ಭದ್ರಾ ಡ್ಯಾಮ್​ ಬಳಿಯಲ್ಲೇ ಸ್ಪೋಟಕ ಬಳಸಿ ಗುಂಡಿ ತೋಡಿದ್ರಾ!? ಏನಿದು ಆರೋಪ! ಆಕ್ರೋಶ ಏಕೆ?

Blasting Work Near Bhadra dam / ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾ ಜಲಾಶಯ / ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಿಂದ ಕೇವಲ 800 ಮೀಟರ್ ದೂರದಲ್ಲಿ ಜಾಕ್‌ವೆಲ್ ನಿರ್ಮಾಣಕ್ಕಾಗಿ ಜಿಲೆಟಿನ್ ಮುಂತಾದ ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ಸಿಡಿಸುತ್ತಿರುವುದು ಭದ್ರಾ ಡ್ಯಾಂನ ನೀರನ್ನೆ ನೆಚ್ಚಿಕೊಂಡಿರುವ ಜಿಲ್ಲೆಗಳಲ್ಲಿ ಆತಂಕ ಹಾಗೂ ಅಸಮಾಧಾನ ಎರಡು ಮೂಡಿಸಿದೆ. ಈ ಸಂಬಂಧ ನಿನ್ನೆ ದಿನ ಬಿಜೆಪಿ ಮುಖಂಡ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಭದ್ರಾ ಡ್ಯಾಂಗೆ ಭೇಟಿಕೊಟ್ಟು ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ಕಳೆದ ವರ್ಷವೂ ಸಹ ಇದೇ ಮಾದರಿಯಲ್ಲಿ ಭದ್ರಾ ಜಲಾಶಯ ದಾವಣಗೆರೆ ಸೇರಿದಂತೆ ಭದ್ರಾ ಜಲಾನಯನ ಪ್ರದೇಶಗಳ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಅದೇ ಸನ್ನಿವೇಶ ತಯಾರಾಗಿದೆ.

ಭದ್ರಾ ಡ್ಯಾಂ ಎದುರಿಗೆ ಜಾಕ್​ವೆಲ್​ ನಿರ್ಮಾಣ

ಇನ್ನೂ ಸ್ಥಳಕ್ಕೆ ಭೇಟಿಕೊಟ್ಟು ಮಾತನಾಡಿರುವ ಎಂಪಿ ರೇಣುಕಾಚಾರ್ಯ, ಕುಡಿಯುವ ನೀರಿನ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಜಲಾಶಯದ ಸಮೀಪವೇ ಸ್ಫೋಟಕಗಳನ್ನು ಬಳಸುವುದು ಎಷ್ಟು ಸರಿ. ಈ ಸ್ಫೋಟಕಗಳ ಬಳಕೆಯಿಂದ ಅಣೆಕಟ್ಟಿಗೆ ಯಾವುದೇ ರೀತಿಯ ಅಪಾಯವಿದೆಯೇ ಎಂಬುದನ್ನು ಜನರಿಗೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಅಲ್ಲಿಯವರೆಗೆ ಸ್ಫೋಟಕಗಳನ್ನು ಬಳಸುವ ಕಾಮಗಾರಿಯನ್ನು ತಕ್ಷಣವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಕುಡಿಯುವ ನೀರು ಪೂರೈಸುವ ಯಾವುದೇ ಯೋಜನೆಯ ವಿರುದ್ಧ ನಮ್ಮ ವಿರೋಧವಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಶುದ್ಧವಾದ ಕುಡಿಯುವ ನೀರು ಸಿಗಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವಾಗಿದೆ. ಆದರೆ, ಭದ್ರಾ ಡ್ಯಾಂನ ಸುರಕ್ಷತೆಗೆ ಅಪಾಯ ತಂದೊಡ್ಡುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಭದ್ರಾ ಜಲಾಶಯ ಕೇವಲ ಒಂದು ನಿರ್ಮಾಣವಲ್ಲ, ಬದಲಾಗಿ ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಹಾಗೂ ಹರಪನಹಳ್ಳಿ ಸೇರಿದಂತೆ ಹಲವು ಭಾಗಗಳ ರೈತರ ಬದುಕಿನ ಆಸರೆಯಾಗಿದೆ. ಅಣೆಕಟ್ಟಿನ ಸುರಕ್ಷತೆಗೆ ಭವಿಷ್ಯದಲ್ಲಿ ಏನಾದರೂ ಹಾನಿಯಾದರೆ, ಅದು ಸಾವಿರಾರು ಕೃಷಿಕರ ಕುಟುಂಬಗಳ ಜೀವನೋಪಾಯದ ಮೇಲೆ ನೇರವಾದ ದುಷ್ಪರಿಣಾಮ ಬೀರಲಿದೆ.

ಎಂ.ಪಿ ರೇಣುಕಾಚಾರ್ಯ, ಮಾಜಿ ಸಚಿವ

ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ರೈತ ಮುಖಂಡ ಬಸವರಾಜ್ ನಾಯಕ್, ರೈತ ಮುಖಂಡರಾದ ಕೊಳನಹಳ್ಳಿ ಸತೀಶ್, ಲೋಕಿಕೆರೆ ನಾಗರಾಜ್, ಚಂದ್ರಶೇಖರ್ ಪೂಜಾರ್ ಹಾಗೂ ಕಡ್ಲೆಬಾಳ್ ಧನಂಜಯ್ ಉಪಸ್ಥಿತರಿದ್ದರು.

Whatsapp / https://chat.whatsapp.com/JrsZ8He4nN600n0r3tJItz