ಶಿವಮೊಗ್ಗ …ಮಲೆನಾಡು… ದಟ್ಟ ನಿಸರ್ಗ… ಪಶ್ಚಿಮ ಘಟ್ಟಗಳ ಶ್ರೇಣಿ.. ವನಪಾಲನೆ… ನನ್ನ ಅಪ್ಪ.. ಕಲಿಸಿದ ಬದುಕಿನ ಪಾಠಗಳು…

Forester’s ನನ್ನ ಬದುಕಿನ ಅತ್ಯಂತ ಶ್ರೀಮಂತ ಆಸ್ತಿ ನಿಸರ್ಗದ ಮಡಿಲಲ್ಲಿ ಕಳೆದ ನನ್ನ ಬಾಲ್ಯ.. ನನಗೆ ಇಬ್ಬರು ಅಮ್ಮಂದಿರು… ಒಬ್ಬಾಕೆ ಜನ್ಮ ನೀಡಿದ ತಾಯಿ.. ಮತ್ತೊಬ್ಬ ಅಮ್ಮ ಮದರ್ ನೇಚರ್!!​ ಕಾಡಿನ ಮಡಿಲಲ್ಲಿ, ಪ್ರಕೃತಿಯ ಅಸ್ತಿತ್ವವನ್ನೇ ಉಸಿರಾಡುತ್ತಾ, ಒಬ್ಬ ವನಪಾಲಕನ (Forester) ಮಗಳಾಗಿ ಹುಟ್ಟಿದ ನಾನು ಬಹಳ ಕಾರಣಗಳಿಗಾಗಿ ಅದೃಷ್ಟವಂತೆ…

ಬೆಂಗಳೂರು-ಶಿವಮೊಗ್ಗ ಟ್ರೈನ್​ನಲ್ಲಿ ಸಿಕ್ಕ ಟಿಟಿನೇ ಫೇಕ್! ರಾಗಿಗುಡ್ಡದಲ್ಲಿ Rcb ಕ್ರಿಕೆಟ್ ಕಿರಿಕ್, ಮದುವೆಗೆ ನೋ ಎಂದ ವರ! ದಾಖಲಾಯ್ತು ಕೇಸ್ !ಜಸ್ಟ್ ಶಿವಮೊಗ್ಗ 

ಇಂದು ಪರಿಸರ ದಿನಾಚರಣೆ ಎನ್ನುವಾಗ ನನಗದು ಕೇವಲ ಒಂದು ದಿನವಲ್ಲ;ಅದು ನನ್ನ ಇಡೀ ಬಾಲ್ಯ, ನನ್ನ ಅಸ್ತಿತ್ವ. ಹಚ್ಚಹಸಿರಿನ ದಟ್ಟ ಕಾಡಿನ ಮಧ್ಯೆ ನನ್ನ ಅಪ್ಪನ ಜೊತೆ ನಡೆಸುತ್ತಿದ್ದ ಮಾತುಕತೆಗಳು ಇಂದಿಗೂ ನನ್ನೊಳಗೆ ಹಸಿರಾಗಿವೆ… ಭೂಮಿಯ ಕತ್ತಲ ಒಳಗಿಳಿದು ಮರವನ್ನು ಹಸಿರಾಗಿಸಿ ಸದಾ ಜೀವಂತವಾಗಿರುಸುವ ಬೇರಿನಂತೆ..​ಅಪ್ಪ ನನಗೆ ಮರಗಳನ್ನು ಕೇವಲ ಮರಗಳಾಗಿ ನೋಡಲು ಕಲಿಸಲಿಲ್ಲ, ಅವುಗಳ ಹಿಂದಿನ ಬದುಕನ್ನು ಓದಲು ಕಲಿಸಿದರು. ಎಲೆಗಳೆಲ್ಲ ಉದುರಿ ಬೆತ್ತಲಾಗಿ ನಿಂತ ಮರ… ಅದರ ಪಕ್ಕದಲ್ಲೇ ಸದಾ ಹಸಿರಿನಿಂದ ಕಂಗೊಳಿಸುವ ಮತ್ತೊಂದು ಮರ…, ತನ್ನನ್ನು ತಾನು ದಣಿಸಿಕೊಂಡು ಮತ್ತೊಂದು ಪರಾವಲಂಬಿ ಬಳ್ಳಿಗೆ ಆಸರೆಯಾಗಿ ನಿಲ್ಲುವ ಮರದ ಔದಾರ್ಯ… 

ಉದುರುವ ಎಲೆಯ ಕ್ಷಣಿಕತೆ… ಉದುರಿದ ಜಾಗದಲ್ಲಿ ಅಂಕುರಿಸುವ ಚಿಗುರಿನ ಭರವಸೆ.. ಪ್ರಾಣಿ ಪಕ್ಷಿ ಸಂಕುಲವನ್ನು ಪೋಷಿಸುವ ಹೂ ಹಣ್ಣುಗಳು.. ಮಣ್ಣನ್ನು ಫಲವತ್ತಾಗಿಸುವ ಉದರಿದ ಎಲೆಗಳು.. ಭೂ ಸವಕಳಿಯನ್ನು ತಡೆಯುವ ಬೇರುಗಳು….ಇವೆಲ್ಲವನ್ನೂ ಅಪ್ಪ ನನಗೆ ಪ್ರಕೃತಿಯ ಮೂಲಕ ತೋರಿಸಿಕೊಟ್ಟರು.

ಅಪ್ಪ ಆಗಾಗ ಹೇಳುತ್ತಿದ್ದರು, ಮಗಳೇ, ಕಣ್ಣಿಗೆ ಕಾಣುವ ಮರದ ಮೇಲ್ಭಾಗಕ್ಕಿಂತ, ಭೂಮಿಯ ಆಳಕ್ಕಿಳಿದು ಹೋಗುವ ಅದರ ಬೇರುಗಳು ತುಂಬಾ ಮುಖ್ಯ. ಯಾವ ಮರದ ಬೇರು ಆಳವಾಗಿರುತ್ತದೋ, ಅದು ಮಾತ್ರ ಎಂತಹ ಭೀಕರ ಬಿರುಗಾಳಿ, ಮಳೆ, ಪ್ರಕೃತಿಯ ಏರುಪೇರುಗಳನ್ನು ತಡೆದು ತಲೆಯೆತ್ತಿ ನಿಲ್ಲಬಲ್ಲದು.

ಬದುಕಿನ ಸ್ಥಿತಿಸ್ಥಾಪಕತ್ವಕ್ಕೆ ಬೇರುಗಳೇ ಶಕ್ತಿ ಎಂಬ ಸತ್ಯವನ್ನು ಪ್ರಕೃತಿ ನನಗೆ ಅಪ್ಪನ ಮೂಲಕ ಕಲಿಸಿಕೊಟ್ಟಿತು. ಅಂದಿನಿಂದ ಪ್ರಕೃತಿ ನನ್ನ ಕೇವಲ ಸುತ್ತಮುತ್ತಲಿನ ಪರಿಸರವಾಗುಳಿಯದೆ, ನನ್ನ ಒಡನಾಡಿಯಾಯಿತು. ಭೂಮಿ, ಆಕಾಶ, ಪಂಚಭೂತಗಳೆಲ್ಲವೂ ನನ್ನ ಅಸ್ತಿತ್ವದ ಭಾಗವೇ ಆದವು.​ಈ ದಿನ, ನನ್ನನ್ನು ಇಷ್ಟು ಸುಂದರವಾಗಿ ರೂಪಿಸಿದ ಈ ಪರಿಸರಕ್ಕೆ ಮತ್ತು ಈ ಮಹಾನ್ ಪಾಠವನ್ನು ಧಾರೆ ಎರೆದ ನನ್ನ ಅಪ್ಪನಿಗೆ ನಾನು ಮನತುಂಬಿ ಕೃತಜ್ಞತೆ ಸಲ್ಲಿಸುತ್ತೇನೆ.

ಪರಿಸರವನ್ನು ರಕ್ಷಿಸುವುದು ಎಂದರೆ ಕೇವಲ ಗಿಡ ನೆಡುವುದಲ್ಲ; ಅದೊಂದು ಮಾನವೀಯ ದೃಷ್ಟಿಕೋನ. ನಾವು ಮನುಷ್ಯರ ಪರವಾಗಿ ಮಿಡಿಯುವಂತೆ, ಈ ಪ್ರಕೃತಿಯ ನೋವಿಗೂ ಮಿಡಿಯಬೇಕು. ಈ ಸುಂದರ ಸೃಷ್ಟಿಯನ್ನು ಪ್ರೀತಿಯಿಂದ ಪೋಷಿಸಿ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಇನ್ನಾದರೂ ಪರಿಸರವನ್ನು ಜೋಪಾನವಾಗಿಟ್ಟುಕೊಳ್ಳೋಣವೇ.

(ಅಪ್ಪ ಬದುಕಿರುವವರೆಗೂ ಜೂನ್ 5 ಅನ್ನು ಸಂಭ್ರಮಿಸಿದ ಪರಿ, ವನಮಹೋತ್ಸವಕ್ಕೆ ಅವರು ಸಿದ್ಧತೆ ನಡೆಸುತ್ತಿದ್ದಂತಹ ರೀತಿ.. ಅವಿಸ್ಮರಣೀಯ… ನನ್ನಪ್ಪ ಇಂದಿಲ್ಲ…ಆದರೆ ಅವರೇ ಕೈಯಾರೆ ನೆಟ್ಟ ಅದೆಷ್ಟೋ ಮರಗಳು ನಮ್ಮ ಅಪ್ಪುಗೆಗೂ ಮೀರಿ ಮುಗಿಲನ್ನು ಅಪ್ಪಿ ನಿಂತಿವೆ… ಅಪ್ಪ… ಮಿಸ್ ಯು …) 

ಬರಹ : ಅಂತೋನಿಯ ಪುನೀತ ಖ್ಯಾತ ಬರಹಗಾರರು

Forester’s Daughter Shares Touching Story