ಶಿವಮೊಗ್ಗ : ಮಲೆನಾಡು ಎಂದಿಗೂ ಪ್ರವಾಸಿಗರ ಪಾಲಿನ ಸುಂದರ ತಾಣ. ಅದರಲ್ಲೂ ಸಾಲು ಸಾಲು ರಜೆಗಳ ಸಂಭ್ರಮವಿದ್ದರಂತೂ ಮಲೆನಾಡಿನ ಸೊಬಗನ್ನು ಸವಿಯಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುವುದು ಸಾಮಾನ್ಯ. ಪ್ರಸ್ತುತ ಕ್ರಿಸ್ಮಸ್, ವಾರಾಂತ್ಯ ಹಾಗೂ ವರ್ಷಾಂತ್ಯದ ಸಂಭ್ರಮಗಳು ಒಟ್ಟಿಗೆ ಬಂದಿರುವುದರಿಂದ ರಾಜಧಾನಿಯ ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಸಾವಿರಾರು ಪ್ರವಾಸಿಗರು ಮಲೆನಾಡಿಗೆ ಲಗ್ಗೆ ಇಟ್ಟಿದ್ದಾರೆ.

ಶಿವಮೊಗ್ಗ, ಹೊಸ ವರ್ಷಾಚರಣೆ, ಎಸ್ ಪಿ ಹೇಳಿದ್ದೇನು
ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ, ವಿಶ್ವವಿಖ್ಯಾತ ಜೋಗ ಜಲಪಾತ, ಕೊಡಚಾದ್ರಿ ಪರ್ವತ ಶ್ರೇಣಿ, ಸಕ್ರೇಬೈಲು ಆನೆ ಬಿಡಾರ ಹಾಗೂ ಆಗುಂಬೆಯ ಸೂರ್ಯಾಸ್ತಮಾನದಂತಹ ಪ್ರಸಿದ್ಧ ತಾಣಗಳಿಗೆ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಕಾಡಿನ ನಡುವಿನ ಜಲಪಾತಗಳು, ಭದ್ರಾ ಅಣೆಕಟ್ಟು ಮತ್ತು ಪಕ್ಷಿಧಾಮಗಳು ಈಗ ಪ್ರವಾಸಿಗರಿಂದ ಗಿಜಿಗುಡುತ್ತಿವೆ. ಹಸಿರ ಸಿರಿಯ ನಡುವೆ ಕಾಲ ಕಳೆಯುತ್ತಾ ಪ್ರವಾಸಿಗರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಸಂಭ್ರಮಿಸುತ್ತಿದ್ದಾರೆ.
ವಿಶೇಷವಾಗಿ ಶಿವಮೊಗ್ಗ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಕಳೆದ ಮೂರು ದಿನಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮಕ್ಕಳ ಅಚ್ಚುಮೆಚ್ಚಿನ ಈ ತಾಣದಲ್ಲಿ ವಿಶೇಷ ರಿಯಾಯಿತಿ ಆಫರ್ಗಳನ್ನು ಘೋಷಿಸಿರುವುದು ಜನಸಂದಣಿ ಹೆಚ್ಚಾಗಲು ಕಾರಣವಾಗಿದೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದ ತಂಡಗಳು ಕೂಡ ಜಿಲ್ಲೆಯಾದ್ಯಂತ ದಾಂಗುಡಿಯಿಡುತ್ತಿದ್ದು, ಮಲೆನಾಡಿನ ಪ್ರವಾಸೋದ್ಯಮಕ್ಕೆ ಹೊಸ ಕಳೆ ಬಂದಿದೆ.
ಒಟ್ಟಾರೆಯಾಗಿ, 2025ರ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಮಲೆನಾಡು ಸಜ್ಜಾಗಿದೆ. ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಜನರು ಮಲೆನಾಡಿನ ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲಿ ನೆಲೆಸುತ್ತಿದ್ದಾರೆ. ಈ ಸಂಭ್ರಮದ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರವಾಸಿಗರು ಜಾಗರೂಕತೆಯಿಂದ ಪ್ರಕೃತಿಯನ್ನು ಎಂಜಾಯ್ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.
Heavy Tourist Inflow to Jog Falls & Tyavarekoppa




