ಶಿವಮೊಗ್ಗ : ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹೆಸರು ಹಾಗೂ ಅವರ ಪೋಟೋವನ್ನು ದುರುಪಯೋಗಪಡಿಸಿಕೊಂಡು, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರಿಗೆ ನಕಲಿ ವಾಟ್ಸಾಪ್ ಮೆಸೇಜ್ ಕಳುಹಿಸಿ ಹಣ ವಂಚಿಸಲು ಯತ್ನಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಈ ಪ್ರದೇಶಗಳಲ್ಲಿ ಮೇ 31 ರಂದು ವಿದ್ಯುತ್ ವ್ಯತ್ಯಯ
Cyber Frauds ಘಟನೆಯ ವಿವರ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ಈ ಕುರಿತು ದೂರನ್ನು ನೀಡಿದ್ದಾರೆ. ಎಫ್ ಐ ಆರ್ನಲ್ಲಿರುವಂತೆ ಸೈಬರ್ ವಂಚಕರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ಜಿ.ಎ. ಅವರ ಹೆಸರು ಹಾಗೂ ಪೋಟೋವನ್ನು ಕದ್ದು ಬಳಸಿಕೊಂಡಿದ್ದಾರೆ. ನಂತರ ವಿದೇಶಿ ಕೋಡ್ ಹೊಂದಿರುವಮೊಬೈಲ್ ಸಂಖ್ಯೆಯ ಮೂಲಕ ನಕಲಿ ವಾಟ್ಸಾಪ್ ಖಾತೆಯನ್ನು ತೆರೆದು, ಅದಕ್ಕೆ ನ್ಯಾಯಾಧೀಶರ ಡಿಪಿ ಅಳವಡಿಸಿದ್ದಾರೆ.
ಬಳಿಕ ತಾವೇ ನ್ಯಾಯಾಧೀಶರಂತೆ ನಟಿಸಿ, ನ್ಯಾಯಾಲಯದ ಸಿಬ್ಬಂದಿಗಳಿಗೆ ಮತ್ತು ವಕೀಲರಿಗೆ ವಾಟ್ಸಾಪ್ ಮೂಲಕ ಸಂದೇಶಗಳನ್ನು ರವಾನಿಸಿದ್ದಾರೆ. ಅರ್ಜೆಂಟಾಗಿ ಈ ಮೇಸೇಜ್ನಲ್ಲಿ ನಮೂದಿಸಿರುವ ಅಕೌಂಟ್ ನಂಬರ್ಗೆ 50,000 ರೂಪಾಯಿ ಹಣವನ್ನು ಕಳುಹಿಸಿ ಎಂದು ತುರ್ತು ಹಣದ ಬೇಡಿಕೆ ಇಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ವಂಚನೆಯ ಜಾಲವನ್ನು ಸಕಾಲದಲ್ಲಿ ಗುರುತಿಸಿದ್ದರಿಂದ ಸದ್ಯಕ್ಕೆ ಯಾವುದೇ ಆರ್ಥಿಕ ನಷ್ಟ ಸಂಭವಿಸಿದ ವರದಿಯಾಗಿಲ್ಲ. ಸದ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
