಿಲ್ಲ, ಏಕೆಂದರೆ ಅವರು ಇನ್ನೂ ಸಹ ತರಬೇತಿಯ ಹಂತದಲ್ಲಿರುವ ವೈದ್ಯರು. ಮೇಲಾಗಿ, ಅಲ್ಲಿರಬೇಕಾಗಿದ್ದ ವೈದ್ಯರಾದ ಡಾ. ಮುರುಳಿ ಅವರು ಕಳೆದ 4 ರಿಂದ 5 ದಿನಗಳಿಂದ ಬೇರೊಂದು ಕೆಲಸದ ನಿಮಿತ್ತ ಹೊರಗಡೆ ಇದ್ದಾರೆ. ಅವರ ಅನುಪಸ್ಥಿತಿಯಲ್ಲಿ ಡಾ. ಸಮೀಕ್ಷಾ ರೆಡ್ಡಿ ಯಾವುದೇ ಸ್ವಯಂ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಹಾಗೊಂದು ವೇಳೆ, ಕೇಜ್ನೊಳಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಡಿಸಿಎಫ್ ಅನುಮತಿಯ ಅಗತ್ಯವಿದೆ. ಆದರೆ, ನಿನ್ನೆ ನಡೆದ ಘಟನೆಯ ಸಂದರ್ಭದಲ್ಲಿ ಯಾರ ಉಪಸ್ಥಿತಿಯೂ ಇರಲಿಲ್ಲ. ಹೀಗಿದ್ದರೂ ಅವರು ಕೇಜ್ನೊಳಗೆ ಹೋಗಿದ್ದಾರೆ. ಸ್ವತಃ ಅವರೇ ಹೋದರು ಎಂಬ ಆರೋಪವನ್ನು ಈಗಾಗಲೇ ಮಾಡಲಾಗುತ್ತಿದೆಯಾದರೂ, ಅದು ನಂಬಲು ಸಾಧ್ಯವಾಗದ ಅರ್ಧಸತ್ಯ.
ಹೀಗೆ ಕೇಜ್ನೊಳಗೆ ಹೋದ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ನೀರಾನೆ ದಾಳಿ ಮಾಡಿದೆ. ದಾಳಿ ಮಾಡಿದ ಬೆನ್ನಲ್ಲೇ ಅವರ ರಕ್ಷಣೆಗೆ ಮುಂದಾಗಲು ಅಲ್ಲಿ ಹೆಚ್ಚಿನ ಸಿಬ್ಬಂದಿ ಇರಲಿಲ್ಲ. ಇದರಿಂದ ದೊಡ್ಡ ಕನಸು ಹೊತ್ತಿದ್ದ ತಂದೆ-ತಾಯಿ ತಮ್ಮ ಕನಸಿನ ಕೂಸನ್ನೇ ಕಳೆದುಕೊಳ್ಳುವಂತಾಗಿದೆ. ಇದೀಗ ಆ ತಂದೆ-ತಾಯಿಗೆ ಉತ್ತರ ಹಾಗೂ ಸಾಂತ್ವನ ಹೇಳುವವರು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ.

ಖಾಯಂ ವೈದ್ಯರನ್ನು ನೇಮಿಸಿಕೊಳ್ಳುವ ಬಗ್ಗೆ ಈ ಹಿಂದೆ ಹಲವು ಸಲ ಚರ್ಚೆಗಳಾಗಿವೆ. ಆದರೆ, ಹೊರಗುತ್ತಿಗೆ ಆಧಾರದಲ್ಲಿಯೇ ಮೃಗಾಲಯಗಳಿಗೆ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಡಾ. ಸಮೀಕ್ಷಾ ರೆಡ್ಡಿ ಕೂಡ ಹೊರಗುತ್ತಿಗೆ ಮೂಲಕ ಬಂದವರು. ಅವರು ಡಾ. ಮುರುಳಿ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಡಾ. ವಿನಯ್ ಅವರು ಆನೆಯೊಂದರಿಂದ ತೀವ್ರವಾಗಿ ದಾಳಿಗೆ ಒಳಗಾಗಿದ್ದರು. ಆ ಘಟನೆಯ ನೆನಪು ಇನ್ನೂ ಸಹ ಹಸಿರಾಗಿದೆ. ಇದೀಗ ಡಾ. ಸಮೀಕ್ಷಾ ರೆಡ್ಡಿ ಅವರ ಸಾವು ಸಂಭವಿಸಿದೆ. ವನ್ಯಜೀವಿಯ ದಾಳಿಯು ಸ್ವಾಭಾವಿಕ. ಆದರೆ, ಆ ಸತ್ಯ ಗೊತ್ತಿದ್ದರೂ ಸಹ ಡಾ. ಸಮೀಕ್ಷಾ ರೆಡ್ಡಿ ಅವರನ್ನು ಕೇಜ್ನೊಳಗೆ ಹೋಗುವಂತೆ ಮಾಡಿದ್ದು ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
