ಶಿವಮೊಗ್ಗ: ರೈಲ್ವೇ ರಕ್ಷಣಾ ಪಡೆ (RPF), ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿ ಮಹತ್ತರ ಕಾರ್ಯವೊಂದನ್ನು ಮಾಡಿದೆ. ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ನಗದು ಮತ್ತು ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಅನ್ನು ಸುರಕ್ಷಿತವಾಗಿ ಪತ್ತೆಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಆರ್ಪಿಎಫ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
‘ಆಪರೇಷನ್ ಅಮಾನತ್’ ಅಭಿಯಾನದ ಅಡಿಯಲ್ಲಿ ಕಾರ್ಯಾಚರಣೆ ನಡೆಸಿದ ಶಿವಮೊಗ್ಗ ಟೌನ್ ಆರ್ಪಿಎಫ್ ತಂಡಕ್ಕೆ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಬ್ಯಾಗ್ ಒಂದು ಪತ್ತೆಯಾಗಿತ್ತು. ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ 50,000 ರೂಪಾಯಿ ನಗದು ಹಾಗೂ ಹೊಸ ಬಟ್ಟೆಗಳು ಸೇರಿದಂತೆ ಒಟ್ಟು 60,000 ರೂಪಾಯಿ ಮೌಲ್ಯದ ವಸ್ತುಗಳಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಬ್ಯಾಗ್ ಕಳೆದುಕೊಂಡ ಪ್ರಯಾಣಿಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಸರಿಯಾದ ದಾಖಲೆ ಮತ್ತು ಗುರುತನ್ನು ಪರಿಶೀಲಿಸಿದ ನಂತರ, ಆರ್ಪಿಎಫ್ ಸಿಬ್ಬಂದಿ ಹಣ ಮತ್ತು ವಸ್ತುಗಳಿದ್ದ ಬ್ಯಾಗ್ ಅನ್ನು ಸಂಬಂಧಪಟ್ಟ ಪ್ರಯಾಣಿಕರಿಗೆ ಹಸ್ತಾಂತರಿಸಿದರು.
