ಸಾಗರ: ಕರ್ನಾಟಕದ ಅತಿ ದೊಡ್ಡ ಜನಪದ ಜಾತ್ರೆಗಳಲ್ಲಿ ಒಂದಾದ ಐತಿಹಾಸಿಕ ಸಾಗರ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಇಂದಿನಿಂದ (ಫೆಬ್ರವರಿ 3) ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. ನಗರದಾದ್ಯಂತ ಸ್ವಾಗತ ಕಮಾನುಗಳು ಮತ್ತು ವಿದ್ಯುತ್ ದೀಪಾಲಂಕಾರಗಳು ಕಂಗೊಳಿಸುತ್ತಿದ್ದು, ಮಲೆನಾಡಿನ ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಗರ ನಗರವು ಸಂಪೂರ್ಣವಾಗಿ ಸಜ್ಜಾಗಿದೆ.
ಶಿವಮೊಗ್ಗ: ಮೂವರು ಅಪರಾಧಿಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ :ಆರೋಪಿಗಳು ಅಂತದ್ದೇನು ಮಾಡಿದ್ರು ಗೊತ್ತಾ..?
ಇಂದು ಮುಂಜಾನೆ ದೇವಿಯ ತವರುಮನೆ ದೇವಸ್ಥಾನದಲ್ಲಿ ವಿಗ್ರಹಕ್ಕೆ ದೃಷ್ಟಿಬೊಟ್ಟು ಇಡುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ. ರಾತ್ರಿ 10 ಗಂಟೆಗೆ ದೇವಿಯನ್ನು ತವರುಮನೆಯಿಂದ ಗಂಡನ ಮನೆಗೆ ರಾಜಬೀದಿ ಉತ್ಸವದ ಮೂಲಕ ಕರೆದೊಯ್ಯಲಾಗುವುದು. ಈ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಅಸಾದಿ ಜನಾಂಗದವರ ಸೇವೆ ಮತ್ತು ಪೋತರಾಜರ ಚಾಟಿ ಸೇವೆ ವಿಶೇಷ ಆಕರ್ಷಣೆಯಾಗಿರಲಿದೆ. ಬುಧವಾರ ಬೆಳಗ್ಗೆಯಿಂದ ಗಂಡನ ಮನೆಯಲ್ಲಿ ನಿರ್ಮಿಸಿರುವ ವಿಶೇಷ ಮಂಟಪದಲ್ಲಿ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಜಾತ್ರೆಯ ಅಂಗವಾಗಿ ಗಾಂಧಿ ಮೈದಾನದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನೆಹರೂ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಭಕ್ತರ ಸುರಕ್ಷತೆಗಾಗಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 150ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿದೆ.
ಜಾತ್ರೆಗೆ ಬರುವ ಭಕ್ತರಿಗಾಗಿ ನಗರದ ನಾಲ್ಕೂ ದಿಕ್ಕುಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಶಿವಮೊಗ್ಗ ರಸ್ತೆಯಿಂದ ಬರುವವರಿಗೆ ರಾಯಣ್ಣ ಮೈದಾನ ಮತ್ತು ಸೊರಬ ರಸ್ತೆಯಿಂದ ಬರುವವರಿಗೆ ಗಣಪತಿ ಕೆರೆ ಪಕ್ಕದ ಮೈದಾನದಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಫೆಬ್ರವರಿ 11ರಂದು ದೇವಿಯನ್ನು ವನಕ್ಕೆ ಬಿಡುವ ಶಾಸ್ತ್ರದೊಂದಿಗೆ ಈ ಭವ್ಯ ಜಾತ್ರೆ ಮುಕ್ತಾಯಗೊಳ್ಳಲಿದೆ.
Sagara Marikamba Jathre 2026 Grand Opening

