ಮಲೆನಾಡು ಟುಡೆ ಸುದ್ದಿ / ಹೊನ್ನಾಳಿ / ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಆದೇಶ ಹಿಂಪಡೆದು ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಹೊನ್ನಾಳಿಯಿಂದ ದಾವಣಗೆರೆಯವರೆಗೆ ಪಾದಯಾತ್ರೆ (Davanagere Padayatra) ಹಮ್ಮಿಕೊಳ್ಳುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಘೋಷಿಸಿದ್ದಾರೆ. ಅಲ್ಲದೆ ಆದೇಶ ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಿನ್ನೆ ದಿವಸ ಶನಿವಾರ ತಾಲೂಕು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗುಟ್ಕಾ ನಿಷೇಧ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುವ ಬಗ್ಗೆ ಸಮಾಲೋಚಿಸಿದ ಅವರು, ಗುಟ್ಕಾ ನಿಷೇಧ ಆದೇಶ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಹೋರಾಟದ ಮೊದಲ ಹಂತವಾಗಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಎರಡನೇ ಹಂತದಲ್ಲಿ ಹೊನ್ನಾಳಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದರು
ಎಂಪಿ ರೇಣುಕಾಚಾರ್ಯ ಹೇಳಿದ ಮೂರು ಮುಖ್ಯಾಂಶಗಳು
- ಆಗಸ್ಟ್ 26ರಂದು ಹೊನ್ನಾಳಿಯ ಹಿರೇಕಲ್ಮಠ ವೃತ್ತದಿಂದ ಪಾದಯಾತ್ರೆ ಆರಂಭವಾಗಲಿದೆ. ಮೊದಲ ದಿನ ಕೂಲಂಬಿಯಲ್ಲಿ ಪಾದಯಾತ್ರಿಗಳು ವಾಸ್ತವ್ಯ ಹೂಡಲಿದ್ದಾರೆ. ಎರಡನೇ ದಿನ ಪಾದಯಾತ್ರೆ ದಾವಣಗೆರೆ ತಾಲೂಕು ಪ್ರವೇಶಿಸಲಿದ್ದು, ಅಲ್ಲಿಯೂ ಒಂದು ದಿನ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.
- ನಂತರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಮತ್ತು ಪ್ರತಿಭಟನೆ ನಡೆಸಲಾಗುವುದು. ಅಡಿಕೆ ಬೆಳೆಗಾರರ ಬೇಡಿಕೆಗಳನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
- ಚನ್ನಗಿರಿ, ಜಗಳೂರು, ಹರಿಹರ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದಲೂ ಪಾದಯಾತ್ರೆಗಳು ಆರಂಭವಾಗಲಿವೆ ಎಂದು ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಸಭೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ತರಗನಹಳ್ಳಿ ರಮೇಶ್ ಗೌಡ, ಮುಖಂಡರಾದ ನೆಲಹೊನ್ನೆ ಮಂಜುನಾಥ್, ಕೆ.ವಿ. ಶ್ರೀಧರ್, ಬಾಬು ಹೋಬಳದಾರ್, ರಂಗನಾಥ್, ಎಂ.ಆರ್. ಮಹೇಶ್, ಎಸ್.ಎಸ್. ಬೀರಪ್ಪ, ರಘು, ನವೀನ್ ಇಂಚರ, ಸರಳಿನಮನೆ ಮಂಜುನಾಥ್, ಕುಮಾರಸ್ವಾಮಿ, ಮಾರುತಿ ನಾಯ್ಕ, ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
