ಸೊರಬ / ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಬಸ್ತಿಕೊಪ್ಪ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗದಲ್ಲಿ ಅಪಾಯಕಾರಿ ಸ್ಫೋಟಕಗಳು ಪತ್ತೆಯಾದ ಬಗ್ಗೆ ವರದಿಯಾಗಿದ್ದು, ಈ ಕುರಿತು ಎಫ್ಐಆರ್ ಸಹ ದಾಖಲಾಗಿದೆ. ಸೊರಬ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ಎಂ.ಹೆಚ್. ಅವರು ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಮುಟೋ ಕೇಸ್ ಬುಕ್ ಆಗಿದೆ.
ಸರ್ಕಾರಿ ಗೋಮಾಳದಲ್ಲಿ ಗಣಿಗಾರಿಕೆ ಬಳಸಿದ್ದ ಸ್ಪೋಟಕ
ಮೇ 15, 2026 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಿ.ಎಸ್.ಐ ನವೀನ್ ಎಂ.ಹೆಚ್. ಮತ್ತು ಪೊಲೀಸ್ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಅಕ್ರಮ ಸ್ಫೋಟಕ ಸಂಗ್ರಹದ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಷಯ ಸಿಕ್ಕ ಬೆನ್ನಲ್ಲೆ ಸ್ಥಳಕ್ಕೆ ಪೊಲೀಸರು ರೇಡ್ ನಡೆಸಿದ್ದರು. ಸ್ಥಳಕ್ಕೆ ತೆರಳಿದ್ದಾಗ ಅವರಿಗೆ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಕಂಡು ಬಂದಿದೆ. ಅಲ್ಲದೆ ಬಂಡೆಗಳಿಗೆ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿ ಸ್ಫೋಟಿಸಲು ಸಿದ್ಧತೆ ಮಾಡಿಕೊಳ್ತಿರುವುದು ತಿಳಿದುಬಂದಿದೆ.
ಇಷ್ಟೆ ಅಲ್ಲದೆ ಶಿವಮೊಗ್ಗದ ಮೂಲದ ವ್ಯಕ್ತಿಯೊಬ್ಬರು ಕಲ್ಲು ಬಂಡೆ ಒಡೆಯಲು ಎಲೆಕ್ಟ್ರಿಕಲ್ ಡೆಟೋನೆಟರ್ ಹಾಗೂ ಜಿಲೆಟಿನ್ ಪೇಸ್ಟ್ ತುಂಬಿ ಹೋಗಿರುವ ವಿಚಾರ ಗೊತ್ತಾಗಿದೆ. ಅಲ್ಲದೆ ಸ್ಥಳದಲ್ಲಿಯೇ ಉಪಯೋಗಿಸದ ಜಿಲೆಟಿನ್ ಪೇಸ್ಟ್ ಬಿದ್ದಿರುವುದು ಕಾಣಿಸಿದೆ.
ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಮನುಷ್ಯನ ಪ್ರಾಣಹಾನಿ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯಾಗುವ ರೀತಿಯಲ್ಲಿ ಸ್ಫೋಟಕ್ಕೆ ತಯಾರಿ ನಡೆಸಲಾಗಿತ್ತು ಎಂಬುದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಕಾನೂನು ಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸ್ವಾದೀನದಲ್ಲಿಟ್ಟುಕೊಂಡಿದ್ದಕ್ಕಾಗಿ ಆರೋಪಿಗಳ ವಿರುದ್ಧ 1884ರ ಸ್ಫೋಟಕ ಕಾಯ್ದೆ (Explosive Act) ಸೆಕ್ಷನ್ 9B(1)(b), 9B(1)(c) ಅಡಿಯಲ್ಲಿ ಸುಮುಟೋ ಎಫ್ಐಆರ್ ದಾಖಲಿಸಿದ್ದಾರೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
