ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಾಲೂಕಿನ ಆಗುಂಬೆ ಸಮೀಪ ಕಳೆದ 21 ನೇ ತಾರೀಖು ಮನೆಗೆ ನುಗ್ಗಿ ದರೋಡೆ ನಡೆಸಿದ ಘಟನೆಯೊಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೆ ಸ್ಥಳಕ್ಕೆ ಎಸ್ಪಿ ನಿಖಿಲ್ ಬಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಘಟನೆ ಮಲೆನಾಡಿನ ಒಂಟಿ ಮನೆಗಳಿಗೆ ಮತ್ತೆ ಆತಂಕದ ಛಾಯೆ ಮೂಡಿಸಿದೆ.
ಒಂಟಿಮನೆಗೆ ನುಗ್ಗಿ ವೃದ್ಧೆಯನ್ನ ಕಟ್ಟಿಹಾಕಿ ದರೋಡೆ
ಇಲ್ಲಿನ ಲಕ್ಕುಂದ ಗ್ರಾಮದ ಹುಂಚಿ ಎಂಬಲ್ಲಿ ಮಟಮಟ ಮಧ್ಯಾಹ್ನದ ವೇಳೆ 74 ವರ್ಷದ ವೃದ್ಧೆಯ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ವೃದ್ಧೆಯ ಮೇಲೆ ಹಲ್ಲೆ ನಡೆಸಿ, ಕೈಕಟ್ಟಿ ಹಾಕಿ ದರೋಡೆ ಎಸೆಗಿದ್ದಾರೆ. ಹುಂಚಿ ಗ್ರಾಮದ ನಿವಾಸಿ ವಿಶಾಲಾಕ್ಷಿ ದರೋಡೆಗೊಳಗಾದ ವೃದ್ಧೆ. ಇವರ ಅಳಿಯ ಆದಿತ್ಯ ಎ.ಜಿ. ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕುಡಿಯೋಕೆ ನೀರು ಕೇಳಿದ ದುಷ್ಕರ್ಮಿಗಳು
ವಿಶಾಲಾಕ್ಷಿ ಅವರ ಪತಿ 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಮಕ್ಕಳಿಲ್ಲದ ಕಾರಣ ಅಳಿಯ ಆದಿತ್ಯ ಹುಂಚಿಯಲ್ಲಿ ನಿರ್ಮಿಸಿಕೊಟ್ಟಿದ್ದ ಒಂಟಿ ಮನೆಯಲ್ಲಿ ವಾಸವಿದ್ದರು. ಕಳೆದ ಏಪ್ರಿಲ್ 21 ರಂದು ಮಧ್ಯಾಹ್ನ ಅಂದಾಜು 03-00 ರಿಂದ 03-30 ರ ಸಮಯ. ವಿಶಾಲಾಕ್ಷಿ ಬಾಗಿಲು ಹಾಕಿಕೊಂಡು ಮಲಗಿದ್ದಾಗ, ಮೂವರು ಅಪರಿಚಿತರು ಬಾಗಿಲು ಬಡಿದಿದ್ದಾರೆ. ಎದ್ದು ಬಂದು ಕಿಟಕಿಯಿಂದ ನೋಡಿದ ವಿಶಾಲಾಕ್ಷಿಯವರಿಗೆ ಆರೋಪಿಗಳು ಕುಡಿಯಲು ನೀರು ಕೇಳಿದ್ದಾರೆ. ಅವರ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶಾಲಾಕ್ಷಿ ನಲ್ಲಿಯಲ್ಲಿ ನೀರು ಕುಡಿಯುವಂತೆ ವೃದ್ಧೆ ಹೇಳಿ ಅಲ್ಲಿಂದ ತೆರಳಿದ್ದಾರೆ.

ಆ ಬಳಿಕ 05-10 ನಿಮಿಷಗಳ ಕಾಲ ಹೊರಗೆ ಯಾವುದೇ ಶಬ್ದ ಕೇಳಿಸದಿದ್ದನ್ನು ಗಮನಿಸಿ ವಿಶಾಲಾಕ್ಷಿ ಹಿಂಬದಿ ಬಾಗಿಲು ತೆಗೆದು ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಆ ವೇಳೆ ಅಲ್ಲೇ ನಿಂತಿದ್ದ ಮೂವರು ದುಷ್ಕರ್ಮಿಗಳು ಏಕಾಏಕಿ ವೃದ್ಧೆಯನ್ನು ಒಳಗೆ ತಳ್ಳಿ, ಮನೆಯೊಳಗೆ ನುಗ್ಗಿದ್ದಾರೆ. ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಿ ಕಟ್ಟಿಹಾಕಿದ್ದಾರೆ.
ಚಿನ್ನಾಭರಣ ದೋಚಿದ ಕಳ್ಳರು
ಬೆಡ್ ರೂಮಿನಲ್ಲಿದ್ದ ಬೀರುವಿನಲ್ಲಿದ್ದ 04 ಪವನ್ ತೂಕದ ಬಳೆ, 02 ಪವನ್ ತೂಕದ ಓಲೆ, 04 ಗ್ರಾಂ ತೂಕದ ಕಿವಿಪ್ಲೇಟ್, 06 ಗ್ರಾಂ ತೂಕದ ಉಂಗುರ ಹಾಗೂ 50000 ರೂಪಾಯಿ ಕ್ಯಾಶ್ , ವೃದ್ಧೆಯ ಮೈಮೇಲಿದ್ದ 04 ಪವನ್ ತೂಕದ ಚೈನ್, 06 ಪವನ್ ತೂಕದ ಕೈಬಳೆ, 01 ಪವನ್ ತೂಕದ ಕಿವಿ ಓಲೆಗಳನ್ನು ಕಿತ್ತುಕೊಂಡಿದ್ದಾರೆ. ಆನಂತರ ಪರ್ಸ್ನಲ್ಲಿದ್ದ 1000 ರೂಪಾಯಿಯನ್ನೂ ಬಿಡದ ದುಷ್ಕರ್ಮಿಗಳು ಕೀಪ್ಯಾಡ್ ಮೊಬೈಲ್ ಸಹ ಕದ್ದೊಯ್ದಿದ್ದಾರೆ.

ಜೀವ ಉಳಿದಿದ್ದೆ ಹೆಚ್ಚು
ಆರೋಪಿಗಳು ವೃದ್ಧೆಯನ್ನು ಕಟ್ಟಿಹಾಕಿ ಅಡುಗೆ ಮನೆಯಲ್ಲಿ ಇರಿಸಿದ್ದರು. ಕಳ್ಳರು ಹೋಗಿ ಸುಮಾರು ಹೊತ್ತಾದ ಬಳಿಕ ಕೈಕಟ್ಟನ್ನ ಬಿಡಿಸಿಕೊಂಡ ವೃದ್ಧೆ ಕತ್ತಿಯಿಂದ ಬಾಗಿಲನ್ನು ತೂತ ಮಾಡಿ ಚಿಲಕ ತೆಗೆದು ಹೊರಬಂದಿದ್ದಾರೆ. ಬಳಿಕ ಗ್ರಾಮದ ಅನಿತಾ ಎಂಬುವವರಿಗೆ ವಿಷಯ ತಿಳಿಸಿದ್ದಾರೆ. ಆನಂತರ ಅಳಿಯನಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ಜಿ. ಪಾರ್ವತಮ್ಮ (BNS) ಕಾಯ್ದೆ 329(4), 127(2), 309(6), 3(5) ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw